ಮುಂಬೈ : ಮಾಜಿ ‘ಮಿಸ್ ಇಂಡಿಯಾ ಅರ್ಥ್-2019’ ವಿಜೇತೆ ಸಯಾಲಿ ಸುರ್ವೆ ಅವರು ತಮ್ಮ ಪತಿಯ ವಿರುದ್ಧ ‘ಲವ್ ಜಿಹಾದ್’, ಬಲವಂತದ ಮತಾಂತರ ಹಾಗೂ ಕೌಟುಂಬಿಕ ದೌರ್ಜನ್ಯದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮದುವೆಗಾಗಿ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿಸಲಾಗಿತ್ತು ಮತ್ತು ವರ್ಷಗಳ ಕಾಲ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ್ದೇನೆ ಎಂದು ನೋವು ತೋಡಿಕೊಂಡಿರುವ ಅವರು, ತಮ್ಮ ಹಾಗೂ ಮಕ್ಕಳ ಭದ್ರತೆಗಾಗಿ ಮರಳಿ ಹಿಂದೂ ಧರ್ಮಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸಯಾಲಿ ಆರೋಪಗಳೇನು?
ಮೂಲತಃ ಪುಣೆ ಸಮೀಪದ ಪಿಂಪ್ರಿ-ಚಿಂಚವಾಡ್ನವರಾದ ಸಯಾಲಿ ಸುರ್ವೆ, 2017ರಲ್ಲಿ ಸಾಮಾನ್ಯ ಸ್ನೇಹಿತರೊಬ್ಬರ ಮೂಲಕ ಆತಿಫ್ ತಾಸೆ ಎಂಬವರನ್ನು ಭೇಟಿಯಾಗಿದ್ದು, ನಂತರ ಅವರ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಕುಟುಂಬದ ತೀವ್ರ ವಿರೋಧದ ನಡುವೆಯೂ ಆತಿಫ್ ಅವರನ್ನು ಸಯಾಲಿ ವಿವಾಹವಾಗಿದ್ದರು. “ನಿಖಾಹ್ (ಮದುವೆ) ಆಗಬೇಕಾದರೆ ನಾನು ಇಸ್ಲಾಂಗೆ ಮತಾಂತರಗೊಳ್ಳುವುದು ಕಡ್ಡಾಯವಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಮತಾಂತರಗೊಂಡೆ. ಆದರೆ ಒಂದೇ ಸೂರಿನಡಿ ವಾಸಿಸಲು ಆರಂಭಿಸಿದ ಮೇಲೆಯೇ ಆತನ ನೈಜ ಬಣ್ಣ ಮತ್ತು ಹಿನ್ನೆಲೆ ತಿಳಿಯಲಾರಂಭಿಸಿತು,” ಎಂದು ಸಯಾಲಿ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಮದುವೆಯ ನಂತರ ನನ್ನ ಮೇಲೆ ಕಟ್ಟುನಿಟ್ಟಾದ ಇಸ್ಲಾಮಿಕ್ ಆಚರಣೆಗಳನ್ನು ಪಾಲಿಸುವಂತೆ ಹಾಗೂ ನಮಾಜ್ ಮಾಡಲು ಕಲಿಯುವಂತೆ ತೀವ್ರ ಒತ್ತಡ ಹೇರತೊಡಗಿದರು ಎಂದು ಅವರು ವಿವರಿಸಿದ್ದಾರೆ.

ನಿರಂತರ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ
ಮದುವೆಯಾದ ಕೆಲವೇ ದಿನಗಳಲ್ಲಿ ನನ್ನ ವೈವಾಹಿಕ ಜೀವನ ನರಕವಾಗತೊಡಗಿತ್ತು. “ಯಾವುದೇ ತಪ್ಪು ಮಾಡದಿದ್ದರೂ ಆತ ನನ್ನ ಮೇಲೆ ಮನಬಂದಂತೆ ಹಲ್ಲೆ ನಡೆಸುತ್ತಿದ್ದ. ದಿನದ 24 ಗಂಟೆಯೂ ಬೈಗುಳಗಳನ್ನು ಕೇಳುವುದೇ ನನ್ನ ದಿನಚರಿಯಾಗಿತ್ತು. ನಿರಂತರ ಹಿಂಸೆಯಿಂದಾಗಿ ಒಂದು ಹಂತದಲ್ಲಿ ಇದೆಲ್ಲವೂ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ನಾನು ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಆತ ಬದಲಾಗಬಹುದು ಮತ್ತು ಮಕ್ಕಳ ಭವಿಷ್ಯ ಹಾಳಾಗಬಾರದು, ಕುಟುಂಬ ಒಡೆಯಬಾರದು ಎಂಬ ಕಾರಣಕ್ಕೆ ಸುದೀರ್ಘ ಕಾಲ ಈ ಎಲ್ಲ ಕಿರುಕುಳಗಳನ್ನು ಸಹಿಸಿಕೊಂಡಿದ್ದೆ,” ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಮರಳಿ ಹಿಂದೂ ಧರ್ಮಕ್ಕೆ
ಮಕ್ಕಳು ಬೆಳೆಯುತ್ತಿದ್ದಂತೆ ಆ ಕಲುಷಿತ ವಾತಾವರಣದಲ್ಲಿ ಅವರನ್ನು ಬೆಳೆಸುವುದು ಸೂಕ್ತವಲ್ಲ ಎಂದು ನಿರ್ಧರಿಸಿದ ಸಯಾಲಿ, ಅಂತಿಮವಾಗಿ ಪತಿಯಿಂದ ದೂರಾಗುವ ದಿಟ್ಟ ನಿರ್ಧಾರ ತೆಗೆದುಕೊಂಡರು. ಈ ಇಡೀ ಪ್ರಕರಣವನ್ನು ‘ಲವ್ ಜಿಹಾದ್’ ಎಂದು ಕರೆದಿರುವ ಅವರು, “ನಾನು ಪ್ರೀತಿಯ ಅಂಧಕಾರದಲ್ಲಿದ್ದೆ. ಆಗ ನನಗೆ ಅಷ್ಟೊಂದು ತಿಳಿವಳಿಕೆ ಇರಲಿಲ್ಲ, ಆತನೊಬ್ಬ ಒಳ್ಳೆಯ ಮನುಷ್ಯ ಎಂದು ಕುರುಡಾಗಿ ನಂಬಿದ್ದೆ. ಖಂಡಿತವಾಗಿಯೂ ಇದೊಂದು ಲವ್ ಜಿಹಾದ್ ಪ್ರಕರಣ” ಎಂದು ಗುಡುಗಿದ್ದಾರೆ. ಪ್ರಸ್ತುತ ಮರಳಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಅವರು ತಮ್ಮ ಹೆಸರನ್ನು ‘ಆದ್ಯಾ ಸುರ್ವೆ’ ಎಂದು ಬದಲಾಯಿಸಿಕೊಂಡಿದ್ದಾರೆ. ಅಲ್ಲದೆ, ತಮ್ಮ ಮಕ್ಕಳು ಯಾವ ಧರ್ಮಕ್ಕೆ ಸೇರಿದವರು ಎಂಬ ಅರಿವು ಮೂಡಿಸಲು ಅವರ ಹೆಸರುಗಳನ್ನೂ ಬದಲಾಯಿಸಿರುವುದಾಗಿ ತಿಳಿಸಿದ್ದಾರೆ.
ನ್ಯಾಯಕ್ಕಾಗಿ ಹೋರಾಟ
ಈಗಾಗಲೇ ಪತಿಯ ವಿರುದ್ಧ ಹಲವು ಎಫ್ಐಆರ್ಗಳನ್ನು (FIR) ದಾಖಲಿಸಲಾಗಿದೆ ಎಂದು ಸಯಾಲಿ ತಿಳಿಸಿದ್ದಾರೆ. ಪ್ರಸ್ತುತ ತಮ್ಮ ಹಾಗೂ ಮಕ್ಕಳ ಜೀವ ಬೆದರಿಕೆಯ ಕಾರಣದಿಂದ ತಾವು ಮುಂಬೈಗೆ ತೆರಳಲು ಸಾಧ್ಯವಿಲ್ಲ ಎಂದಿರುವ ಅವರು, ಪೊಲೀಸರೇ ಪುಣೆಗೆ ಆಗಮಿಸಿ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದಿದ್ದಾರೆ. ತಮ್ಮ ಬಳಿ ಪತಿಯ ದೌರ್ಜನ್ಯದ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳಿದ್ದು, ಸೂಕ್ತ ಸಮಯದಲ್ಲಿ ಎಲ್ಲವನ್ನೂ ಬಿಚ್ಚಿಡುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ, ತಮ್ಮಂತೆಯೇ ಕೌಟುಂಬಿಕ ಹಿಂಸೆ ಅನುಭವಿಸುತ್ತಿರುವ ಇತರ ಮಹಿಳೆಯರು ಮೌನ ಮುರಿದು ನ್ಯಾಯಕ್ಕಾಗಿ ಹೋರಾಡಲು ಧೈರ್ಯದಿಂದ ಮುಂದೆ ಬರಬೇಕು ಎಂದು ಅವರು ಕರೆ ನೀಡಿದ್ದಾರೆ.
ಇದನ್ನೂ ಓದಿ : ಕೇವಲ ದೇವಾಲಯಕ್ಕೆ ಮಾತ್ರವೇಕೆ ಭೇಟಿ? ಕೀರ್ತಿ ಆಜಾದ್ ವಿವಾದಾತ್ಮಕ ಹೇಳಿಕೆಗೆ ಹರ್ಭಜನ್ ಖಡಕ್ ತಿರುಗೇಟು!



















