ಶಿಲ್ಲಾಂಗ್: ಇಂದೋರ್ನ ಉದ್ಯಮಿ ರಾಜಾ ರಘುವಂಶಿಯ ಕೊಲೆಗೆ ಸಂಬಂಧಿಸಿದಂತೆ ಆತನ ಪತ್ನಿ ಸೋನಮ್ಳನ್ನು ರಕ್ಷಿಸಲು, ಬೇರೊಬ್ಬ ಯುವತಿಯನ್ನು ಕೊಂದು ಆಕೆಯ ದೇಹವನ್ನು ಸುಟ್ಟುಹಾಕಿ, ಅದು ಸೋನಮ್ಳ ದೇಹವೆಂದು ತೋರಿಸಲು ಆರೋಪಿಗಳು ಸಂಚು ರೂಪಿಸಿದ್ದರು. ಆದರೆ ಈ ಸಂಚು ವಿಫಲವಾಯಿತು ಎಂದು ಮೇಘಾಲಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋನಮ್ನ ಗೆಳೆಯ ರಾಜ್ ಕುಶ್ವಾಹ ಈ ಕೊಲೆಯ ಮಾಸ್ಟರ್ಮೈಂಡ್ ಆಗಿದ್ದು, ಸೋನಮ್ ಸಹ-ಸಂಚುಕೋರಳು ಎಂದೂ ಅವರು ತಿಳಿಸಿದ್ದಾರೆ.
ಇಂದೋರ್ನಲ್ಲಿ ರಾಜಾ ರಘುವಂಶಿ ಮತ್ತು ಸೋನಮ್ನ ಮದುವೆ ನಡೆದ ಕೆಲವೇ ದಿನಗಳಲ್ಲಿ ರಘುವಂಶಿಯ ಕೊಲೆಗೆ ಸಂಚು ರೂಪಿಸಲಾಗಿತ್ತು. ಅಂದರೆ, ಮೇ 11ಕ್ಕೂ ಮುನ್ನವೇ ಎಲ್ಲ ಸಿದ್ಧತೆ ನಡೆಸಲಾಗಿತ್ತು ಎಂದು ಪೊಲೀಸ್ ಸೂಪರಿಂಟೆಂಡೆಂಟ್ ವಿವೇಕ್ ಸೈಯಂ ತಿಳಿಸಿದ್ದಾರೆ. ರಾಜ್ ಕುಶ್ವಾಹನೇ ಈ ಸಂಚಿನ ಮುಖ್ಯ ಸೂತ್ರಧಾರಿಯಾಗಿದ್ದು, ಸೋನಮ್ ಇದಕ್ಕೆ ಸಾಥ್ ನೀಡಿದ್ದಳು.
ರಾಜಾ ರಘುವಂಶಿ (29) ಮತ್ತು ಸೋನಮ್ (24) ಮದುವೆಯಾದ ಕೆಲವೇ ದಿನಗಳಲ್ಲಿ ಮೇಘಾಲಯದ ಸೋಹ್ರಾಕ್ಕೆ ಭೇಟಿ ನೀಡಿದ್ದರು. ಮೇ 23ರಂದು ಇಬ್ಬರೂ ಕಾಣೆಯಾದರು. ಜೂನ್ 2ರಂದು ರಾಜಾನ ದೇಹವು ವೈಸಾವ್ಡಾಂಗ್ ಜಲಪಾತದ ಬಳಿಯ ಒಂದು ಕಂದಕದಲ್ಲಿ ಪತ್ತೆಯಾಯಿತು, ಆದರೆ ಸೋನಮ್ಗಾಗಿ ಹುಡುಕಾಟ ಮುಂದುವರಿದಿತ್ತು.

ಇದರಲ್ಲಿ ಸೋನಮ್ ತಪ್ಪಿಲ್ಲ ಎಂದು ನಂಬಿಸಲು ಎರಡು ಯೋಜನೆಗಳನ್ನು ರೂಪಿಸಲಾಗಿತ್ತು: ಒಂದು, ಆಕೆಯನ್ನು ನದಿಯಲ್ಲಿ ಕೊಚ್ಚಿಹೋದಳೆಂದು ತೋರಿಸುವುದು; ಇನ್ನೊಂದು, ಬೇರೆ ಯಾವುದಾದರೂ ಮಹಿಳೆಯನ್ನು ಕೊಂದು ಆಕೆಯ ದೇಹವನ್ನು ಸುಟ್ಟು ಸೋನಮ್ಳದ್ದೆಂದು ತೋರಿಸುವುದು. ಆದರೆ, ಈ ಯೋಜನೆಗಳು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನವವಿವಾಹಿತ ದಂಪತಿಗಳು ಮೇ 19ರಂದು ಅಸ್ಸಾಂಗೆ ಆಗಮಿಸುವ ಮೊದಲೇ ಈ ಗುಂಪು ಗುವಾಹಟಿಯಲ್ಲಿ ರಾಜಾನ ಕೊಲೆ ಮಾಡಲು ಯೋಜಿಸಿತ್ತು. ಆದರೆ, ಅದು ಕಾರ್ಯಗತಗೊಳ್ಳದಿದ್ದಾಗ, ಸೊನಮ್ ಶಿಲ್ಲಾಂಗ್ ಮತ್ತು ಸೋಹ್ರಾಕ್ಕೆ ಭೇಟಿ ನೀಡಲು ಯೋಜನೆ ರೂಪಿಸಿದಳು. ಎಲ್ಲರೂ ನಾಂಗ್ರಿಯಾಟ್ನಲ್ಲಿ ಭೇಟಿಯಾದರು. ಮೇ 23ರಂದು ಮಧ್ಯಾಹ್ನ 2:00 ರಿಂದ 2:18 ರ ನಡುವೆ, ವೈಸಾವ್ಡಾಂಗ್ ಜಲಪಾತಕ್ಕೆ ಒಟ್ಟಿಗೆ ತೆರಳಿದಾಗ, ಮೂವರು ರಾಜಾ ರಘುವಂಶಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದರು.
ಬಳಿಕ ದೇಹವನ್ನು ಕಂದರಕ್ಕೆ ಎಸೆಯಲಾಯಿತು. ಇನ್ನೂ ಒಂದೆರಡು ತಿಂಗಳ ಕಾಲ ಮೃತದೇಹ ಪತ್ತೆಯಾಗಲಿಕ್ಕಿಲ್ಲ ಎಂದೇ ಸೋನಮ್ ಭಾವಿಸಿದ್ದಳು. ಆದರೆ, ಆರೋಪಿಗಳ ಎಲ್ಲ ಯೋಜನೆಗಳೂ ವಿಫಲವಾಗಿ, ಈಗ ಎಲ್ಲರೂ ಕಂಬಿ ಎಣಿಸುವಂತಾಗಿದೆ.