ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದಿರುವಂತೆಯೇ ಭಾರತದ ರಾಜತಾಂತ್ರಿಕತೆಗೆ ಭಾರಿ ಯಶಸ್ಸು ಸಿಕ್ಕಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರೊಂದಿಗೆ ನಡೆಸಿದ ಮಹತ್ವದ ಮಾತುಕತೆಯು ಫಲಪ್ರದವಾಗಿದ್ದು, ಆಯಕಟ್ಟಿನ ‘ಹೊರ್ಮುಜ್ ಜಲಸಂಧಿ’ಯ ಮೂಲಕ ಭಾರತೀಯ ತೈಲ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಇರಾನ್ ಹಸಿರು ನಿಶಾನೆ ತೋರಿದೆ. ಈ ಬೆಳವಣಿಗೆಯು ತೈಲ ಮತ್ತು ಎಲ್ಪಿಜಿ ಕೊರತೆಯಿಂದ ತತ್ತರಿಸಿದ್ದ ಭಾರತಕ್ಕೆ ದೊಡ್ಡ ನಿರಾಳತೆ ತಂದುಕೊಟ್ಟಿದೆ.
ಭಾರತೀಯ ಹಡಗುಗಳಿಗೆ ಮಾತ್ರ ವಿನಾಯಿತಿ
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತದ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತ್ವರಿತಗತಿಯಲ್ಲಿ ಕಾರ್ಯಪ್ರವೃತ್ತವಾಗಿತ್ತು. ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LPG) ಆಮದು ಮಾಡಿಕೊಳ್ಳಲು ಗಲ್ಫ್ ಸಮುದ್ರ ಮಾರ್ಗಗಳ ಮೇಲೆಯೇ ಭಾರತ ಹೆಚ್ಚು ಅವಲಂಬಿತವಾಗಿದೆ. ಇದೀಗ ಇರಾನ್ ಅಧಿಕಾರಿಗಳು ಭಾರತೀಯ ಟ್ಯಾಂಕರ್ಗಳಿಗೆ ಮಾತ್ರ ಈ ಮಾರ್ಗವನ್ನು ಬಳಸಲು ಅನುಮತಿಸಿದ್ದು, ಅಮೆರಿಕ, ಯುರೋಪ್ ಮತ್ತು ಇಸ್ರೇಲ್ ಸಂಪರ್ಕ ಹೊಂದಿರುವ ಹಡಗುಗಳ ಮೇಲೆ ನಿರ್ಬಂಧ ಮುಂದುವರಿಸಿದ್ದಾರೆ. ಈ ಬಿಕ್ಕಟ್ಟಿನ ಬಗ್ಗೆ ಜೈಶಂಕರ್ ಅವರು ರಷ್ಯಾದ ಸೆರ್ಗೆಯ್ ಲಾವ್ರೊವ್ ಮತ್ತು ಫ್ರಾನ್ಸ್ನ ಜೀನ್-ನೋಯೆಲ್ ಬಾರೋಟ್ ಅವರೊಂದಿಗೂ ಸಮಾಲೋಚನೆ ನಡೆಸಿದ್ದು, ಪ್ರಮುಖ ಜಲಮಾರ್ಗಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಿದ್ದಾರೆ.
ಹೊರ್ಮುಜ್ ಜಲಸಂಧಿ ದಿಗ್ಬಂಧನದ ಹಿನ್ನೆಲೆ
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯಾದ ಬೆನ್ನಲ್ಲೇ, ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿದೆ. ಪರಿಣಾಮವಾಗಿ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಿದೆ. ಆ ಜಲಮಾರ್ಗದ ಮೂಲಕ ಹಾದುಹೋಗುವ ಯಾವುದೇ ಹಡಗಿನ ಮೇಲೆ ದಾಳಿ ಮಾಡುವ ಎಚ್ಚರಿಕೆಯನ್ನೂ ನೀಡಿರುವ ಕಾರಣ, ಇದು ಜಾಗತಿಕ ಇಂಧನ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಭಾರತದಲ್ಲೂ ಎಲ್ಪಿಜಿ ಹಾಹಾಕಾರ
ಹೊರ್ಮುಜ್ ಜಲಸಂಧಿಯ ಅಸ್ಥಿರತೆಯಿಂದಾಗಿ ಭಾರತದಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿ, ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿತ್ತು. ಪೂರೈಕೆ ಸ್ಥಗಿತಗೊಂಡ ಕಾರಣ ಬೆಂಗಳೂರು, ಚೆನ್ನೈ ಮತ್ತು ಮುಂಬೈನಂತಹ ಮಹಾನಗರಗಳಲ್ಲಿ ರೆಸ್ಟೋರೆಂಟ್ಗಳು ಮುಚ್ಚುವ ಭೀತಿ ಎದುರಿಸಿದ್ದವು. ಮುಂಬೈನಲ್ಲಿ ಈಗಾಗಲೇ ಶೇ. 20ರಷ್ಟು ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಬಾಗಿಲು ಹಾಕಿದ್ದವು. ಈ ನಡುವೆ ಮಾರ್ಚ್ 7ರಂದು 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆ 60 ರೂ. ಮತ್ತು ವಾಣಿಜ್ಯ ಸಿಲಿಂಡರ್ ಬೆಲೆ 115 ರೂ. ಏರಿಕೆಯಾಗಿತ್ತು. ಪೂರೈಕೆ ಕೊರತೆಯ ಲಾಭ ಪಡೆದ ದಂಧೆಕೋರರು ಕಾಳಸಂತೆಯಲ್ಲಿ ಒಂದೊಂದು ಸಿಲಿಂಡರ್ ಅನ್ನು 2,000 ದಿಂದ 2,500 ರೂಪಾಯಿವರೆಗೆ ಮಾರಾಟ ಮಾಡುತ್ತಿರುವ ಪ್ರಕರಣಗಳೂ ವರದಿಯಾಗಿದ್ದವು.
ವದಂತಿಗಳಿಗೆ ಕಿವಿಗೊಡದಿರಲು ಪ್ರಧಾನಿ ಮೋದಿ ಸೂಚನೆ
ಇರಾನ್ನಿಂದ ಭಾರತದ ಹಡಗುಗಳಿಗೆ ಮುಕ್ತ ಸಂಚಾರದ ರಿಲೀಫ್ ಸಿಗುವ ಕೆಲವೇ ಗಂಟೆಗಳ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಎಲ್ಪಿಜಿ ಪೂರೈಕೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿ ಮತ್ತು ಸುಳ್ಳು ವದಂತಿಗಳನ್ನು ಎದುರಿಸುವಂತೆ ಕೇಂದ್ರ ಸಚಿವರಿಗೆ ಅವರು ಸೂಚಿಸಿದ್ದರು. ಇದು ಜಾಗತಿಕ ಬೆಳವಣಿಗೆಗಳಿಂದಾಗಿ ಎದುರಾದ ಸವಾಲಾಗಿದ್ದು, ಭಾರತಕ್ಕೆ ಮಾತ್ರ ಸೀಮಿತವಾದದ್ದಲ್ಲ. ಇಂತಹ ಯಾವುದೇ ಅಡಚಣೆಗಳನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ಸರ್ವಸನ್ನದ್ಧವಾಗಿದೆ ಎಂದು ಪ್ರಧಾನಿ ಭರವಸೆ ನೀಡಿದ್ದರು.
ಇದನ್ನೂ ಓದಿ : ಹೋಟೆಲ್ನಲ್ಲಿ ತಿಂಡಿ ತಿಂದ್ರೂ ಬೀಳುತ್ತೆ ಗ್ಯಾಸ್ ಸಪ್ಲೈ ಚಾರ್ಜ್!



















