ಬೆಂಗಳೂರು : ಐಪಿಎಲ್ ಟಿಕೆಟ್ಗಾಗಿ ಯಾವುದೇ ಶಾಸಕರು ಭಿಕ್ಷೆ ಬೇಡಬಾರದು. ಚುನಾವಣೆಯಲ್ಲಿ ನೂರಾರು ಕೋಟಿ ರೂಪಾಯಿ ಸುರಿದು ಶಾಸಕರಾದವರು, ಈಗ ಒಂದು ಐಪಿಎಲ್ ಟಿಕೆಟ್ಗಾಗಿ ಹೀಗೆ ಕೈಚಾಚುತ್ತಿರುವುದು ನಾಚಿಕೆಗೇಡಿನ ಸಂಗತಿ. ಯಾವುದೇ ಜನಪ್ರತಿನಿಧಿ ಇಂತಹ ಕೆಲಸಕ್ಕೆ ಕೈಹಾಕಬಾರದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಟಿಕೆಟ್ಗಾಗಿ ವಿಧಾನಸಭೆಯಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಮತ್ತು ಸ್ಪೀಕರ್ ಕಚೇರಿ ಮುಂದೆ ಶಾಸಕರ PA ಸಾಲುಗಟ್ಟಿ ನಿಂತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ವಿ. ಸದಾನಂದಗೌಡ, ಶಾಸಕರ ಈ ನಡವಳಿಕೆಯನ್ನು ಅವರು ಭಿಕ್ಷೆ ಬೇಡುವ ಕೆಲಸ ಎಂದು ಕಟುವಾಗಿ ಟೀಕಿಸಿದ್ದಾರೆ.
ಇತ್ತೀಚೆಗೆ ಆರ್ಸಿಬಿ ವಿಜಯೋತ್ಸವದ ವೇಳೆ 11 ಅಭಿಮಾನಿಗಳು ಮೃತಪಟ್ಟ ಘಟನೆಯನ್ನು ಸ್ಮರಿಸಿದ ಸದಾನಂದಗೌಡ, ಆ ಅಮಾಯಕ ಅಭಿಮಾನಿಗಳ ಸಾವಿನ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಿದ್ದರೆ ಸದನಕ್ಕೆ ಒಂದು ಗೌರವವಿರುತ್ತಿತ್ತು. ಆದರೆ, ಜನರ ಸಾವಿನ ಬಗ್ಗೆ ಮಾತನಾಡದವರು ಟಿಕೆಟ್ಗಾಗಿ ಚರ್ಚೆ ಮಾಡುತ್ತಾರೆ ಎಂದರೆ ಏನನ್ನಬೇಕು?” ಎಂದು ಪ್ರಶ್ನಿಸಿದ್ದಾರೆ.
ಶಾಸಕರಿಗೆ ಕಿವಿಮಾತು ಹೇಳಿದ ಡಿವಿಎಸ್, ನಿಮ್ಮ ಕ್ಷೇತ್ರಕ್ಕೆ ಏನಾದರೂ ಅಭಿವೃದ್ಧಿ ಕೆಲಸಗಳು ಬೇಕಾದಾಗ, ಜನರಿಗೆ ಸಹಕಾರ ಬೇಕಾದಾಗ ಸರ್ಕಾರದ ಮುಂದೆ ಬೇಕಿದ್ದರೆ ಭಿಕ್ಷೆ ಬೇಡಿ, ಅದರಲ್ಲಿ ತಪ್ಪಿಲ್ಲ. ಆದರೆ ವೈಯಕ್ತಿಕ ಮೋಜು-ಮಸ್ತಿಗಾಗಿ, ಐಪಿಎಲ್ ಪಂದ್ಯ ನೋಡಲು ಈ ರೀತಿ ವರ್ತಿಸುವುದು ಸರಿಯಲ್ಲ” ಎಂದು ಕಿಡಿಕಾರಿದ್ದಾರೆ.
ಶಾಸಕರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಕ್ಯೂ ನಿಂತು ಟಿಕೆಟ್ ಪಡೆದಿರುವುದನ್ನು ಖಂಡಿಸಿದ ಅವರು, ಇದು ಜನಪ್ರತಿನಿಧಿಗಳ ಘನತೆಗೆ ತಕ್ಕುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಭುಗಿಲೆದ್ದ ಕಸ ವಿಲೇವಾರಿ ಘಟಕದ ವಿವಾದ – ಪೌರಾಯುಕ್ತೆ ಅಮೃತಾ ಗೌಡಗೆ ಮುತ್ತಿಗೆ ಹಾಕಿ ಪ್ರತಿಭಟನೆ



















