ಬೆಂಗಳೂರು: ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್ ಬಿ ಎಫ್ ಸಿ) ಗ್ರಾಹಕರ ಹಿತದೃಷ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಕೆವೈಸಿ ನಿಯಮಗಳಲ್ಲಿ ಬದಲಾವಣೆ ತರಲು ಮುಂದಾಗಿದೆ. ಕೆವೈಸಿ ಸರಳೀಕರಣಕ್ಕಾಗಿ ನಿಯಮಗಳನ್ನು ಬದಲಾವಣೆ ಮಾಡುತ್ತಿದ್ದು, ಇತ್ತೀಚೆಗಷ್ಟೇ ಕರಡು ಪ್ರಸ್ತಾವನೆಗಳನ್ನು ಇರಿಸಿದೆ. ಗ್ರಾಹಕರು ಜೂನ್ 6ರವರೆಗೆ ಅಭಿಪ್ರಾಯಗಳನ್ನು ತಿಳಿಸಲು ಕೂಡ ಸಮಯಾವಕಾಶ ನೀಡಿದೆ.
ಹೊಸ ಪ್ರಸ್ತಾಪಗಳ ಪ್ರಕಾರ, ಹಳೆಯ ಕೆವೈಸಿ ಮಾಹಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ, ಗ್ರಾಹಕರು ಒಂದು ಸ್ವಯಂ ಘೋಷಣೆ (Self-Declaration) ನೀಡಬಹುದು. ವಿಳಾಸ ಬದಲಾಗಿದ್ದರೆ ಮಾತ್ರ ದಾಖಲೆ ನೀಡಬೇಕು. ಬ್ಯಾಂಕುಗಳು ಬಿಸಿನೆಸ್ ಕರೆಸ್ಪಾಂಡೆಂಟ್ (BC) ಮೂಲಕ ಸೆಲ್ಫ್ ಡಿಕ್ಲರೇಷನ್ ಮತ್ತು ದಾಖಲೆಗಳನ್ನು ಪಡೆಯಬಹುದು. ಬಿಸಿನೆಸ್ ಕರೆಸ್ಪಾಂಡೆಂಟ್ ಗಳು ಗ್ರಾಹಕರಿಂದ ದಾಖಲೆಗಳನ್ನು ಪಡೆದು, ರಶೀದಿಯನ್ನು ನೀಡಬೇಕು. ಒಂದು ವೇಳೆ, ಆನ್ ಲೈನ್ ಸೌಲಭ್ಯ ಇಲ್ಲದಿದ್ದರೆ, ಬಿಸಿನೆಸ್ ಕರೆಸ್ಪಾಂಡೆಂಟ್ ಗಳು ದಾಖಲೆಗಳನ್ನು ದೃಢೀಕರಿಸಿ ಬ್ಯಾಂಕಿಗೆ ಕಳುಹಿಸಬೇಕು.
ಬ್ಯಾಂಕುಗಳು ಗ್ರಾಹಕರನ್ನು ಸೇರಿಸಿಕೊಳ್ಳಲು ಫೇಸ್-ಟು-ಫೇಸ್ (Face-to-face) ಮತ್ತು ನಾನ್-ಫೇಸ್-ಟು-ಫೇಸ್ (Non-face-to-face) ವಿಧಾನಗಳಿವೆ. ಆಧಾರ್ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ (e-KYC) ಮೂಲಕ ಗ್ರಾಹಕರನ್ನು ಸೇರಿಸಿಕೊಳ್ಳಬಹುದು. ಗ್ರಾಹಕರು ಆಧಾರ್ ನಲ್ಲಿರುವ ವಿಳಾಸವನ್ನು ಬದಲಾಯಿಸಲು ಬಯಸಿದರೆ, ಅವರು ಸ್ವಯಂ ಘೋಷಣೆ ನೀಡಬಹುದು. ಬ್ಯಾಂಕುಗಳು ಕೆವೈಸಿ ಅಪ್ ಡೇಟ್ ಮಾಡುವ ದಿನಾಂಕದ ಬಗ್ಗೆ ಗ್ರಾಹಕರಿಗೆ ಮೊದಲೇ ತಿಳಿಸಬೇಕು. ಕನಿಷ್ಠ ಮೂರು ಬಾರಿ ಮುಂಚಿತವಾಗಿ ಮಾಹಿತಿ ನೀಡಬೇಕು. ಅದರಲ್ಲಿ ಒಂದು ಪತ್ರದ ಮೂಲಕ ಇರಬೇಕು ಎಂದು ತಿಳಿಸಲಾಗಿದೆ.
ಸರ್ಕಾರದ ಯೋಜನೆಗಳನ್ನು ಪಡೆಯುವವರಿಗೆ ಕೆವೈಸಿ ನಿಯಮಗಳ ತಿದ್ದುಪಡಿ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ, ಅಕ್ರಮವಾಗಿ ಹಣದ ವರ್ಗಾವಣೆ ಮಾಡುವುದನ್ನು ತಡೆಯುವುದು ಕೂಡ ಇದರ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.



















