ಬೆಂಗಳೂರು: ನಿಮ್ಮನ್ನು ಬಿಜೆಪಿಗೆ ಕರೆ ತಂದವರು ಯಡಿಯೂರಪ್ಪ ಎಂಬುವುದನ್ನು ಮರೆಯಬೇಡಿ ಎಂದು ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ (M.P.Renukaswamy) ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮನ್ನು ಬಿಜೆಪಿಗೆ ತಂದವರ ವಿರುದ್ಧ ಇಲ್ಲಸಲ್ಲದ ಟೀಕೆ ಮಾಡಿದರೆ ನಾವು ಸುಮ್ಮನಿರುವುದಿಲ್ಲ. ಅನಾವಶ್ಯಕವಾಗಿ ಮಾತನಾಡಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದಿದ್ದಾರೆ.
ನೀವು ನಮ್ಮ ನಾಯಕ ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ನಮಗೆ ತೀವ್ರ ನೋವು ತಂದಿದೆ. ಇದರಿಂದಾಗಿ ಕಾರ್ಯಕರ್ತರು ನಿಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ ಇರಬೇಕು. ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಅಲ್ಲ. ಹೈಕಮಾಂಡ್ಗೂ ಭೇಟಿ ಮಾಡಿ ತಿಳಿಸುತ್ತೇವೆ. ಮುಂದಿನ ವಾರ ಮತ್ತೊಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಿದ ಮಹಾನ್ ನಾಯಕ ಯಡಿಯೂರಪ್ಪ. ಅಂಬಾಸಿಡರ್ ಕಾರ್, ಕೆಎಸ್ಆರ್ಟಿಸಿ ಬಸ್, ಸೈಕಲ್ನಲ್ಲಿ ಓಡಾಡಿ ಪಕ್ಷ ಕಟ್ಟಿದ್ದಾರೆ. 46 ನೇ ವಯಸ್ಸಿನಲ್ಲಿ ಯಡಿಯೂರಪ್ಪ ಅಧ್ಯಕ್ಷ ಆಗಿದ್ದರು. ಒಬ್ಬರೇ ಶಾಸಕರಿದ್ದರೂ ಪಕ್ಷ ಕಟ್ಟಲು ಓಡಾಡಿದರು. ಯಡಿಯೂರಪ್ಪ ಪ್ರಶ್ನಾತೀತ ನಾಯಕ, ರಾಜ್ಯದ ಜನ ಬಯಸಿ ಸಿಎಂ ಮಾಡಿದರು. ಅಂತಹ ನಾಯಕರಿಗೆ ಈ ರೀತಿ ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಗುಡುಗಿದ್ದಾರೆ.
ಸಂಘಪರಿವಾರದ ಅಭಿಪ್ರಾಯದ ಮೇಲೆ ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. ವಿಜಯೇಂದ್ರ ಸಾಮರ್ಥ್ಯ ನೋಡಿ ರಾಷ್ಟ್ರೀಯ ನಾಯಕರು ಅವಕಾಶ ನೀಡಿದ್ದಾರೆ. ಈಗ ವಿರೋಧಿಗಳು ಮಾತನಾಡುತ್ತಿರುವುದು ವಿಜಯೇಂದ್ರ ವಿರುದ್ಧ ಅಲ್ಲ, ಮೋದಿ ವಿರುದ್ಧ, ರಾಷ್ಟ್ರೀಯ ನಾಯಕರ ವಿರುದ್ಧ. ಯಡಿಯೂರಪ್ಪ ಅವರನ್ನ ಟೀಕಿಸೋದು ಒಂದೇ, ರಾಷ್ಟ್ರೀಯ ನಾಯಕರನ್ನ ಟೀಕಿಸೋದು ಒಂದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.