ಬೆಂಗಳೂರು : ವಿಶ್ವ ಚಾಂಪಿಯನ್ ಆಗಿ ಮೊದಲ ಬಾರಿ ಏಕದಿನ ಸ್ವರೂಪದಲ್ಲಿ ಕಣಕ್ಕಿಳಿಯುತ್ತಿರುವ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡ, ಆಸ್ಟ್ರೇಲಿಯಾದ ಬ್ರಿಸ್ಬೇನ್ನ ಗ್ಯಾಬ್ಬಾ ಕ್ರೀಡಾಂಗಣದಲ್ಲಿ ಫೆಬ್ರವರಿ 24 ರಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ಮೈದಾನಕ್ಕಿಳಿಯಲಿದೆ.
ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕ ಅಲಿಸ್ಸಾ ಹೀಲಿ ಅವರ ಅಂತರರಾಷ್ಟ್ರೀಯ ವಿದಾಯ ಸರಣಿ ಕೂಡ ಇದೇ ಆಗಿದ್ದು, ಈ ಸರಣಿಗೆ ಭಾವನಾತ್ಮಕ ಆಯಾಮ ತಳೆದಿದೆ.
ಈ ಏಕದಿನ ಸರಣಿಯು ಭಾರತ ಮಹಿಳಾ ತಂಡಕ್ಕೆ ಐತಿಹಾಸಿಕ ಮಹತ್ವ ಹೊಂದಿದೆ. ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆ ಹೊತ್ತು ಮೊದಲ ಬಾರಿ ಮೈದಾನಕ್ಕಿಳಿಯುತ್ತಿರುವ ತಂಡದ ಮೇಲೆ ನಿರೀಕ್ಷೆ ಮತ್ತು ಕೂಲಂಕಷ ಪರಿಶೀಲನೆ ಎರಡೂ ಹೆಚ್ಚಾಗಿವೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ಒಂದು ದಶಕದಲ್ಲಿ ಮೊದಲ ಬಾರಿಗೆ ಟಿ20 ಸರಣಿ ಗೆದ್ದ ಭಾರತ ತಂಡ, ಈ ಬಹು-ಸ್ವರೂಪ ಸರಣಿಯಲ್ಲಿ 4-2ರ ಮುನ್ನಡೆ ಕಾಯ್ದುಕೊಂಡಿದ್ದು, ಅದೇ ಉತ್ಸಾಹ ಮತ್ತು ಗೆಲುವಿನ ನಾಡಿ ಹಿಡಿದು ಏಕದಿನ ಸ್ವರೂಪದಲ್ಲೂ ಮುನ್ನಡೆಯ ನಿರೀಕ್ಷೆಯಿದೆ.
ಮತ್ತೊಂದೆಡೆ, 2017ರ ನಂತರ ತವರಿನಲ್ಲೇ ಮೊದಲ ಬಾರಿ ಸರಣಿ ಸೋಲು ಕಂಡ ಆಸ್ಟ್ರೇಲಿಯಾ, ಸೋಫಿ ಮೊಲಿನ್ಯೂ ನಾಯಕತ್ವದ ಹೊಸ ಯುಗ ಆರಂಭವಾಗಿದ್ದರೂ ಯೋಜಿಸಿದಂತೆ ಸಾಗದ ಹಿನ್ನೆಲೆಯಲ್ಲಿ, ತವರು ಪ್ರೇಕ್ಷಕರ ಮುಂದೆ ಮರ್ಯಾದೆ ಉಳಿಸಿಕೊಳ್ಳಲು ಹೋರಾಡಲಿದ್ದಾರೆ.
ಹೊಸಬರಿಗೆ ಸುವರ್ಣ ಅವಕಾಶ
ವಿಶ್ವಕಪ್ ವಿಜಯಿ ಮುಖ್ಯ ಬಳಗದ ಜೊತೆಗೆ, ಭಾರತ ತಂಡದ ಈ ಪ್ರವಾಸದ ತಂಡದಲ್ಲಿ ಇಬ್ಬರು ಹೊಸ ಮುಖಗಳು ಕಾಣಿಸಿಕೊಳ್ಳುತ್ತಿವೆ. ವೈಷ್ಣವಿ ಶರ್ಮಾ ಮತ್ತು ಕಾಶ್ವಿ ಗೌತಮ್ ಅವರು ವಿಶ್ವಕಪ್ ತಂಡದ ಭಾಗವಾಗಿರಲಿಲ್ಲ. ಟಿ20ಐ ಪಂದ್ಯಗಳಲ್ಲಿ ಆಡಿ, ಡಬ್ಲ್ಯೂಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಅನುಭವ ಹೊಂದಿರುವ ವೈಷ್ಣವಿ ಶರ್ಮಾ, ಏಕದಿನ ಪಂದ್ಯಾರಂಗದಲ್ಲಿ ಪದಾರ್ಪಣೆ ಮಾಡಿ, ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಅಪೂರ್ವ ಅವಕಾಶ ಎದುರಿಸುತ್ತಿದ್ದಾರೆ.
ಕಾಶ್ವಿ ಗೌತಮ್ ಅವರ ಪ್ರಯಾಣ ಛಲ ಮತ್ತು ಸ್ಥೈರ್ಯದ ಕಥೆ. ಕಳೆದ ತಿಂಗಳು ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯ ನಡುವೆ ಗಾಯಕ್ಕೀಡಾಗಿ ಹೊರಗುಳಿದಿದ್ದ ಅವರು, ಮರಳಿ ತಂಡಕ್ಕೆ ಸೇರ್ಪಡೆಯಾಗಿ ಸ್ಪರ್ಧಾತ್ಮಕ ಲಯ ಮರಳಿ ಪಡೆಯಲು ಮತ್ತು ತಮ್ಮ ಸ್ಥಾನ ಉಳಿಸಿಕೊಳ್ಳಲು ಈ ಸರಣಿಯನ್ನು ಬಳಸಿಕೊಳ್ಳಲಿದ್ದಾರೆ. ಉಮಾ ಚೇತ್ರಿ ಅವರು ವಿಶ್ವಕಪ್ನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಏಕದಿನ ಪಂದ್ಯಾರಂಗ ಪ್ರವೇಶ ಮಾಡಿದ್ದರೂ, ಬ್ಯಾಟ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಏಳು ಟಿ20ಐ ಪಂದ್ಯಗಳ ಅನುಭವ ಹೊಂದಿರುವ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡಬೇಕಿದೆ.
ಪ್ರತಿಕ ರಾವಲ್ ಮರಳುವಿಕೆ
ಈ ಸರಣಿಯಲ್ಲಿ ಗಮನ ಸೆಳೆಯಲಿರುವ ಪ್ರಮುಖ ಆಟಗಾರ್ತಿಯೆಂದರೆ 25 ವರ್ಷದ ಆರಂಭಿಕ ಬ್ಯಾಟರ್ ಪ್ರತಿಕಾ ರಾವಲ್. ಕಣಕಾಲಿನ ಗಾಯದಿಂದ ಸುಮಾರು ನಾಲ್ಕು ತಿಂಗಳ ವಿಶ್ರಾಂತಿ ಬಳಿಕ ಮರಳಿ ಏಕದಿನ ತಂಡಕ್ಕೆ ಸೇರ್ಪಡೆಯಾಗಿರುವ ಅವರು ವಿಶ್ವಕಪ್ನಲ್ಲಿ ಭಾರತದ ಅತ್ಯಂತ ಸದೃಢ ಪ್ರದರ್ಶನ ನೀಡಿದ ಆಟಗಾರ್ತಿಯರಲ್ಲಿ ಒಬ್ಬರು. ಅವರ ಗಾಯ ಟೂರ್ನಿಯ ನಾಕ್ಔಟ್ ಹಂತದಲ್ಲಿ ತಲೆದೋರಿತ್ತು. ಹಾಗಾಗಿ ಭಾರತದ ವಿಶ್ವಕಪ್ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದ ಅವರಿಗೆ ವಿಜೇತರ ಪದಕ ಸಿಗಲಿಲ್ಲ ಎಂಬುದು ತಂಡದ ಪಾಲಿಗೆ ನೋವಿನ ಸಂಗತಿಯಾಗಿದೆ. ಇದಲ್ಲದೆ, ಗಾಯ ಅವರನ್ನು ಡಬ್ಲ್ಯೂಪಿಎಲ್ ಋತುವಿನಿಂದಲೂ ಹೊರಗಿರಿಸಿತ್ತು. ಈಗ ಸಂಪೂರ್ಣ ಗುಣಮುಖರಾಗಿ ಮರಳಿರುವ ರಾವಲ್, ಆಸ್ಟ್ರೇಲಿಯಾ ಮಣ್ಣಿನಲ್ಲಿ ಮತ್ತೊಮ್ಮೆ ತಮ್ಮ ನೈಜ ಪ್ರದರ್ಶನ ನೀಡಲು ಉತ್ಸಾಹದಿಂದಿದ್ದಾರೆ.
ಹೀಲಿ ವಿದಾಯ
ಆಸ್ಟ್ರೇಲಿಯಾ ತಂಡದ ದೃಷ್ಟಿಯಿಂದ ಈ ಸರಣಿಯಲ್ಲಿ ಎಲ್ಲ ಚಿತ್ತ ಅಲಿಸ್ಸಾ ಹೀಲಿ ಅವರ ಮೇಲಿದೆ. ಈ ಸರಣಿ ಏಕದಿನ ಕ್ರಿಕೆಟ್ನಲ್ಲಿ ಅವರ ಅಂತಿಮ ಅಧ್ಯಾಯವಾಗಿದ್ದು, ಆಸ್ಟ್ರೇಲಿಯಾ ನಾಯಕಿಯಾಗಿ ಬಿಳಿ ಚೆಂಡಿನ ಕ್ರಿಕೆಟ್ನಲ್ಲಿ ಒಂದು ಕೊನೆಯ ಬಾರಿ ಮುನ್ನಡೆ ನೀಡಲು ಅವರು ಸಿದ್ಧರಾಗಿದ್ದಾರೆ. ಆಧುನಿಕ ಮಹಿಳಾ ಕ್ರಿಕೆಟ್ನ ದಿಗ್ಗಜ ಎನಿಸಿಕೊಂಡಿರುವ ಹೀಲಿ ಅವರ ನಿವೃತ್ತಿ ಬಳಿಕ ಸೋಫಿ ಮೊಲಿನ್ಯೂ ನಾಯಕತ್ವ ವಹಿಸಲಿದ್ದು, ಆಸ್ಟ್ರೇಲಿಯಾ ಕ್ರಿಕೆಟ್ನಲ್ಲಿ ಹೊಸ ಯುಗ ಆರಂಭವಾಗಲಿದೆ. ಈ ಸರಣಿಯಲ್ಲಿ ಹೀಲಿ ವಿಕೆಟ್ ಕೀಪಿಂಗ್ ಮಾಡದೆ ಕೇವಲ ಬ್ಯಾಟರ್ ಆಗಿ ಮತ್ತು ನಾಯಕಿಯಾಗಿ ಆಡಲಿದ್ದಾರೆ. ಬೆತ್ ಮೂನಿ ಈ ಸರಣಿಯಲ್ಲಿ ಗ್ಲೌಸ್ ಧರಿಸಲಿದ್ದಾರೆ. ಕಳೆದ ವರ್ಷದ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಸೆಮಿಫೈನಲ್ನಲ್ಲಿ ಹೊರಬಿದ್ದರೂ, ಹೀಲಿ ಎರಡು ಶತಕಗಳನ್ನು ಬಾರಿಸಿ ತಮ್ಮ ದೊಡ್ಡ ಪಂದ್ಯಗಳ ಆಟಗಾರ್ತಿ ಎಂಬ ಹೆಸರು ಉಳಿಸಿಕೊಂಡರು. ಟಿ20 ಸರಣಿ ಸೋಲಿನ ಹಿನ್ನಡೆ ಅನುಭವಿಸಿರುವ ತಂಡವನ್ನು ಸಂಭಾಳಿಸಿ, ತಮ್ಮ ಕ್ಯಾರಿಯರ್ನ ಕೊನೆಯ ಪಂದ್ಯವನ್ನು ಗೆಲುವಿನ ಅಲೆಯಲ್ಲಿ ಮುಕ್ತಾಯಗೊಳಿಸಲು ಹೀಲಿ ಸಂಕಲ್ಪ ತೊಟ್ಟಿದ್ದಾರೆ.
ಇದನ್ನೂ ಓದಿ : ಕೋಗಿಲು ಲೇಔಟ್ ಡೆಮಾಲಿಷನ್ ಕೇಸ್ | ನಾಲ್ವರು IAS, ಓರ್ವ IPS ಅಧಿಕಾರಿ ವಿರುದ್ಧ ಕ್ರಮಕ್ಕೆ ಕೋರ್ಟ್ ಸೂಚನೆ



















