ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಹೋರ್ನ ಬದ್ದರ್ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಏಳು ಮಂದಿ ಸೇರಿದಂತೆ ಕನಿಷ್ಠ 11 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ ಸಂಭವಿಸಿದ್ದು, ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ನಜೀರ್ ಅಹ್ಮದ್ (38), ಅವರ ಪತ್ನಿ ವಜೀರಾ ಬೇಗಂ (35) ಮತ್ತು ಅವರ ಮಕ್ಕಳಾದ ಬಿಲಾಲ್ ಅಹ್ಮದ್ (13), ಮೊಹಮ್ಮದ್ ಮುಸ್ತಫಾ (11), ಮೊಹಮ್ಮದ್ ಆದಿಲ್ (8), ಮೊಹಮ್ಮದ್ ಮುಬಾರಕ್ (6) ಮತ್ತು ಮೊಹಮ್ಮದ್ ವಾಸಿಂ (5) ಎಂದು ಗುರುತಿಸಲಾಗಿದೆ.
ಗುಡ್ಡದ ಇಳಿಜಾರಿನಲ್ಲಿದ್ದ ಮನೆಯಲ್ಲಿ ನಜೀರ್ ಕುಟುಂಬಸ್ಥರು ನಿದ್ರಿಸುತ್ತಿದ್ದಾಗಲೇ ಗುಡ್ಡ ಕುಸಿತ ಸಂಭವಿಸಿದೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಂಬನ್ ಜಿಲ್ಲೆಯಲ್ಲಿ ಮೇಘಸ್ಫೋಟದಿಂದ ದಿಢೀರ್ ಪ್ರವಾಹ ಉಂಟಾದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಭೂಕುಸಿತ ಮತ್ತು ಮೇಘಸ್ಫೋಟ ಅವಘಡಗಳಲ್ಲಿ 40ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದಾರೆ.



















