ಬೆಂಗಳೂರು: ಐಪಿಎಲ್ನ ಕೆಲವು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ಹರ್ಭಜನ್, ಟೀಮ್ ಇಂಡಿಯಾವನ್ನು ಮುನ್ನಡೆಸುವುದಕ್ಕಿಂತ ಐಪಿಎಲ್ ತಂಡವನ್ನು ಮುನ್ನಡೆಸುವುದು ಹೆಚ್ಚು ಕಠಿಣ ಎಂದು ಹೇಳಿಕೆ ನೀಡಿದ್ದಾರೆ. ಈ ವೇಳೆ ಅವರು ಆರ್ಸಿಬಿ ನಾಯಕ ರಜತ್ ಪಾಟೀದಾರ್ಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಆರ್ಸಿಬಿ ತಂಡವನ್ನು ಮುನ್ನಡೆಸುವುದು ಪಾಟೀದಾರ್ ಅವರಂತಹ ಆಟಗಾರರಿಗೆ ದೊಡ್ಡ ಸವಾಲಾಗಿದೆ. ದೊಡ್ಡ ತಂಡವನ್ನು ಮುನ್ನಡೆಸುವುದು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವಲ್ಲ. ಯಾರು ಆಡುತ್ತಾರೆ, ಯಾರು ಯಾವ ಹಂತದಲ್ಲಿ ಬೌಲಿಂಗ್ ಮಾಡುತ್ತಾರೆ ಎಂಬುದನ್ನು ಅರಿಯಬೇಕು. ಅವರಿಗೆ ಕಷ್ಟವಾಗಲಿದೆ ಎಂದು ಹರ್ಭಜನ್ ತಿಳಿಸಿದ್ದಾರೆ.
ತಂಡದಲ್ಲಿ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಇದ್ದರೂ, ಅವರು ನಾಯಕತ್ವದ ಪಾತ್ರದಿಂದ ದೂರ ಉಳಿದಿದ್ದಾರೆ. ಆದರೆ, ವಿರಾಟ್ ಕೊಹ್ಲಿ ನಿರ್ಧಾರ ಕೈಗೊಳ್ಳುವಾಗ ಪಾಟೀದಾರ್ಗೆ ಸಹಾಯ ಮಾಡಬಹುದು. , 31 ವರ್ಷದ ಪಾಟೀದಾರ್ಗೆ ನಾಯಕತ್ವ ಸುಲಭದ ಕೆಲಸವಲ್ಲ ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಫ್ರಾಂಚೈಸಿ ಮುನ್ನಡೆಸುವುದು ಕಠಿಣ
ಭಾರತವನ್ನು ಮುನ್ನಡೆಸುವುದು ಅತ್ಯಂತ ಕಷ್ಟದ ಕೆಲಸ ಎಂದು ಜನರು ಭಾವಿಸುತ್ತಾರೆ. ಆದರೆ ಫ್ರಾಂಚೈಸಿಯನ್ನು ಮುನ್ನಡೆಸುವುದು ಇನ್ನೂ ಕಠಿಣ ಎಂದು ನಾನು ಭಾವಿಸುತ್ತೇನೆ ಎಂದು ಹರ್ಭಜನ್ ಇಎಸ್ಪಿಎನ್ ಕ್ರಿಕ್ಇನ್ಫೋಗೆ ತಿಳಿಸಿದ್ದಾರೆ.
ಪಾಟೀದಾರ್ ಮೇಲೆ ನಿರೀಕ್ಷೆಗಿಂತ ಜಾಸ್ತಿ ಒತ್ತಡವಿದೆ. ಆರ್ಸಿಬಿ ಒಮ್ಮೆಗೂ ಕಪ್ ಗೆದ್ದಿಲ್ಲ. ಅಲ್ಲಿನ ಎಲ್ಲಾ ಗಮನ ಕೊಹ್ಲಿಯ ಕಡೆಗೇ ಇರುತ್ತದೆ. ಪಾಟೀದಾರ್ ಒಳ್ಳೆಯ ಪ್ರದರ್ಶನ ನೀಡಬೇಕು ಎಂದು ಅವರ ಮೇಲೆ ಒತ್ತಡವಿದೆ ಎಂದು ಹರ್ಭಜನ್ ತಿಳಿಸಿದ್ದಾರೆ.
ಪಾಟೀದಾರ್ 2021ರಿಂದ ಆರ್ಸಿಬಿಯ ಭಾಗವಾಗಿದ್ದಾರೆ. ಇದು ಅವರ ಮೊದಲ ಐಪಿಎಲ್ ಫ್ರಾಂಚೈಸಿಯಾಗಿದೆ. ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟರ್ ಆಗಿರುವ ಪಾಟೀದಾರ್, ಕಳೆದ ಋತುವಿನಲ್ಲಿ 177ರ ಸ್ಟ್ರೈಕ್ ರೇಟ್ನಲ್ಲಿ 395 ರನ್ ಗಳಿಸಿದ್ದರು.
ಮಾರ್ಚ್ 22ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಕೆಕೆಆರ್ ಈ ಬಾರಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಆಡುವುದರಿಂದ, ಎರಡೂ ತಂಡಗಳು ಹೊಸ ನಾಯಕನೊಂದಿಗೆ ಕಣಕ್ಕಿಳಿಯುತ್ತಿವೆ.