ಬೆಳಗಾವಿ: ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ (Maha Kumbh Stampede) ಇಬ್ಬರು ಕನ್ನಡಿಗರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗಾವಿಯ (Belagavi) ತಾಯಿ-ಮಗಳು ಘಟನೆಯಲ್ಲಿ ಬಲಿಯಾಗಿದ್ದಾರೆ.
ಜಿಲ್ಲೆಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ್ (50) ಮೇಘಾ ಹತ್ತರವಾಠ್ ಸಾವನ್ನಪ್ಪಿರುವ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕುಂಭಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ತಾಯಿ ಹಾಗೂ ಮಗಳು ಇಬ್ಬರೂ ಗಾಯಗೊಂಡಿದ್ದರು. ಇಬ್ಬರನ್ನೂ ಪ್ರಯಾಗ್ರಾಜ್ (Prayagraj) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆ. ಕಾಲ್ತುಳಿತದ ಸುದ್ದಿ ತಿಳಿಯುತ್ತಿದ್ದಂತೆ ಬೆಳಗಾವಿಯಲ್ಲಿನ ಕುಟುಂಬಸ್ಥರು ಫೋನ್ ಮಾಡಿದ್ದಾರೆ. ಆದರೆ, ಫೋನ್ ರಿಂಗ್ ಆದರೂ ರಿಸೀವ್ ಮಾಡಿಲ್ಲ. ಹೀಗಾಗಿ ಅವರು ಆತಂಕಗೊಂಡಿದ್ದರು. ಆದರೆ, ಈಗ ಸಾವಿನ ಸುದ್ದಿ ಹೊರ ಬಿದ್ದಿದೆ.
ಮೂರು ದಿನಗಳ ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ 13 ಜನರ ತಂಡದಲ್ಲಿ ತಾಯಿ ಹಾಗೂ ಮಗಳು ತೆರಳಿದ್ದರು ಎನ್ನಲಾಗಿದೆ.