ನವದೆಹಲಿ : ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ, ಭಾರತವು ತನ್ನ ಆಯಕಟ್ಟಿನ ಕಚ್ಚಾ ತೈಲ ಮೀಸಲು (SPR) ವ್ಯವಸ್ಥೆಯನ್ನು ಬಲಪಡಿಸಿಕೊಂಡಿದೆ.

ದೇಶದ ಭೂಗತ ತೈಲ ಸಂಗ್ರಹಾಗಾರಗಳು ಪ್ರಸ್ತುತ ಶೇಕಡಾ 66 ರಷ್ಟು (ಮೂರನೇ ಎರಡರಷ್ಟು) ಭರ್ತಿಯಾಗಿವೆ ಎಂದು ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಭಾರತವು ಆಂಧ್ರಪ್ರದೇಶದಲ್ಲಿ ಒಂದು ಮತ್ತು ಕರ್ನಾಟಕದಲ್ಲಿ ಎರಡು ಭೂಗತ ತೈಲ ಸಂಗ್ರಹ ಸೌಲಭ್ಯಗಳನ್ನು ಹೊಂದಿದೆ. ಇವುಗಳ ಒಟ್ಟು ಸಾಮರ್ಥ್ಯ 5.33 ಮಿಲಿಯನ್ ಟನ್ ಆಗಿದ್ದು, ಸದ್ಯ ಇವುಗಳಲ್ಲಿ 3.372 ಮಿಲಿಯನ್ ಟನ್ ಕಚ್ಚಾ ತೈಲ ಸಂಗ್ರಹವಿದೆ. ಯುದ್ಧದಂತಹ ತುರ್ತು ಸಂದರ್ಭಗಳಲ್ಲಿ ಪೂರೈಕೆ ಸ್ಥಗಿತಗೊಂಡರೆ, ಈ ಸಂಗ್ರಹವು ದೇಶಕ್ಕೆ ಸುಮಾರು 9.5 ದಿನಗಳವರೆಗೆ ಇಂಧನ ಭದ್ರತೆ ನೀಡಬಲ್ಲದು. ಇದಲ್ಲದೆ, ತೈಲ ಮಾರುಕಟ್ಟೆ ಕಂಪನಿಗಳ ಬಳಿ ಇರುವ ಸಿದ್ಧ ಇಂಧನವನ್ನೂ ಸೇರಿಸಿದರೆ, ಭಾರತದ ಬಳಿ ಒಟ್ಟು 74 ದಿನಗಳಿಗೆ ಆಗುವಷ್ಟು ತೈಲ ದಾಸ್ತಾನು ಇದೆ ಎಂದು ಸಚಿವರು ವಿವರಿಸಿದ್ದಾರೆ.
ಪೂರೈಕೆ ಮಾರ್ಗ ಬದಲಿಸಿದ ಭಾರತ
ಇರಾನ್ ನಿಯಂತ್ರಣದಲ್ಲಿರುವ ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲ ಟ್ಯಾಂಕರ್ಗಳ ಮೇಲೆ ಯುದ್ಧದ ಕರಿನೆರಳು ಬಿದ್ದಿದೆ. ಭಾರತವು ತನ್ನ ಕಚ್ಚಾ ತೈಲದ ಶೇ.40 ರಷ್ಟು ಭಾಗವನ್ನು ಇದೇ ಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಸಂಘರ್ಷದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಭಾರತವು ಬೇರೆ ಬೇರೆ ಪರ್ಯಾಯಮ ಮೂಲಗಳಿಂದ ಆಮದು ಆರಂಭಿಸಿದೆ. ಈ ಮೊದಲು 27 ರಾಷ್ಟ್ರಗಳಿಂದ ತೈಲ ತರಿಸಿಕೊಳ್ಳುತ್ತಿದ್ದ ಭಾರತ, ಈಗ ಅಮೆರಿಕ, ನೈಜೀರಿಯಾ, ಕೆನಡಾ ಮತ್ತು ಬ್ರೆಜಿಲ್ ಸೇರಿದಂತೆ 41 ರಾಷ್ಟ್ರಗಳೊಂದಿಗೆ ವ್ಯವಹಾರ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭವಿಷ್ಯದ ಭದ್ರತೆಗೆ ವಿಸ್ತರಣಾ ಯೋಜನೆ
ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಭಾರತವು ತನ್ನ ಸಂಗ್ರಹಣಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದೆ. ಒಡಿಶಾದಲ್ಲಿ ಹೊಸದಾಗಿ 4 ಮಿಲಿಯನ್ ಟನ್ ಸಾಮರ್ಥ್ಯದ ಸಂಗ್ರಹಾಗಾರವನ್ನು ನಿರ್ಮಿಸಲಾಗುತ್ತಿದ್ದು, ಕರ್ನಾಟಕದಲ್ಲಿರುವ ಹಾಲಿ ಸೌಲಭ್ಯವನ್ನು 2.5 ಮಿಲಿಯನ್ ಟನ್ಗಳಿಗೆ ವಿಸ್ತರಿಸಲಾಗುತ್ತಿದೆ. ಹೊರ್ಮುಜ್ ಜಲಸಂಧಿಯ ಮೂಲಕ ನಡೆಯುವ ವ್ಯಾಪಾರವು ವೆಚ್ಚದ ದೃಷ್ಟಿಯಿಂದ ಲಾಭದಾಯಕವಾಗಿದ್ದು, ಆ ಮಾರ್ಗವನ್ನು ಸುರಕ್ಷಿತವಾಗಿರಿಸುವಂತೆ ಭಾರತವು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಚರ್ಚೆ ನಡೆಸಿದೆ.
ಇದನ್ನೂ ಓದಿ : ಸಿಲಿಂಡರ್ ತನ್ನಿ, ತಿಂಗಳು ಪೂರ್ತಿ ಫ್ರೀ ಬಿರಿಯಾನಿ ತಿನ್ನಿ – ಗ್ಯಾಸ್ಗಾಗಿ ಹೋಟೆಲ್ ಮಾಲೀಕರ ವಿಭಿನ್ನ ಆಫರ್!



















