ಕೇರಳ | ಇತ್ತೀಚೆಗಷ್ಟೇ ಬೆಂಗಳೂರಿನ ಯಲಹಂಕ ಕೋಗಿಲು ಲೇಔಟಿನಲ್ಲಿ ಅಕ್ರಮವಾಗಿ ನೆಲೆಸಿದ್ದವರ ಮನೆಗಳನ್ನು ಧ್ವಂಸಗೊಳಿಸಲಾಗಿತ್ತು. ಇದಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ದುಃಖ ವ್ಯಕ್ತಪಡಿಸಿ, ಕರ್ನಾಟಕದ ವಿರುದ್ಧ ಗುಡುಗಿದ್ದರು. ಆದರೆ, ಈಗ ಮಲಯಾಳಿಗಳು ಗಲ್ಫ್ ನಲ್ಲಿ ಸಾವಿನ ಜೊತೆ ಸರಸವಾಡುತ್ತಿದ್ದಾರೆ. ಒಂದೇ ಒಂದು ವಿಷಾದದ ಮಾತು ಪಿಣರಾಯಿ ಬಾಯಿಂದ ಬಂದಿಲ್ಲ. ಬೆಂಗಳೂರಿನ ಕೇರಳಿಗರ ಬಗ್ಗೆ ಮಾತನಾಡುವ ನಿಮ್ಮ ಧ್ವನಿ, ದೂರದ ಗಲ್ಫ್ ನಲ್ಲಿರೋ ಕೇರಳಿಗರ ಬಗ್ಗೆ ಏಕೆ ಮೌನವಾಯಿತು? ಇಲ್ಲಿ ಮಿಡಿದ ನಿಮ್ಮ ಮನ, ಅಲ್ಲಿ ಏಕೆ ಮಿಡಿಯುತ್ತಿಲ್ಲ? ಇದನ್ನು ನಾವು ಹೇಳುತ್ತಿಲ್ಲ, ನಿಮ್ಮ ರಾಜ್ಯದವರೇ ಪ್ರಶ್ನಿಸುತ್ತಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿ 1 ಕೋಟಿಯಷ್ಟು ಭಾರತೀಯರಿದ್ದಾರೆ. ಈ ಪೈಕಿ ಶೇ. 30ರಿಂದ 35ರಷ್ಟು ಜನ ಕೇರಳದವರಿದ್ದಾರೆ. ಅವರೆಲ್ಲ ಈಗ ಇರಾನ್ ನ ದಾಳಿಯಿಂದಾಗಿ ಗಲ್ಫ್ ನ ಬೇರೆ ಬೇರೆ ರಾಷ್ಟ್ರಗಳಲ್ಲಿ ಸಿಲುಕಿದ್ದಾರೆ. ಆದರೂ ಕೇರಳ ಸಿಎಂ ಪಿಣರಾಯಿ ವಿಜಯನ್ ತುಟಿಪಿಟಕ್ ಎನ್ನುತ್ತಿಲ್ಲ. ತಮ್ಮವರಿಗಾಗಿ ಕಂಬನಿ ಮಿಡಿಯುತ್ತಿಲ್ಲ. ಏಕೆಂದರೆ ಚುನಾವಣೆ ಇದೆ. ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಇಡೀ ಮುಸ್ಲಿಂ ಸಮುದಾಯ ಬೀದಿಗಳಿದಿದೆ. ಅವರೆಲ್ಲ ಇರಾನ್ ಸರ್ವೋಚ್ಚ ನಾಯಕ ಖಮೇನಿ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. ಈ ಸಂದರ್ಭದಲ್ಲಿ ಇರಾನ್ ವಿರುದ್ಧ ಯಾವ ಹೇಳಿಕೆ ನೀಡೋಕೆ ಸಾಧ್ಯ ಅಲ್ವಾ? ಇದನ್ನ ನಾವು ಹೇಳ್ತಿಲ್ಲ, ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಆರೋಪವಾಗಿದೆ.
ಅಮೆರಿಕ-ಇಸ್ರೇಲ್ ಸೇರಿ ಇರಾನ್ ಮೇಲೆ ದಾಳಿ ಮಾಡಿದ್ದು ತಪ್ಪು ಅಂತಾ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದೆ ತಡ ಕಾಂಗ್ರೆಸ್ ಹಾಗೂ ಅದರ ಬಾಲಂಗೋಚಿಗಳು ಜೈ ಅನ್ನುತ್ತಿವೆ. ಬೆಂಗಳೂರಿನಲ್ಲಿ ಎಲ್ಲಿಂದಲೋ ಬಂದು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದವರ ನೋವು ಗೊತ್ತಾಗತ್ತೆ. ನಿಮ್ಮದೇ ನಾಡಿನ ನಿಮ್ಮದೇ ಮಲಯಾಳಿಗಳು ಕೊಲ್ಲಿಯಲ್ಲಿ ಸಾವಿನೊಂದಿಗೆ ಸರಸವಾಡುತ್ತಿರುವುದು ನಿಮಗೆ ಗೊತ್ತಾಗುತ್ತಿಲ್ಲವೇ? ಅಮೆರಿಕ ಹಾಗೂ ಇಸ್ರೇಲ್ ಸೇರಿ ಇರಾನ್ ಮೇಲೆ ಯುದ್ಧ ಹೂಡಿದ್ರೆ, ಇರಾನ್ ಇಡೀ ಕೊಲ್ಲಿಯ ಮೇಲೆ ದಾಳಿ ಮಾಡುತ್ತಿದೆ. ಇದರಿಂದಾಗಿಯೇ ನಿಮ್ಮ ಮಲಯಾಳಿಗಳು ಅಲ್ಲಿ ಸಂಕಷ್ಟ ಅನುಭವಿಸುತ್ತಿರುವುದು. ಆದರೂ ಇರಾನ್ ಪರ ನಿಲ್ಲುತ್ತಿರುವ ನಿಮ್ಮ ಧೋರಣೆ ಒಪ್ಪುವಂತದ್ದೆ?
ನಿಮ್ಮ ಈ ವೋಟ್ ಬ್ಯಾಂಕ್ ತುಷ್ಟೀಕರಣ ನೀತಿಗೆ ಏನನ್ನಬೇಕು? ಮಲಯಾಳಿಗಳ ಮೇಲೆ ಇವರಿಗೆ ಪ್ರೀತಿ ಇಲ್ಲ. ಬದಲಾಗಿ ಇರಾನಿಗರ ಮೇಲೆ ಕಾಳಜಿ ಹೆಚ್ಚಾಗಿದೆ. ವೋಟ್ ಬ್ಯಾಂಕ್ ರಾಜಕಾರಣ ಮಿತಿ ಮೀರಿದೆ. ಕೇರಳದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಸಿಪಿಎಂ ನೇತೃತ್ವದ ಎಲ್ ಡಿಎಫ್ ಒಂದೇ ನಾಣ್ಯದ ಎರಡು ಮುಖಗಳಂತೆ ಇವೆ ಅಂತಾ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.
ಕೇರಳದಲ್ಲಿನ ಸುಮಾರು 100 ಮನೆಗಳ ಪೈಕಿ 10ರಷ್ಟು ಮನೆಯಲ್ಲಿನ ಒಬ್ಬ ಸದಸ್ಯರಾದರೂ ಗಲ್ಫ್ ರಾಷ್ಟ್ರದಲ್ಲಿದ್ದಾರೆ. ಆದರೆ ಏನು ಮಾಡೋದು ಎಸ್ ಡಿಪಿಐ ಸೇರಿದಂತೆ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಖಮೇನಿ ಕಳೆದುಕೊಂಡಿರುವ ದುಃಖ ಅವರನ್ನು ಕಾಡುತ್ತಿದೆ. ಹೀಗಾಗಿ ಈ ಮುಸ್ಲಿಂರ ದುಃಖ, ಪಿಣರಾಯಿ ವಿಜಯನ್ ಅವರ ಕರಳು ಹಿಂಡುತ್ತಿರಬಹುದು. ಲೆಫ್ಟ್ ಲಿಬರಲ್ ಗಳಾಗಲಿ, ಪ್ರಗತಿಪರರಾಗಲಿ, ಸೆಕ್ಯೂಲರ್, ಕಾಂಗ್ರೆಸ್ ಸೇರಿ ಭಾರತೀಯ ಮಲಯಾಳಿಗಳ ಪರ ಇನ್ನಾದರೂ ಚಿಂತಿಸಬೇಕಿದೆ. ನಮ್ಮ ಮನವಂತೂ ಮಲಯಾಳಿಗಳಿಗಾಗಿ ಮಿಡಿಯುತ್ತಿದೆ. ಅವರು ಸೇರಿದಂತೆ ಇಡೀ ಭಾರತೀಯರು ಗಲ್ಫ್ ನಲ್ಲಿ ಸುರಕ್ಷಿತವಾಗಿರಲಿ. ಅವರಿಗೆ ಸಣ್ಣ ಗಾಯವವೂ ಆಗದಿರಲಿ. ಅವರ ಕುಟುಂಬ ನೆಮ್ಮದಿಯಿಂದ ಇರಲಿ.
ಇದನ್ನೂ ಓದಿ : ಸೂಪರ್ಸ್ಟಾರ್ ಸಂಸ್ಕೃತಿಗೆ ಇತಿಶ್ರೀ ಹಾಡಿದ ಗಂಭೀರ್.. ಪಾಕ್ನ ವೈಯಕ್ತಿಕ ದಾಖಲೆಗಳ ಗೀಳಿಗೆ ಇಂಗ್ಲೆಂಡ್ ಮಾಜಿ ಆಟಗಾರನ ಚಾಟಿ



















