ಭೋಪಾಲ್: ಕಳೆದ ವರ್ಷ ಉತ್ತರಪ್ರದೇಶದ ಪ್ರಯಾಗ್ರಾಜ್ ಕುಂಭಮೇಳದಲ್ಲಿ ಕಾಣಿಸಿಕೊಂಡು ರಾತ್ರೋರಾತ್ರಿ ದೇಶಾದ್ಯಂತ ಸಂಚಲನ ಮೂಡಿಸಿ, ಖ್ಯಾತಿಯ ಉತ್ತುಂಗಕ್ಕೇರಿದ ಮಧ್ಯಪ್ರದೇಶದ ಮೂಲದ ಮೊನಾಲಿಸಾ ಭೋಂಸ್ಲೆ ಅವರ ವಿವಾಹವೀಗ ದಿನಕ್ಕೊಂದು ವಿವಾದವನ್ನು ಸೃಷ್ಟಿಸುತ್ತಿದೆ. ಕೇರಳದಲ್ಲಿ ಮುಸ್ಲಿಂ ಯುವಕನೊಂದಿಗೆ ಹಸೆಮಣೆ ಏರಿರುವ ತಮ್ಮ ಮಗಳು ‘ಲವ್ ಜಿಹಾದ್‘ಗೆ ಬಲಿಯಾಗಿದ್ದಾಳೆ ಎಂದು ಆರೋಪಿಸಿರುವ ಆಕೆಯ ತಂದೆ, ಮಗಳನ್ನು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆತರಲು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸಹಾಯ ಕೋರಿದ್ದಾರೆ.
ಸಿಎಂ ಮೊರೆ ಹೋದ ತಂದೆ: ‘ಲವ್ ಜಿಹಾದ್’ ಆರೋಪ
ಮಧ್ಯಪ್ರದೇಶದ ಮಹೇಶ್ವರ ಪಟ್ಟಣದ ಅಲೆಮಾರಿ ಪಾರ್ಧಿ ಸಮುದಾಯಕ್ಕೆ ಸೇರಿದ 18 ವರ್ಷದ ಮೊನಾಲಿಸಾ, ಕೇರಳದ ಪೂವಾರ್ನ ಅರುಮನೂರಿನ ನೈನಾರ್ ದೇವಸ್ಥಾನದಲ್ಲಿ ಬುಧವಾರ ಫರ್ಮಾನ್ ಖಾನ್ ಎಂಬ ಯುವಕನನ್ನು ವರಿಸಿದ್ದಾಳೆ. ಕೇರಳದಿಂದ ಹಿಂದಿರುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆಕೆಯ ತಂದೆ ಜೈಸಿಂಗ್ ಭೋಂಸ್ಲೆ, ಚಿತ್ರರಂಗದಲ್ಲಿ ಅವಕಾಶ ಅರಸುತ್ತಿದ್ದ ತಮ್ಮ ಮಗಳನ್ನು ಫರ್ಮಾನ್ ಖಾನ್ ಎಂಬಾತ ಪ್ರೀತಿಯ ನಾಟಕವಾಡಿ ವಂಚಿಸಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದೊಂದು ಸ್ಪಷ್ಟ ‘ಲವ್ ಜಿಹಾದ್’ ಪ್ರಕರಣವಾಗಿದ್ದು, ಮಗಳನ್ನು ಸುರಕ್ಷಿತವಾಗಿ ಕರೆತರಲು ಸಿಎಂ ಮೋಹನ್ ಯಾದವ್ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ. ಮಗಳು ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಳು ಮತ್ತು ಭವಿಷ್ಯದ ದೃಷ್ಟಿಯಿಂದ ನಟನೆ, ನೃತ್ಯ ಕಲಿಯುತ್ತಿದ್ದಳು ಎಂದು ನಂಬಿದ್ದೇನೆಯೇ ಹೊರತು, ಹೀಗಾಗುತ್ತದೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಇತ್ತ ಹಿಂದೂ ಜಾಗರಣ ವೇದಿಕೆಯ ಮುಖಂಡರು ಸಹ ಮೊನಾಲಿಸಾಳನ್ನು ಮನವೊಲಿಸಿ ಮನೆಗೆ ಕರೆತರುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ನಾನೇ ಒತ್ತಾಯಪೂರ್ವಕವಾಗಿ ಮದುವೆಯಾದೆ: ಮೊನಾಲಿಸಾ
ತನ್ನ ಮದುವೆಯ ಕುರಿತು ಎದ್ದಿರುವ ‘ಲವ್ ಜಿಹಾದ್’ ಹಾಗೂ ಮತಾಂತರದ ಆರೋಪಗಳನ್ನು ಸ್ವತಃ ಮೊನಾಲಿಸಾ ತಳ್ಳಿಹಾಕಿದ್ದಾಳೆ. ಗುರುವಾರ ತಿರುವನಂತಪುರಂನಲ್ಲಿ ಪತಿ ಫರ್ಮಾನ್ ಖಾನ್ ಜೊತೆ ಸುದ್ದಿಗೋಷ್ಠಿ ನಡೆಸಿದ ಆಕೆ, ಈ ವಿವಾಹ ಸಂಪೂರ್ಣವಾಗಿ ನನ್ನ ಸ್ವಂತ ಇಚ್ಛೆಯಿಂದ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾಳೆ. ಹಿಂದೂ ಸಂಪ್ರದಾಯದಂತೆಯೇ ನಮ್ಮ ಮದುವೆ ನಡೆದಿದ್ದು, ಮದುವೆಯ ನಂತರ ನಮ್ಮಿಬ್ಬರ ಧರ್ಮವೂ ಬದಲಾಗಿಲ್ಲ; ನಮ್ಮ ಸಂಬಂಧ ಪರಸ್ಪರ ಗೌರವದ ಮೇಲೆ ನಿಂತಿದೆಯೇ ಹೊರತು, ಧರ್ಮವು ಮದುವೆಗೆ ಎಂದಿಗೂ ಷರತ್ತಾಗಿರಲಿಲ್ಲ ಎಂದು ಆಕೆ ಹೇಳಿದ್ದಾಳೆ. “ನಿಜ ಹೇಳಬೇಕೆಂದರೆ, ಫರ್ಮಾನ್ಗೆ ನನ್ನನ್ನು ಮದುವೆಯಾಗುವ ಇಷ್ಟವಿರಲಿಲ್ಲ. ನಾನೇ ಆತನನ್ನು ಒತ್ತಾಯಪೂರ್ವಕವಾಗಿ ಒಪ್ಪಿಸಿ ವಿವಾಹವಾಗಿದ್ದೇನೆ,” ಎಂದು ಮೊನಾಲಿಸಾ ಅಚ್ಚರಿಯ ಹೇಳಿಕೆ ನೀಡಿದ್ದಾಳೆ.
ಪೊಲೀಸ್ ರಕ್ಷಣೆಯಲ್ಲಿ ವಿವಾಹ
ನಾಲ್ಕು ಮಕ್ಕಳಲ್ಲಿ ಹಿರಿಯವಳಾಗಿರುವ ಮೊನಾಲಿಸಾ, ಮನೆಯವರ ಇಚ್ಛೆಗೆ ವಿರುದ್ಧವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಆಕೆಯ ಪೋಷಕರು ಆಕೆಯನ್ನು ಆಕೆಯ ಸೋದರತ್ತೆಯ ಮಗನಿಗೆ ಕೊಟ್ಟು ವಿವಾಹ ಮಾಡಲು ನಿರ್ಧರಿಸಿದ್ದರು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮೊನಾಲಿಸಾ, ತನ್ನ ಕುಟುಂಬದವರಿಂದಲೇ ವಿರೋಧ ಎದುರಾದ ಹಿನ್ನೆಲೆಯಲ್ಲಿ ಕೇರಳದ ತಂಪನೂರು ಪೊಲೀಸ್ ಠಾಣೆಯ ಮೆಟ್ಟಿಲೇರಿ ರಕ್ಷಣೆ ಕೋರಿದ್ದಳು. ಪೊಲೀಸರ ರಕ್ಷಣೆ ಮತ್ತು ನೆರವಿನೊಂದಿಗೆ ತಿರುವನಂತಪುರಂನ ದೇವಸ್ಥಾನದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಇದನ್ನೂ ಓದಿ : ಇಲಿ ತಿಂದ ಮೀನಿಗಾಗಿ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಕೊಂದ ಪಾಪಿಗಳು!



















