ಅಹಮದಾಬಾದ್: ಗುಜರಾತ್ ನಲ್ಲಿ ನಡೆದ ವಿಮಾನ ದುರಂತದಲ್ಲಿ 241 ಜನ ಸಾವನ್ನಪ್ಪಿದ್ದಾರೆ. ಆದರೆ, ಈ ಪೈಕಿ ಓರ್ವ ಲಕ್ಕಿ ಲೇಡಿ ವಿಮಾನ ಹತ್ತದೆ ಪ್ರಾಣ ಉಳಿಸಿಕೊಂಡಿದ್ದಾರೆ. ದೇವರು ಅವರನ್ನು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಸಿ ಕಾಪಾಡಿದ್ದಾನೆ.
ಮಹಿಳೆಯೋರ್ವರು ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದರಿಂದ ಏರ್ ಇಂಡಿಯಾ (Air India) ವಿಮಾನ ಅಪಘಾತದಿಂದ ಪಾರಾಗಿದ್ದಾರೆ. ಭೂಮಿ ಚವ್ಹಾಣ್ ಎಂಬುವವರೇ ಆ ಲೇಡಿ. ಭೂಮಿ, ಅಹಮದಾಬಾದ್ (Ahmedabad)ನಿಂದ ಲಂಡನ್ಗೆ ಹೊರಟಿದ್ದರು. ಆದರೆ, ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದರಿಂದ ಅಹಮದಾಬಾದ್ ವಿಮಾನ ನಿಲ್ದಾಣವನ್ನು 10 ನಿಮಿಷ ತಡವಾಗಿ ತಲುಪಿದ್ದರು. ಹೀಗಾಗಿ ಅವರಿಗೆ ವಿಮಾನ ಏರಲು ಅವಕಾಶ ಸಿಕ್ಕಿರಲಿಲ್ಲ. ಆದರೆ, ಕೆಲವೇ ನಿಮಿಷಗಳಲ್ಲಿ ವಿಮಾನ ಅಪಘಾತದ (Air India Flight Crash) ಸುದ್ದಿ ಬಂದಿದ್ದು, ಮಹಿಳೆ, ಮಾಧ್ಯಮಗಳ ಮುಂದೆ ಗದ್ಗದಿತರಾಗಿದ್ದಾರೆ. ಈ ಸುದ್ದಿ ಕೇಳಿ ಭಯವಾಗಿ ಕೈಕಾಲುಗಳು ನಡುಗಲು ಪ್ರಾರಂಭಿಸಿದವು. ನಾನು ತುಂಬಾ ಹೊತ್ತು ಅದೇ ಆಘಾತದಲ್ಲಿದ್ದೆ. 10 ನಿಮಿಷ ತಡವಾಗಿ ಬಂದಿದ್ದರಿಂದ ವಿಮಾನ ತಪ್ಪಿಸಿಕೊಂಡು ಬದುಕುಳಿದೆ. ನನ್ನ ನೆಚ್ಚಿನ ದೇವರಾದ ಗಣಪತಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಭೂಮಿ ತಮ್ಮ ಪತಿಯೊಂದಿಗೆ ಲಂಡನ್ನಲ್ಲಿ ವಾಸವಾಗಿದ್ದರು. ರಜೆ ಇದ್ದ ಕಾರಣ ಭಾರತಕ್ಕೆ ಆಗಮಿಸಿದ್ದರು. ಆದರೆ, ಇಂದು ಮರಳಿ ಹೋಗಲು ಸಿದ್ಧವಾಗಿದ್ದರು. ಆದರೆ, ದೇವರು ಅವರನ್ನು ಕಾಪಾಡಿದ್ದಾರೆ.