ನವದೆಹಲಿ: ದೇಶದೆಲ್ಲೆಡೆ 77ನೇ ಗಣರಾಜ್ಯೋತ್ಸವದ ಸಂಭ್ರಮವು ಮನೆ ಮಾಡಿದ್ದು, ದೆಹಲಿಯ ಐತಿಹಾಸಿಕ ‘ಕರ್ತವ್ಯ ಪಥ’ದಲ್ಲಿ ನಡೆದ ಭವ್ಯ, ಪ್ರಧಾನ ಸಮಾರಂಭವು ದೇಶದ ಸೇನಾ ಶಕ್ತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನುಜಗತ್ತಿನ ಮುಂದೆ ಅನಾವರಣಗೊಳಿಸಿತು. ಈ ಬಾರಿಯ ಗಣರಾಜ್ಯೋತ್ಸವವನ್ನು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ 150 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ, ಅದರ ಸ್ಮರಣಾರ್ಥವಾಗಿ ವಿಶೇಷವಾಗಿ ಆಯೋಜಿಸಲಾಗಿತ್ತು.

ಸಮಾರಂಭ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮರಿಗೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು. ತದನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಬಾರಿಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಐರೋಪ್ಯ ಮಂಡಳಿಯ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಅವರೊಂದಿಗೆ ಸಾಂಪ್ರದಾಯಿಕ ಬಗ್ಗಿಯಲ್ಲಿ (ಕುದುರೆ ಗಾಡಿ) ಆಗಮಿಸಿದರು. ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯು ಈ ಭವ್ಯ ಮೆರವಣಿಗೆಯನ್ನು ಮುನ್ನಡೆಸಿತು.
ರಾಷ್ಟ್ರಪತಿಗಳಿಂದ ರಾಷ್ಟ್ರಧ್ವಜಾರೋಹಣ
ಸಂಪ್ರದಾಯದಂತೆ ರಾಷ್ಟ್ರಪತಿಗಳು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಪೂರ್ಣ ಸ್ವದೇಶಿ ನಿರ್ಮಿತ 105 ಎಂಎಂ ಲೈಟ್ ಫೀಲ್ಡ್ ಗನ್ಗಳ ಮೂಲಕ 21 ಕುಶಾಲತೋಪುಗಳ ಗೌರವವನ್ನು ಸಮರ್ಪಿಸಲಾಯಿತು. ಪರೇಡ್ ಆರಂಭಕ್ಕೂ ಮುನ್ನ, ಬಾಹ್ಯಾಕಾಶಕ್ಕೆ ತೆರಳಲಿರುವ ಎರಡನೇ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ರಾಷ್ಟ್ರಪತಿಗಳು ‘ಅಶೋಕ ಚಕ್ರ’ ಪ್ರಶಸ್ತಿ ನೀಡಿ ಗೌರವಿಸಿದರು. ಪರಮವೀರ ಚಕ್ರ ಮತ್ತು ಅಶೋಕ ಚಕ್ರ ವಿಜೇತರು ಮೆರವಣಿಗೆಯ ಮುಂಚೂಣಿಯಲ್ಲಿರುವ ಮೂಲಕ ದೇಶದ ಹೆಮ್ಮೆಯನ್ನು ಹೆಚ್ಚಿಸಿದರು.

ವಿಶ್ವ ವೇದಿಕೆಯಲ್ಲಿ ಭಾರತ-ಯುರೋಪಿಯನ್ ಒಕ್ಕೂಟದ ಸೌಹಾರ್ದ
ಈ ಬಾರಿಯ ಪರೇಡ್ನಲ್ಲಿ ಯುರೋಪಿಯನ್ ಒಕ್ಕೂಟದ (EU) ತುಕಡಿಯು ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಐರೋಪ್ಯ ಒಕ್ಕೂಟದ ಧ್ವಜ ಮತ್ತು ಅವರ ಮಿಲಿಟರಿ ಪಡೆಯ ಧ್ವಜಗಳನ್ನು ಹೊತ್ತ ನಾಲ್ಕು ಧ್ವಜಧಾರಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡು ಭಾರತ ಮತ್ತು ಯುರೋಪ್ ನಡುವಿನ ಬಲವಾದ ರಾಜತಾಂತ್ರಿಕ ಸಂಬಂಧವನ್ನು ಬಿಂಬಿಸಿದರು.

ಮಿಲಿಟರಿ ಶಕ್ತಿ ಮತ್ತು ‘ಮೇಕ್ ಇನ್ ಇಂಡಿಯಾ’ ಝಲಕ್
ಲೆಫ್ಟಿನೆಂಟ್ ಜನರಲ್ ಭವನೀಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಪರೇಡ್ನಲ್ಲಿ ಭಾರತೀಯ ಸೇನೆಯು ಮೊದಲ ಬಾರಿಗೆ ‘ಹಂತ-ಹಂತದ ಯುದ್ಧ ವಿನ್ಯಾಸ’ವನ್ನು ಪ್ರದರ್ಶಿಸಿತು. 61 ಕ್ಯಾವಲ್ರಿ ಪಡೆಯಿಂದ ಹಿಡಿದು, ಭಾರತದಲ್ಲೇ ವಿನ್ಯಾಸಗೊಳಿಸಲಾದ ಹಗುರವಾದ ಶಸ್ತ್ರಸಜ್ಜಿತ ವಾಹನಗಳು ಕರ್ತವ್ಯ ಪಥದಲ್ಲಿ ಸಾಗಿದವು. ವಾಯುಸೇನೆಯ ಬಲವನ್ನು ಪ್ರದರ್ಶಿಸುವಂತೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಧ್ರುವ ಮತ್ತು ರುದ್ರ ಹೆಲಿಕಾಪ್ಟರ್ಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿ ಸೇನೆಯ ಶಕ್ತಿಯನ್ನು ಜಗತ್ತಿಗೆ ಸಾರಿದವು.

ಸಾಂಸ್ಕೃತಿಕ ವೈವಿಧ್ಯತೆ

‘ವಿವಿಧತೆಯಲ್ಲಿ ಏಕತೆ’ ಎಂಬ ಘೋಷವಾಕ್ಯದೊಂದಿಗೆ ನಡೆದ ಸಾಂಸ್ಕೃತಿಕ ಪ್ರದರ್ಶನದಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಭಾರತದ ಭವ್ಯ ಇತಿಹಾಸ ಮತ್ತು ‘ವಂದೇ ಮಾತರಂ’ ಗೀತೆಯ 150 ವರ್ಷಗಳ ಇತಿಹಾಸವನ್ನು ಸಾರುವ ವಿಶೇಷ ಸ್ತಬ್ಧಚಿತ್ರಗಳು ಮತ್ತು ನೃತ್ಯ ರೂಪಕಗಳು ಪ್ರೇಕ್ಷಕರ ಮನ ಗೆದ್ದವು. ರಾಷ್ಟ್ರಪತಿ ಭವನದಿಂದ ಹಿಡಿದು ರಾಷ್ಟ್ರೀಯ ಯುದ್ಧ ಸ್ಮಾರಕದವರೆಗಿನ ಸಂಪೂರ್ಣ ಮಾರ್ಗವು ಭಾರತದ ವಿಕಸನವನ್ನು ಬಿಂಬಿಸುವ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು.
ಇದನ್ನೂ ಓದಿ: ದೇಶದಾದ್ಯಂತ 77ನೇ ಗಣರಾಜ್ಯೋತ್ಸವ ಸಂಭ್ರಮ | ದೇಶದ ಜನತೆಗೆ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ


















