ಜಿನೀವಾ/ನವದೆಹಲಿ : ಜಮ್ಮು ಕಾಶ್ಮೀರದ ಅಭಿವೃದ್ಧಿಯ ಕುರಿತು ಸುಳ್ಳು ಮಾಹಿತಿ ಹರಡುತ್ತಿರುವ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (UNHRC) ಭಾರತವು ಚಳಿಬಿಡಿಸಿದೆ. ಪಾಕಿಸ್ತಾನವು ವಾಸ್ತವವನ್ನು ಅರಿಯದೆ “ಲಾ-ಲಾ ಲ್ಯಾಂಡ್” (ಕಲ್ಪನಾ ಲೋಕ)ನಲ್ಲಿ ಬದುಕುತ್ತಿದೆ ಎಂದು ಭಾರತದ ರಾಜತಾಂತ್ರಿಕ ಅಧಿಕಾರಿ ಅನುಪಮಾ ಸಿಂಗ್ ವ್ಯಂಗ್ಯವಾಡಿದ್ದು, ಜಮ್ಮು ಕಾಶ್ಮೀರದ ಅಭಿವೃದ್ಧಿ ಬಜೆಟ್, ಪಾಕಿಸ್ತಾನವು ಇತ್ತೀಚೆಗೆ ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಕೇಳಿರುವ ತುರ್ತು ಆರ್ಥಿಕ ನೆರವಿಗಿಂತ (ಬೇಲೌಟ್ ಪ್ಯಾಕೇಜ್) ಎರಡು ಪಟ್ಟು ಹೆಚ್ಚಿದೆ ಎಂದು ಅವರು ಅಂಕಿಅಂಶಗಳ ಸಮೇತ ತಿರುಗೇಟು ನೀಡಿದ್ದಾರೆ.
ಅಭಿವೃದ್ಧಿ ಕಂಡು ಪಾಕ್ಗೆ ಅಸೂಯೆ
ವಿಶ್ವಸಂಸ್ಥೆಯ 61ನೇ ಅಧಿವೇಶನದಲ್ಲಿ ಮಾತನಾಡಿದ ಅನುಪಮಾ ಸಿಂಗ್, ಜಮ್ಮು-ಕಾಶ್ಮೀರದಲ್ಲಿ ಕಳೆದ ವರ್ಷ ಉದ್ಘಾಟನೆಯಾದ ವಿಶ್ವದ ಅತಿ ಎತ್ತರದ ‘ಚೆನಾಬ್ ರೈಲ್ವೆ ಸೇತುವೆ’ಯನ್ನು ಪಾಕಿಸ್ತಾನವು ಸುಳ್ಳು ಎಂದು ಭಾವಿಸಿದ್ದರೆ, ಅದು ಪಾಕಿಸ್ತಾನದ ಭ್ರಮೆ ಅಥವಾ ಹಗಲುಗನಸು ಎಂದೇ ಅರ್ಥ. ಭಾರತೀಯ ಭೂಪ್ರದೇಶದಲ್ಲಿ ನಡೆಯುತ್ತಿರುವ ಅದ್ಭುತ ಪ್ರಗತಿಯನ್ನು ಸಹಿಸಲಾಗದ ಪಾಕಿಸ್ತಾನ ಮಾಡುತ್ತಿರುವ ಅಪಪ್ರಚಾರವು ಈಗ ಅಸೂಯೆಯಾಗಿ ಬದಲಾಗಿದೆ ಎಂದು ಅವರು ಟೀಕಿಸಿದ್ದಾರೆ. ಇಸ್ಲಾಮಿಕ್ ಸಹಕಾರ ಸಂಘಟನೆಯನ್ನು (OIC) ಪಾಕಿಸ್ತಾನವು ತನ್ನ ಸುಳ್ಳುಗಳಿಗೆ ಬಳಸಿಕೊಳ್ಳುತ್ತಿರುವುದನ್ನೂ ಭಾರತ ಖಂಡಿಸಿದೆ.
ಪ್ರಜಾಪ್ರಭುತ್ವದ ಪಾಠ ನಮಗೆ ಬೇಡ
ಪಾಕಿಸ್ತಾನದ ಆಂತರಿಕ ರಾಜಕೀಯ ಅಸ್ಥಿರತೆಯನ್ನು ನೆನಪಿಸಿದ ಭಾರತದ ಪ್ರತಿನಿಧಿ, ನಾಗರಿಕ ಸರ್ಕಾರಗಳು ತಮ್ಮ ಅಧಿಕಾರಾವಧಿಯನ್ನು ಪೂರೈಸಲು ಸಾಧ್ಯವಾಗದಂಥ ಪರಿಸ್ಥಿತಿಯಿರುವ ದೇಶದಿಂದ ಭಾರತವು ಪ್ರಜಾಪ್ರಭುತ್ವದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಕಂಡುಬಂದ ದಾಖಲೆ ಮಟ್ಟದ ಮತದಾನವು ಅಲ್ಲಿನ ಜನತೆ ಭಯೋತ್ಪಾದನೆಯ ಸಿದ್ಧಾಂತವನ್ನು ತಿರಸ್ಕರಿಸಿ, ಅಭಿವೃದ್ಧಿಯ ಹಾದಿಯನ್ನು ಆಯ್ದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದೂ ಅವರು ಪ್ರತಿಪಾದಿಸಿದ್ದಾರೆ.
ಕಾಶ್ಮೀರ ಎಂದಿಗೂ ಭಾರತದ ಅವಿಭಾಜ್ಯ ಅಂಗ
ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗವಾಗಿದೆ ಎಂಬ ನಿಲುವನ್ನು ಭಾರತ ಪುನರುಚ್ಚರಿಸಿದೆ. 1947ರಲ್ಲಿ ನಡೆದ ವಿಲೀನ ಪ್ರಕ್ರಿಯೆಯು ಸಂಪೂರ್ಣವಾಗಿ ಕಾನೂನುಬದ್ಧ ಮತ್ತು ಬದಲಾಯಿಸಲಾಗದ ಪ್ರಕ್ರಿಯೆಯಾಗಿದೆ. ಈ ಪ್ರದೇಶಕ್ಕೆ ಸಂಬಂಧಿಸಿದಂತೆ ಉಳಿದಿರುವ ಏಕೈಕ ವಿವಾದವೆಂದರೆ ಪಾಕಿಸ್ತಾನವು ಕಾನೂನುಬಾಹಿರವಾಗಿ ವಶಪಡಿಸಿಕೊಂಡಿರುವ ಭಾರತೀಯ ಭೂಪ್ರದೇಶಗಳನ್ನು ತೆರವುಗೊಳಿಸುವುದು ಮಾತ್ರ ಎಂದು ಅನುಪಮಾ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯ ಮೂಲಕ ಜಮ್ಮು-ಕಾಶ್ಮೀರವನ್ನು ಅಸ್ಥಿರಗೊಳಿಸಲು ಸತತವಾಗಿ ಪ್ರಯತ್ನಿಸುತ್ತಿದೆ. ಆದರೆ ವಿಶ್ವಸಂಸ್ಥೆಯಂತಹ ವೇದಿಕೆಗಳಲ್ಲಿ ದೊಡ್ಡ ಮಾತುಗಳನ್ನು ಆಡುವ ಬದಲು ಪಾಕಿಸ್ತಾನವು ತನ್ನ ದೇಶದಲ್ಲಿ ತೀವ್ರಗೊಳ್ಳುತ್ತಿರುವ ಆರ್ಥಿಕ ಮತ್ತು ಆಂತರಿಕ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವತ್ತ ಗಮನಹರಿಸುವುದು ಉತ್ತಮ ಎಂದು ಭಾರತ ಎಚ್ಚರಿಸಿದೆ. ಪಾಕಿಸ್ತಾನದ ಬಣ್ಣದ ಮಾತುಗಳನ್ನು ಇಡೀ ಜಗತ್ತು ಅರಿತಿದೆ ಎಂದು ಹೇಳುವ ಮೂಲಕ ಭಾರತವು ಇಸ್ಲಾಮಾಬಾದ್ನ ಮುಖವಾಡವನ್ನು ಜಾಗತಿಕ ವೇದಿಕೆಯಲ್ಲೇ ಕಳಚಿದೆ.
ಇದನ್ನೂ ಓದಿ : ಖಾತೆ ಬದಲಾವಣೆಗೆ 8,500 ರೂ. ಲಂಚ | ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ



















