ದಕ್ಷಿಣ ಕನ್ನಡ | ಜಿಲ್ಲೆಯ ಪ್ರಸಿದ್ದ ಯಾತ್ರಾ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇದೀಗ ಈ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲು ನಿಲ್ದಾಣವಾದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ (ನೆಟ್ಟಣ)ದಲ್ಲಿ ಕಂಡುಬಂದಿರುವ ಸಾಲು ಸಾಲು ಅವ್ಯವಸ್ಥೆಗಳು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿವೆ.

ಹೌದು.. ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಒಳಚರಂಡಿ ವ್ಯವಸ್ಥೆಯಲ್ಲಿ ಹಲವಾರು ತಾಂತ್ರಿಕ ದೋಷಗಳಿದ್ದು, ಮರವನ್ನು ಚರಂಡಿಯ ಒಳಗಡೆಯೇ ನಿಲ್ಲಿಸಿ ಅದೇ ಸ್ಥಿತಿಯಲ್ಲೇ ಅದರ ಮೇಲೆ ಕಾಂಕ್ರಿಟ್ ಹಾಕಿರುವುದು ಕೂಡ ಗಮನಕ್ಕೆ ಬಂದಿದೆ. ಪರಿಣಾಮ ಮಳೆ ನೀರು ಹಾಗೂ ಕಸದ ನೀರು ಸಮರ್ಪಕವಾಗಿ ಹರಿಯದೇ ನಿಂತು ದುರ್ವಾಸನೆ ಹರಡುತ್ತಿದೆ. ಇದರಿಂದ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ಬರುವ ಯಾತ್ರಿಕರು ಮೂಗು ಮುಚ್ಚಿಕೊಂಡೇ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ.

ಪ್ರಯಾಣಿಕರ ಬಳಕೆಗೆ ಇರುವ ಹಳೆಯ ಹಾಗೂ ಹೊಸ ಶೌಚಾಲಯಗಳು ಸ್ವಚ್ಛತೆಯ ಕೊರತೆಯಿಂದ ಬಳಕೆಗೆ ಅಸಮರ್ಪಕವಾಗಿವೆ. ನೀರು ಸರಬರಾಜು ಅಸ್ಥಿರವಾಗಿದ್ದು, ನಿರಂತರ ಸ್ವಚ್ಛತಾ ಕಾರ್ಯದ ಅಭಾವ, ನಿರ್ವಹಣಾ ಮೇಲ್ವಿಚಾರಣೆ ಇಲ್ಲದ ಸ್ಥಿತಿ ಯಾತ್ರಿಕರ ಸಂಖ್ಯೆ ಹೆಚ್ಚುವ ಹಬ್ಬದ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿರುವಂತೆ ಕಂಡುಬಂದಿದೆ.

ಸ್ವಚ್ಛತೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಲಕ್ಷಾಂತರ ಹಾಗೂ ಕೋಟ್ಯಾಂತರ ರೂಪಾಯಿ ಮೀಸಲಿಡಲಾಗುತ್ತಿದೆ. ಆದರೂ ಕೆಳಮಟ್ಟದಲ್ಲಿ ಮೂಲಭೂತ ವ್ಯವಸ್ಥೆಗಳು ಸಮರ್ಪಕ ಆಗಿಲ್ಲದಿರುವುದು ಸಾರ್ವಜನಿಕ ಹಣದ ಬಳಕೆ ಕುರಿತು ಅನುಮಾನ ಹುಟ್ಟಿಸಿದೆ. ಬಿಡುಗಡೆಯಾದ ಹಣ ವ್ಯರ್ಥವಾಗುತ್ತಿರುವುದೇ ಎಂಬ ಪ್ರಶ್ನೆ ಸ್ಥಳೀಯರ ನಡುವೆ ಚರ್ಚೆಗೆ ಗ್ರಾಸವಾಗಿದೆ. ಈ ಅವ್ಯವಸ್ಥೆಗಳ ಕುರಿತು ಸಾಮಾಜಿಕ ಕಾರ್ಯಕರ್ತ ಪ್ರಸಾದ್ ನೆಟ್ಟಣ ಅವರು ಚಿತ್ರೀಕರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರೈಲ್ವೆ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ಅಸ್ಸಾಂ ಹೆದ್ದಾರಿಯಲ್ಲಿ ವಾಯುಪಡೆಯ ವಿಮಾನದ ಮೂಲಕ ಪ್ರಧಾನಿ ಮೋದಿ ಐತಿಹಾಸಿಕ ಲ್ಯಾಂಡಿಂಗ್!



















