ನವದೆಹಲಿ : ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಭರ್ಜರಿ ಮುನ್ನಡೆ ಸಾಧಿಸಿದರೂ, ನಾಯಕ ಸೂರ್ಯಕುಮಾರ್ ಯಾದವ್ ಅವರ ಕೆಲವು ತಂತ್ರಗಾರಿಕೆಗಳು ಮಾಜಿ ಆಟಗಾರರ ಕಣ್ಣು ಕೆಂಪಾಗಿಸಿವೆ. ಟೀಮ್ ಇಂಡಿಯಾದ ಮಾಜಿ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್, ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಬಳಸಿಕೊಂಡ ರೀತಿಯ ಬಗ್ಗೆ ನಾಯಕ ಸೂರ್ಯಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.
ನಮೀಬಿಯಾ ವಿರುದ್ಧ ವರುಣ್ ಚಕ್ರವರ್ತಿ ತಮ್ಮ ಅಮೋಘ ಬೌಲಿಂಗ್ ಮೂಲಕ ಕೇವಲ 2 ಓವರ್ಗಳಲ್ಲಿ 3 ವಿಕೆಟ್ ಕಬಳಿಸಿ ಎದುರಾಳಿಗಳನ್ನು ಕಂಗೆಡಿಸಿದ್ದರು. ಆದರೂ, ಅವರಿಗೆ ಪೂರ್ಣ 4 ಓವರ್ಗಳ ಕೋಟಾ ನೀಡದ ನಾಯಕನ ನಿರ್ಧಾರವನ್ನು ಶ್ರೀಕಾಂತ್ ಪ್ರಶ್ನಿಸಿದ್ದಾರೆ. “ಬೌಲರ್ನನ್ನು ರಕ್ಷಿಸುವ ಅಥವಾ ಎದುರಾಳಿಗೆ ಅವರ ಬೌಲಿಂಗ್ ಶೈಲಿಯನ್ನು ಹೆಚ್ಚು ತೋರಿಸಬಾರದು ಎಂಬ ಪರಿಕಲ್ಪನೆಯೇ ಅಸಂಬದ್ಧ. ಹಾಗಿದ್ದರೆ ಅವರನ್ನು ರೂಮಿನೊಳಗೆ ಕೂಡಿಹಾಕಿ,” ಎಂದು ಶ್ರೀಕಾಂತ್ ವ್ಯಂಗ್ಯವಾಡಿದ್ದಾರೆ.
ಐದು ವಿಕೆಟ್ ಪಡೆಯುವ ಅವಕಾಶ ತಪ್ಪಿತು
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಶ್ರೀಕಾಂತ್, “ವರುಣ್ ಚಕ್ರವರ್ತಿ 2 ಓವರ್ಗಳಲ್ಲಿ 3 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಅವರಿಗೆ ಇನ್ನುಳಿದ 2 ಓವರ್ಗಳನ್ನು ನೀಡಿದ್ದರೆ, ವಿಶ್ವಕಪ್ನಲ್ಲಿ 5 ವಿಕೆಟ್ ಅಥವಾ 6 ವಿಕೆಟ್ ಪಡೆಯುವ ಐತಿಹಾಸಿಕ ಅವಕಾಶವಿತ್ತು. ಅವರ ವಿಶ್ವಾಸ ಮುಗಿಲೆತ್ತರದಲ್ಲಿತ್ತು. ಇಂತಹ ಸಮಯದಲ್ಲಿ ಬೌಲಿಂಗ್ ನಿಲ್ಲಿಸಿದ್ದು ತಪ್ಪು. ಅವರನ್ನು ಹೆಚ್ಚು ಎಕ್ಸ್ಪೋಸ್ ಮಾಡಬಾರದು ಎಂಬುದು ಹುಚ್ಚುತನದ ವಾದ. ಎಲ್ಲರೂ ಅವರ ಬೌಲಿಂಗ್ ಅನ್ನು ಟಿವಿಯಲ್ಲಿ ಸಾವಿರ ಬಾರಿ ನೋಡಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯವನ್ನು ಬೇಗನೆ ಮುಗಿಸುವ ಬದಲು ಕೊನೆಯವರೆಗೂ ಎಳೆದುಕೊಂಡು ಹೋಗಿದ್ದಕ್ಕೂ ಅವರು ಅಸಮಾಧಾನ ಹೊರಹಾಕಿದ್ದಾರೆ.
ಬುಮ್ರಾ ಪವರ್ಪ್ಲೇ ಬಳಕೆ ಬಗ್ಗೆಯೂ ತಕರಾರು
ಕೇವಲ ವರುಣ್ ಅಷ್ಟೇ ಅಲ್ಲ, ವಿಶ್ವದ ಶ್ರೇಷ್ಠ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಪವರ್ಪ್ಲೇನಲ್ಲಿ ಬಳಸದಿರುವ ಬಗ್ಗೆಯೂ ಶ್ರೀಕಾಂತ್ ಕಿಡಿಕಾರಿದ್ದಾರೆ. “ಬುಮ್ರಾ ಅವರನ್ನು ಪವರ್ಪ್ಲೇನಲ್ಲಿ ಬೌಲಿಂಗ್ ಮಾಡಿಸದಿರಲು ಏನು ಕಾರಣ? ಅವರೇನು ಸಾಧಾರಣ ಬೌಲರೇ 6ನೇ ಓವರ್ ನಂತರ ಬರಲು? ಅವರನ್ನು ಆರಂಭದಲ್ಲೇ ಬಳಸಿಕೊಂಡರೆ ಪಂದ್ಯವನ್ನು ಬೇಗನೆ ಮುಗಿಸಬಹುದು. ಬುಮ್ರಾ ಅವರನ್ನು ಕೂಡ ಈಗ ರಕ್ಷಿಸಲಾಗುತ್ತಿದೆಯೇ ಎಂಬುದು ಅರ್ಥವಾಗುತ್ತಿಲ್ಲ,” ಎಂದು ಶ್ರೀಕಾಂತ್ ನಾಯಕತ್ವದ ತಂತ್ರಗಾರಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಯುವ ಪಡೆಯನ್ನು ಮುನ್ನಡೆಸುತ್ತಿರುವ ಸೂರ್ಯಕುಮಾರ್, ಇದುವರೆಗೂ ಉತ್ತಮ ಫಲಿತಾಂಶ ನೀಡಿದ್ದರೂ, ಹಿರಿಯರ ಈ ಸಲಹೆಗಳು ಮುಂದಿನ ದೊಡ್ಡ ಪಂದ್ಯಗಳಲ್ಲಿ ನಿರ್ಣಾಯಕವಾಗಲಿವೆ.
ಇದನ್ನೂ ಓದಿ : ಸಿದ್ದರಾಮಯ್ಯ ಅವರದ್ದು ಜನರಿಗೆ ಕಾಯಿಸುವುದೇ ಕೈಲಾಸ ನೀತಿಯಾಗಿದೆ | ‘ಕೈ’ ಸಮಾವೇಶದ ಬಗ್ಗೆ ವಿಜಯೇಂದ್ರ ವ್ಯಂಗ್ಯ



















