ನವದೆಹಲಿ: ಪಹಲ್ಗಾಮ್ ದಾಳಿ ಬಳಿಕ ಭಾರತದ ಪ್ರತಿದಾಳಿಗೆ ತತ್ತರಿಸಿಹೋಗಿರುವ ಪಾಕಿಸ್ತಾನವೀಗ ಭಾರತದ ವಿರುದ್ಧ ನಕಲಿ ಸುದ್ದಿಗಳನ್ನು ಹರಡಿಸುತ್ತಿದೆ. ಅದರಲ್ಲೂ, ಭಾರತದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನವು ಸುಳ್ಳು ಹೇಳಿದೆ. ಇದನ್ನು ಭಾರತ ಸರ್ಕಾರವು ಅಲ್ಲಗಳೆದಿದ್ದು, ಭಾರತದ ವಿರುದ್ಧ ಪಾಕಿಸ್ತಾನ ನಕಲಿ ಸುದ್ದಿಗಳನ್ನು ಹರಡಿಸುತ್ತಿದೆ ಎಂದು ತಿರುಗೇಟು ನೀಡಿದೆ.
“ಭಾರತದ ವಿರುದ್ಧ ವದಂತಿಗಳನ್ನು ಹರಡುವ ಕೆಟ್ಟ ಅಭಿಯಾನಕ್ಕೆ ಪಾಕಿಸ್ತಾನ ನಾಂದಿ ಹಾಡಿದಂತಿದೆ. ಇದೇ ಕಾರಣಕ್ಕಾಗಿ ಭಾರತದ ಎಸ್-400 ಸಿಸ್ಟಮ್ ಹಾಗೂ ಸೂರತ್ ಮತ್ತು ಸಿರ್ಸಾದಲ್ಲಿರುವ ಏರ್ ಫೀಲ್ಡ್ ಗಳನ್ನು ನಾಶಪಡಿಸಲಾಗಿದೆ ಎಂದು ಪಾಕ್ ಸುಳ್ಳು ಹೇಳಿದೆ. ಪಾಕಿಸ್ತಾನದ ಇಂತಹ ವದಂತಿಗಳನ್ನು ಭಾರತವು ಸಾರಾಸಗಟಾಗಿ ತಿರಸ್ಕರಿಸುತ್ತದೆ” ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ವಿಂಗ್ ಕಮಾಂಡ್ ವ್ಯೋಮಿಕಾ ಸಿಂಗ್ ಮಾಹಿತಿ ನೀಡಿದ್ದಾರೆ.
“ಭಾರತವು ಪಾಕಿಸ್ತಾನ ಮಾಡಿದ ಎಲ್ಲ ದಾಳಿಯ ಯತ್ನಗಳನ್ನು ವಿಫಲಗೊಳಿಸಿದೆ. ಹಾಗಾಗಿ, ನಕಲಿ ಸುದ್ದಿಗಳ ಮೂಲಕ ಭಾರತದ ವಿರುದ್ಧ ಪಾಕಿಸ್ತಾನ ಷಡ್ಯಂತ್ರ ಮಾಡುತ್ತಿದೆ. ಭಾರತದ ಎಸ್-400 ಏರ್ ಡಿಫೆನ್ಸ್ ವ್ಯವಸ್ಥೆ ಸುರಕ್ಷಿತವಾಗಿದೆ. ಹಾಗೆಯೇ, ಎಲ್ಲ ವಾಯು ನೆಲೆಗಳು ಕೂಡ ಸುರಕ್ಷಿತವಾಗಿವೆ” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಹಿತಿ ನೀಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಪಾಕಿಸ್ತಾನ ನಡೆಸಿದ ಡ್ರೋನ್ ದಾಳಿಯ ಯತ್ನಗಳನ್ನು ಎಸ್-400 ರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿತ್ತು. ಪಾಕಿಸ್ತಾನದ ಯಾವುದೇ ಯತ್ನವು ಸಫಲವಾಗಲು ಬಿಟ್ಟಿರಲಿಲ್ಲ. ಇದೇ ಕಾರಣಕ್ಕಾಗಿ ಪಾಕಿಸ್ತಾನವು ನಾವು ಎಸ್-400 ರಕ್ಷಣಾ ವ್ಯವಸ್ಥೆಯನ್ನು ಹೊಡೆದುರುಳಿಸಿದ್ದೇವೆ. ಭಾರತದ ವಾಯುನೆಲೆಗಳನ್ನು ಧ್ವಂಸ ಮಾಡಿದ್ದೇವೆ ಎಂದು ಸುಳ್ಳು ಸುದ್ದಿಗಳನ್ನು ಜಾಲತಾಣಗಳಲ್ಲಿ ಹರಡಿತ್ತು.