ಆಗ್ರಾ (ಉತ್ತರ ಪ್ರದೇಶ) : ಪ್ರೇಮ ವೈಫಲ್ಯ ಮತ್ತು ಸಂಶಯ ಪಿಶಾಚಿಯ ಬೆನ್ನೇರಿದ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನೇ ಅತ್ಯಂತ ಕ್ರೂರವಾಗಿ ಕೊಲೆಗೈದು, ಶವವನ್ನು ತುಂಡರಿಸಿ ಚೀಲದಲ್ಲಿ ಹಾಕಿ ಎಸೆದಿರುವ ಘಟನೆ ಉತ್ತರಪ್ರದೇಶದ ಆಗ್ರಾದ ಪಾರ್ವತಿ ವಿಹಾರ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಆರೋಪಿ ವಿನಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಸಂತ್ರಸ್ತೆಯ ತಲೆ ಇನ್ನೂ ಪತ್ತೆಯಾಗದಿರುವುದು ತನಿಖಾ ತಂಡಕ್ಕೆ ಸವಾಲಾಗಿ ಪರಿಣಮಿಸಿದೆ.
ನಾಪತ್ತೆ ದೂರು ನೀಡಲು ಬಂದವನೇ ಹಂತಕ!
ಜ.23ರಂದು ಯುವತಿ ಮನೆಗೆ ಬಾರದೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಆಗ್ರಾದ ಟ್ರಾನ್ಸ್-ಯಮುನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಘಾತಕಾರಿ ವಿಷಯವೆಂದರೆ, ಸಂಶಯ ಬರಬಾರದೆಂಬ ಕಾರಣಕ್ಕೆ ಆರೋಪಿ ವಿನಯ್ ಸ್ವತಃ ಸಂತ್ರಸ್ತೆಯ ಕುಟುಂಬದವರ ಜೊತೆಗೂಡಿ ಪೊಲೀಸ್ ಠಾಣೆಗೆ ಬಂದು ನಾಪತ್ತೆ ದೂರು ನೀಡಲು ಸಹಾಯ ಮಾಡುವ ನಾಟಕವಾಡಿದ್ದ. ಆದರೆ ಪೋಲೀಸರು ನಡೆಸಿದ ತಾಂತ್ರಿಕ ತನಿಖೆ ಮತ್ತು ಸುಮಾರು 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆಯು ಈ ಕೃತ್ಯದ ಅಸಲಿ ಮುಖವನ್ನು ಬಯಲು ಮಾಡಿತು.
ಕಚೇರಿಗೆ ಕರೆಸಿಕೊಂಡು ಕತ್ತು ಸೀಳಿದ ಪಾಪಿ
ಪೊಲೀಸರ ವಿಚಾರಣೆ ವೇಳೆ ಆರೋಪಿ ವಿನಯ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಸಂತ್ರಸ್ತೆ ಮತ್ತು ತಾನು ಪ್ರೇಮ ಸಂಬಂಧದಲ್ಲಿದ್ದೆವು, ಆದರೆ ಆಕೆ ಬೇರೊಬ್ಬ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದಾಳೆ ಎಂಬ ಸಂಶಯ ನನಗಿತ್ತು ಎಂದು ಆತ ತಿಳಿಸಿದ್ದಾನೆ. ಇದೇ ವಿಚಾರವಾಗಿ ಜ.23ರಂದು ಯುವತಿಯನ್ನು ತನ್ನ ಕಚೇರಿಗೆ ಸಂಧಾನದ ನೆಪದಲ್ಲಿ ಕರೆಸಿಕೊಂಡಿದ್ದ ವಿನಯ್, ಅಲ್ಲಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ಹೋದಾಗ ಚಾಕುವಿನಿಂದ ಆಕೆಯನ್ನು ಕೊಂದು ಹಾಕಿದ್ದ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ತುಂಡರಿಸಿ ಚೀಲಕ್ಕೆ ತುಂಬಿದ್ದ.
ಸಿಸಿಟಿವಿ ದೃಶ್ಯದಿಂದಾಗಿ ಸೆರೆಸಿಕ್ಕ ಆರೋಪಿ
ಕೊಲೆಯ ನಂತರ ಆರೋಪಿಯು ಸಂತ್ರಸ್ತೆಯ ಸ್ಕೂಟರ್ ಮೇಲೆಯೇ ಶವವಿದ್ದ ಚೀಲವನ್ನು ಹೊತ್ತೊಯ್ದು ಯಮುನಾ ಸೇತುವೆಯ ಬಳಿ ಎಸೆದಿದ್ದ. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಕೂಟರ್ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಹಂತಕನನ್ನು ಕೇವಲ 12 ಗಂಟೆಗಳ ಒಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶವದ ಭಾಗಗಳು ಸಿಕ್ಕಿದ್ದರೂ, ತಲೆಯನ್ನು ಪ್ರತ್ಯೇಕವಾಗಿ ಮೋರಿಯಲ್ಲಿ ಎಸೆದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದು, ಅದನ್ನು ಪತ್ತೆಹಚ್ಚಲು ನಾಲ್ಕು ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಡಿಸಿಪಿ ಸೈಯದ್ ಅಲಿ ಅಬ್ಬಾಸ್ ತಿಳಿಸಿದ್ದಾರೆ.
ಇದನ್ನೂ ಓದಿ : ವೃದ್ಧರನ್ನೇ ಟಾರ್ಗೆಟ್ ಮಾಡಿ ಚೈನ್ ಸ್ನ್ಯಾಚಿಂಗ್ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್..!



















