ಗದಗ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ (Micro Finance) ಹಾಗೂ ಸಾಲ ವಸೂಲಿಗಾರರ ಕಾಟ ಹೆಚ್ಚಾಗುತ್ತಿದೆ. ಸಾಲಕ್ಕೆ ನಲುಗುತ್ತಿರುವ ಜನ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ ಕಠಿಣ ನಿಯಮ ಜಾರಿಗೆ ತಂದಿದ್ದು, ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
1 ಲಕ್ಷ ರೂ ಸಾಲದ ಬಡ್ಡಿ ನೀಡದ ಹಿನ್ನೆಲೆಯಲ್ಲಿ ಮನಬಂದಂತೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಗರದ ಬೆಟಗೇರಿಯಲ್ಲಿ (Gadag Betageri) ನಡೆದಿದೆ. ದಶರಥ ಬಳ್ಳಾರಿ ಹಲ್ಲೆಗೊಳಗಾದ ವ್ಯಕ್ತಿ ಎನ್ನಲಾಗಿದೆ.
ಬೆಟಗೇರಿ ನಿವಾಸಿ ದಶರಥ ಅವರು ಮಂಜುನಾಥ ಹಂಸನೂರ ಎಂಬ ವ್ಯಕ್ತಿಯ ಬಳಿ ಖಾಸಗಿಯಾಗಿ ಎರಡು ವರ್ಷಗಳ ಹಿಂದೆ 1 ಲಕ್ಷ ರೂ.ಹಣ ಪಡೆದಿದ್ದರು. ಈ ಸಾಲಕ್ಕೆ ಅವರಿಗೆ ಬಡ್ಡಿ ಸಹ ನೀಡುತ್ತಿದ್ದರು.
ಇತ್ತೀಚೆಗೆ ಕೆಲಸ ಇಲ್ಲದಕ್ಕೆ ಬಡ್ಡಿ ಹಣ ತುಂಬಲು ವಿಳಂಬ ಮಾಡಿದ್ದಾರೆ. ವಿಳಂಬ ಮಾಡಿದ್ದಕ್ಕೆ ಜ.21 ರಂದು ರಾತ್ರಿ ದಶರಥ ಅವರನ್ನು ಸೆಟಲ್ಮೆಂಟ್ ನಗರದ ಮನೆಯೊಂದರಲ್ಲಿ ಕರೆದೊಯ್ದ ಮನಬಂದಂತೆ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಂಜುನಾಥ ಹಂಸನೂರ, ಮಹೇಶ್ ಹಂಸನೂರ, ಡಿಸ್ಕವರಿ ಮಂಜು ಹಾಗೂ ಹನುಮಂತ ಎಂಬುವವರ ವಿರುದ್ಧ ಹಲ್ಲೆಯ ಆರೋಪ ಕೇಳಿ ಬಂದಿದೆ. ಬಟ್ಟೆ ಬಿಚ್ಚಿ, ಬಾಯಿಗೆ ಬಟ್ಟೆ ತುಂಬಿ, ಮದ್ಯ ಸೇವಿಸುತ್ತ ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿ 3ರ ವರೆಗೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬೆಲ್ಟ್, ಕೇಬಲ್ ವಯರ್, ಲಾಠಿಯಿಂದ ಮೈ, ಕೈ, ಕಾಲು, ಬೆನ್ನು, ಮುಖ, ತಲೆ ಎಲ್ಲಾ ಬಾಸುಂಡೆ ಬರುವಂತೆ ಥಳಿಸಿದ್ದಾರೆ ಎಂದು ದಶರಥ ಆರೋಪಿಸಿದ್ದಾರೆ. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ದಶರಥ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಬೆಟಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.