ಚಿಕ್ಕೋಡಿ: ಯುವಕರು ರಸ್ತೆ ಮಧ್ಯೆಯೇ ಲಾಂಗ್ ಹಿಡಿದು ಅಟ್ಟಹಾಸ ಮೆರೆದಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ವಾಲ್ಮೀಕಿ ಕ್ರಾಸ್ ಹತ್ತಿರ ಸಾರ್ವಜನಿಕವಾಗಿಯೇ ರಸ್ತೆ ಮಧ್ಯೆ ಲಾಂಗ್ ಹಿಡಿದು, ಸ್ಥಳೀಯರು ಭಯಭೀತರಾಗುವಂತೆ ಮಾಡಿದ್ದಾರೆ. ಹೀಗಾಗಿ ಪುಂಡರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸದ್ಯ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಲಪ್ಪ ದ್ಯಾಮಪ್ಪ ಕಾಟಾಬಳಿ (25) ಹಾಗೂ ನಾಗರಾಜ ದ್ಯಾಮಣ್ಣಾ ಕಾಟಾಬಳಿ (21) ಕೃತ್ಯ ನಡೆಸಿದವರು. ಬಂಧಿತರಿಬ್ಬರು ಕ್ರಾಸ್ ಬಳಿ ನಿಂತು, ಹೋಗಿ- ಬರುವ ಜನರಿಗೆ ನಮ್ಮ ಹತ್ತಿರ ಲಾಂಗ್ ಇದೆ. ಯಾರಾದರೂ ನಮ್ಮ ತಂಟೆಗೆ ಬಂದರೆ ಅವರನ್ನು ಬಿಡುವುದಿಲ್ಲ ಎಂದು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.
ರಸ್ತೆಯ ಮೇಲೆ ಲಾಂಗ್ ಹಿಡಿದು ಅವಾಚ್ಯ ಶಬ್ದಗಳಿಂದ ಬೈಯುವುದು, ಕಿರುಚಾಡುವುದನ್ನು ಮಾಡಿದ್ದಾರೆ. ಸಾರ್ವಜನಿಕರು ತಿಳಿ ಹೇಳಿದರೂ ಸುಮ್ಮನಾಗಿಲ್ಲ ಎನ್ನಲಾಗಿದೆ. ಹೀಗಾಗಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಯಮಕಣಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.