ಚೆನ್ನೈ: ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯ ವಿರುದ್ಧ ರಣಕಹಳೆ ಮೊಳಗಿಸಿರುವ ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್(MK Stalin) ಅವರು ಪ್ರಸ್ತಾವಿತ ನೀತಿಯ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಿ ಒಂದು ಸಂಯುಕ್ತ ರಂಗ ರಚಿಸಬೇಕೆಂದು ಕರೆ ನೀಡಿದ್ದಾರೆ. ಕೇಂದ್ರ ಸರ್ಕಾರದ ನೀತಿಯನ್ನು “ಅನ್ಯಾಯ” ಎಂದು ಕರೆದಿರುವ ಅವರು, ಈ ಸಮಸ್ಯೆಯ ಪರಿಹಾರಕ್ಕಾಗಿ ಜಂಟಿ ಕ್ರಿಯಾ ಸಮಿತಿ (ಜೆಎಸಿ) ರಚಿಸುವ ಬಗ್ಗೆಯೂ ಘೋಷಿಸಿದ್ದಾರೆ.
ಚೆನ್ನೈನ ನಾಮಕ್ಕಲ್ ಕವಿಂಗರ್ ಹಾಲ್ನಲ್ಲಿ ಸಿಎಂ ಸ್ಟಾಲಿನ್ ಕರೆದಿದ್ದ ಸರ್ವಪಕ್ಷ ಸಭೆಯ ನಂತರ ಈ ಪ್ರಸ್ತಾಪವನ್ನು ಅವರು ಮುಂದಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಭವಿಷ್ಯದ ಜನಗಣತಿಯ ಆಧಾರವೊಂದನ್ನೇ ಇಟ್ಟುಕೊಂಡು ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯನ್ನು ತಮಿಳುನಾಡು ವಿರೋಧಿಸಲಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ 123 ರಾಜಕೀಯ ಪಕ್ಷಗಳ ನಾಯಕರು ಹೇಳಿದರು.
ತಮಿಳುನಾಡು ಮತ್ತು ದಕ್ಷಿಣದ ಇತರ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡುವ ಯಾವುದೇ ಡಿಲಿಮಿಟೇಶನ್(Delimitation) ಪ್ರಕ್ರಿಯೆಯನ್ನು ಸಭೆಯಲ್ಲಿ ಸರ್ವಾನುಮತದಿಂದ ತಿರಸ್ಕರಿಸಲಾಯಿತು. ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಕ್ಕಾಗಿ ರಾಜ್ಯಗಳಿಗೆ ದಂಡ ವಿಧಿಸುವುದು ಅನ್ಯಾಯ ಮತ್ತು ಭಾರತದ ಒಕ್ಕೂಟ ವ್ಯವಸ್ಥೆಗೆ ಇದು ನೇರ ಬೆದರಿಕೆಯಾಗಿದೆ ಎಂದು ಸಭೆಯಲ್ಲಿದ್ದ ಎಲ್ಲ ನಾಯಕರೂ ವಾದಿಸಿದರು.
ಇದನ್ನೂ ಓದಿ: Language row: ಮುಂಬೈನಲ್ಲಿ ವಾಸಿಸಲು ಮರಾಠಿ ಗೊತ್ತಿರಬೇಕಾಗಿಲ್ಲ: ಆರ್ಎಸ್ಎಸ್ ನಾಯಕ ವಿವಾದ
ಸಭೆಯ ನಿರ್ಣಯಗಳೇನು?
1971 ರ ಜನಸಂಖ್ಯಾ ಅಂಕಿಅಂಶಗಳ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮೇಲೆ ಪ್ರಸ್ತುತ ಹೇರಲಾಗಿರುವ ತಡೆಯನ್ನು 2026ರಾಚೆಗೂ ವಿಸ್ತರಿಸಬೇಕು. ಡಿಲಿಮಿಟೇಶನ್(Delimitation) ಪ್ರಸ್ತಾಪಕ್ಕೆ ಸಾಮೂಹಿಕ ವಿರೋಧವನ್ನು ವ್ಯಕ್ತಪಡಿಸುವ ಉದ್ದೇಶದಿಂದ ಇತರೆ ರಾಜ್ಯಗಳೊಂದಿಗೆ ತಕ್ಷಣವೇ ತೊಡಗಿಸಿಕೊಳ್ಳಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಈ ಪ್ರಯತ್ನವನ್ನು ಬಲಪಡಿಸಲು, ತಮಿಳುನಾಡಿನ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಂಟಿ ಕ್ರಿಯಾ ಸಮಿತಿಯನ್ನು ರಚಿಸಲು ಸಭೆ ನಿರ್ಧರಿಸಿತು. ಇದಕ್ಕಾಗಿ ಭಾರತದಾದ್ಯಂತ ಸಮಾನ ಮನಸ್ಕ ಪಕ್ಷಗಳಿಗೆ ಆಹ್ವಾನ ನೀಡಿತು. ಸಭೆಯಲ್ಲಿ ತಲುಪಿದ ಒಮ್ಮತದ ಆಧಾರದ ಮೇಲೆ ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸ್ಟಾಲಿನ್ ಭರವಸೆ ನೀಡಿದರು.
ಮುಂಬರುವ ದಿನಗಳಲ್ಲಿ, ಜೆಎಸಿ(ಜಂಟಿ ಕ್ರಿಯಾ ಸಮಿತಿ)ಯಲ್ಲಿ ಭಾಗವಹಿಸುವಂತೆ ಕೋರಿ ದಕ್ಷಿಣ ಭಾರತದ ಇತರ ರಾಜ್ಯಗಳ ರಾಜಕೀಯ ಪಕ್ಷಗಳೊಂದಿಗೆ ಅಧಿಕೃತ ಸಂಪರ್ಕವನ್ನು ತಮಿಳುನಾಡು(TamilNadu) ಸಾಧಿಸಲಿದೆ. ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯವನ್ನು ರಕ್ಷಿಸಲು ಮತ್ತು ದೇಶದ ಚುನಾವಣಾ ವ್ಯವಸ್ಥೆಯಲ್ಲಿ ನ್ಯಾಯಸಮ್ಮತತೆ ಮತ್ತು ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಬಲಪಡಿಸಲು ಸಂಘಟಿತ ಪ್ರಯತ್ನವನ್ನು ಈ ಮೂಲಕ ಮಾಡಲಾಗುತ್ತದೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.