ಕೋಲ್ಕತ್ತಾ: ಇಲ್ಲಿನ ಪ್ರಸಿದ್ಧ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ಐಪಿಎಲ್ ಟೂರ್ನಿಯ ಪಂಜಾಬ್ ಕಿಂಗ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.
ತಂಡದ ಪ್ರಮುಖ ಸ್ಪಿನ್ ಅಸ್ತ್ರಗಳಾದ ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಅವರು ಏಕಕಾಲದಲ್ಲಿ ಪ್ಲೇಯಿಂಗ್ ಇಲೆವೆನ್ನಿಂದ ಹೊರಗುಳಿದಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಇಬ್ಬರೂ ಅನುಭವಿ ಸ್ಪಿನ್ನರ್ಗಳಿಲ್ಲದೆ ಕೆಕೆಆರ್ ತಂಡ ಕಣಕ್ಕಿಳಿದಿರುವುದು ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಆತಂಕ ಮೂಡಿಸಿದೆ. ಕೋಲ್ಕತ್ತಾ ಪಿಚ್ ಸಾಮಾನ್ಯವಾಗಿ ಸ್ಪಿನ್ನರ್ಗಳಿಗೆ ಹೆಚ್ಚು ನೆರವು ನೀಡುವುದರಿಂದ ಈ ಇಬ್ಬರು ಘಟಾನುಘಟಿಗಳ ಅನುಪಸ್ಥಿತಿ ತಂಡದ ಬೌಲಿಂಗ್ ವಿಭಾಗವನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿದಂತೆ ಭಾಸವಾಗುತ್ತಿದೆ.
ಪಂದ್ಯದ ಟಾಸ್ ಪ್ರಕ್ರಿಯೆ ವೇಳೆ ಮಾತನಾಡಿದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ, ಈ ಅನಿವಾರ್ಯ ಬದಲಾವಣೆಗಳ ಹಿಂದಿನ ಕಾರಣವನ್ನು ಸ್ಪಷ್ಟಪಡಿಸಿದರು. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವಾಗ ವರುಣ್ ಚಕ್ರವರ್ತಿ ಅವರು ಗಾಯಗೊಂಡಿದ್ದರು. ಮತ್ತೊಂದೆಡೆ, ಅನಾರೋಗ್ಯದ ಕಾರಣದಿಂದಾಗಿ ಸುನಿಲ್ ನರೈನ್ ಈ ಪಂದ್ಯಕ್ಕೆ ಲಭ್ಯರಿರಲಿಲ್ಲ.
ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಇದೀಗ ಕೆಕೆಆರ್ ತಂಡದಲ್ಲಿ ಅನುಕುಲ್ ರಾಯ್ ಮಾತ್ರ ಏಕೈಕ ಪರಿಣಿತ ಸ್ಪಿನ್ನರ್ ಆಗಿ ಉಳಿದುಕೊಂಡಿದ್ದಾರೆ. ಸ್ಪಿನ್ನರ್ಗಳ ಕೊರತೆಯನ್ನು ನೀಗಿಸಲು ತಂಡದ ಆಡಳಿತ ಮಂಡಳಿಯು ವಿಂಡೀಸ್ನ ದೈತ್ಯ ಆಲ್ರೌಂಡರ್ ರೋವ್ಮನ್ ಪೊವೆಲ್ ಮತ್ತು ಭಾರತದ ವೇಗದ ಬೌಲರ್ ನವದೀಪ್ ಸೈನಿ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಂಡಿದೆ. ವಿಶೇಷವೆಂದರೆ, ಈ ಪಂದ್ಯದ ಮೂಲಕ ನವದೀಪ್ ಸೈನಿ ಕೆಕೆಆರ್ ಫ್ರಾಂಚೈಸಿ ಪರ ತಮ್ಮ ಚೊಚ್ಚಲ ಪಂದ್ಯವನ್ನಾಡುತ್ತಿದ್ದಾರೆ. ಬಿಳಿ ಚೆಂಡಿನ ಕ್ರಿಕೆಟ್ನಲ್ಲಿ ಸೈನಿ ಇತ್ತೀಚೆಗೆ ಅದ್ಭುತ ಫಾರ್ಮ್ನಲ್ಲಿದ್ದು, ದೆಹಲಿ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇವಲ ಎಂಟು ಪಂದ್ಯಗಳಲ್ಲಿ ಹನ್ನೆರಡು ವಿಕೆಟ್ಗಳನ್ನು ಕಬಳಿಸುವ ಮೂಲಕ ಗಮನ ಸೆಳೆದಿದ್ದರು ಹಾಗೂ ಟೂರ್ನಿಯ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.
ಏಳು ವರ್ಷದ ಬಳಿಕ ಮರುಕಳಿಸಿದ ಘಟನೆ
ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಏಪ್ರಿಲ್ 2019ರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ ಇದೇ ಮೊದಲ ಬಾರಿಗೆ ನರೈನ್ ಮತ್ತು ಚಕ್ರವರ್ತಿ ಇಬ್ಬರೂ ಏಕಕಾಲದಲ್ಲಿ ಕೆಕೆಆರ್ ಪಂದ್ಯವೊಂದನ್ನು ತಪ್ಪಿಸಿಕೊಂಡಿದ್ದಾರೆ. ಅಂದು ನಡೆದಿದ್ದ ಪಂದ್ಯದಲ್ಲಿ ಕೆಕೆಆರ್ ತಂಡವು ಡೆಲ್ಲಿ ಎದುರು ಏಳು ವಿಕೆಟ್ಗಳ ಹೀನಾಯ ಸೋಲು ಅನುಭವಿಸಿತ್ತು. ಪ್ರಸ್ತುತ 2026ರ ಐಪಿಎಲ್ ಆವೃತ್ತಿಯಲ್ಲೂ ಕೆಕೆಆರ್ ತಂಡದ ಆರಂಭ ಹೇಳಿಕೊಳ್ಳುವಂತಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧದ ಅವೇ ಪಂದ್ಯ ಹಾಗೂ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ತವರಿನ ಪಂದ್ಯದಲ್ಲಿ ನಿರಾಸೆ ಅನುಭವಿಸಿರುವ ಅಜಿಂಕ್ಯ ರಹಾನೆ ಪಡೆ, ಹೇಗಾದರೂ ಮಾಡಿ ಪಂಜಾಬ್ ವಿರುದ್ಧ ಗೆಲುವಿನ ಲಯಕ್ಕೆ ಮರಳಲು ತುದಿಗಾಲಿನಲ್ಲಿ ನಿಂತಿದೆ. ಆದರೆ, ಪ್ರಬಲ ಸ್ಪಿನ್ ಜೋಡಿಯ ಅನುಪಸ್ಥಿತಿ ತಂಡದ ರಕ್ಷಣಾತ್ಮಕ ಯೋಜನೆಗಳ ಮೇಲೆ ಕರಿನೆರಳು ಬೀರಿದೆ ಎಂಬುದು ಸುಳ್ಳಲ್ಲ.
ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಈ ಬಾರಿಯ ಟೂರ್ನಿಯಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಬೀಗುತ್ತಿದೆ. ಕಳೆದ ಬಾರಿಯ ರನ್ನರ್-ಅಪ್ ಆಗಿರುವ ಪಂಜಾಬ್ ತಂಡವು, ತನ್ನ ಅದೇ ಭರ್ಜರಿ ಫಾರ್ಮ್ ಅನ್ನು ಮುಂದುವರಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿತ್ತು.
ಇದನ್ನೂ ಓದಿ : ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಕೆಕೆಆರ್ ಸಿಇಒ ವೆಂಕಿ ಮೈಸೂರ್ ಜೊತೆ ಶಾರುಖ್ ಖಾನ್ ಗರಂ! ವಿಡಿಯೋ ವೈರಲ್!


















