ಬೆಂಗಳೂರು: ಭಾರತೀಯ ಕ್ರಿಕೆಟ್ ರಂಗದಲ್ಲಿ ಒಂದೆಡೆ ಯುವ ಪ್ರತಿಭೆಗಳ ಹೊಸ ಅಲೆ ಅಪ್ಪಳಿಸುತ್ತಿರುವಾಗ, ಸದ್ದಿಲ್ಲದೆ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ ಕನ್ನಡಿಗ ಬ್ಯಾಟ್ಸ್ಮನ್ ಕರುಣ್ ನಾಯರ್. ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಗಳಿಸಿದ ಭಾರತದ ಹೆಮ್ಮೆಯ ಎರಡನೇ ಆಟಗಾರನೆಂಬ ಐತಿಹಾಸಿಕ ಸಾಧನೆ ಮಾಡಿದರೂ ನಂತರ ತಂಡದಿಂದ ಹೊರಬಿದ್ದು 8 ವರ್ಷಗಳ ಕಾಲ ಸುದೀರ್ಘ ಕಾಯುವಿಕೆಗೆ ಒಳಗಾಗಿದ್ದ ನಾಯರ್, ಇದೀಗ ಭಾರತದ ಟೆಸ್ಟ್ ತಂಡಕ್ಕೆ ಮರುಪ್ರವೇಶಿಸಿದ್ದಾರೆ.
ಇದು, ದಿನೇಶ್ ಕಾರ್ತಿಕ್ ಮತ್ತು ಜಯದೇವ್ ಉನದ್ಕಟ್ ಅವರಂತಹ ಆಟಗಾರರು ಸೇರಿರುವ ಸತತ ಎರಡು ಟೆಸ್ಟ್ ಪಂದ್ಯಗಳ ನಡುವೆ ಅತಿ ಹೆಚ್ಚು ದಿನಗಳ ಅಂತರ ಕಂಡಿರುವವರ ಅಪರೂಪದ ಕ್ಲಬ್ಗೆ ನಾಯರ್ ಸೇರ್ಪಡೆ ಆಗಿದೆ. .
ಕರುಣ್ ನಾಯರ್ 3006 ದಿನಗಳ (ಅಂದರೆ ಬರೋಬ್ಬರಿ 8 ವರ್ಷ 86 ದಿನಗಳು) ನಂತರ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಈ ದೀರ್ಘಾವಧಿಯಲ್ಲಿ ಅವರು ಭಾರತಕ್ಕಾಗಿ ಒಟ್ಟು 77 ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಯಾವುದೇ ಆಟಗಾರನಿಗಾದರೂ ಇದು ಕಠಿಣ ಸವಾಲಾಗಿದ್ದು, ಈ ಅವಧಿಯಲ್ಲಿ ದೇಶಿ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡುವುದು ಅನಿವಾರ್ಯವಾಗಿತ್ತು.
ರಣಜಿ ಕಿರೀಟದೊಂದಿಗೆ ಹಿಂದಿರುಗಿದ ಹೀರೋ
ನಾಯರ್ ಅವರ ಈ ಮಹತ್ವದ ಮರುಪ್ರವೇಶದ ಹಿಂದೆ ಅವರ ಇತ್ತೀಚಿನ ರಣಜಿ ಋತುವಿನ (2024-25) ಅದ್ಭುತ ಪ್ರದರ್ಶನವೇ ಪ್ರಮುಖ ಕಾರಣ. ಕರ್ನಾಟಕದಿಂದ ವಿದರ್ಭ ತಂಡಕ್ಕೆ ತೆರಳಿದ್ದ ಕರುಣ್, ಸಂಪೂರ್ಣ ಋತುವಿನಲ್ಲಿ ತಂಡದ ಆಧಾರಸ್ತಂಭವಾಗಿ ನಿಂತಿದ್ದರು. ಒಂಬತ್ತು ಪಂದ್ಯಗಳಲ್ಲಿ ಅವರು 54ರ ಅತ್ಯುತ್ತಮ ಸರಾಸರಿಯಲ್ಲಿ ಬರೋಬ್ಬರಿ 863 ರನ್ ಗಳಿಸಿ, ಬ್ಯಾಟಿಂಗ್ ವಿಭಾಗದಲ್ಲಿ ತಂಡವನ್ನು ಮುನ್ನಡೆಸಿದರು.
ಅವರ ಈ ಅಮೋಘ ಬ್ಯಾಟಿಂಗ್ ಪ್ರದರ್ಶನ ಮತ್ತು ಅನುಭವದ ನೆರವಿನಿಂದಲೇ ವಿದರ್ಭ ತಂಡವು ಈ ಬಾರಿಯ ಪ್ರತಿಷ್ಠಿತ ರಣಜಿ ಟ್ರೋಫಿಯನ್ನು ಮೂರನೇ ಬಾರಿಗೆ ತಮ್ಮದಾಗಿಸಿಕೊಂಡಿತು. ಈ ರಣಜಿ ಕಿರೀಟವನ್ನು ಎತ್ತಿಹಿಡಿದು, ಅದ್ಭುತ ಫಾರ್ಮ್ನೊಂದಿಗೆ ರಾಷ್ಟ್ರೀಯ ತಂಡಕ್ಕೆ ಮರಳಿರುವ ಕರುಣ್ ನಾಯರ್ ಅವರ ಕಥೆ, ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮಕ್ಕೆ ಸಿಗುವ ಪ್ರತಿಫಲಕ್ಕೆ ಉತ್ತಮ ಉದಾಹರಣೆಯಾಗಿದೆ.
ಕರುಣ್ ನಾಯರ್ ಅವರ ಈ ಕಂಬ್ಯಾಕ್, ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿಗಳು ದೇಶಿ ಕ್ರಿಕೆಟ್ನಲ್ಲಿನ ಪ್ರದರ್ಶನಕ್ಕೆ ಇನ್ನೂ ಮಹತ್ವ ನೀಡುತ್ತವೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಟೆಸ್ಟ್ ಕ್ರಿಕೆಟ್ನ ದೀರ್ಘ ಸ್ವರೂಪಕ್ಕೆ ಅವರಂತಹ ಅನುಭವಿ, ತಾಳ್ಮೆಯುಳ್ಳ ಮತ್ತು ದೊಡ್ಡ ಇನ್ನಿಂಗ್ಸ್ ಕಟ್ಟಬಲ್ಲ ಬ್ಯಾಟ್ಸ್ಮನ್ ಅಗತ್ಯವಿದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ತಂಡದಲ್ಲಿ ಅವರಿಗೆ ಯಾವ ಪಾತ್ರ ಸಿಗಲಿದೆ ಮತ್ತು ಅವರು ತಮ್ಮ ಸಾಮರ್ಥ್ಯವನ್ನು ಹೇಗೆ ಮತ್ತೊಮ್ಮೆ ಸಾಬೀತುಪಡಿಸುತ್ತಾರೆ ಎಂಬುದನ್ನು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.