ಅಹಮದಾಬಾದ್ (ಫೆ.17) : ಟಿ20 ವಿಶ್ವಕಪ್ 2026ರಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡದ ಹಠಾತ್ ನಿರ್ಗಮನ ಕ್ರಿಕೆಟ್ ಜಗತ್ತಿಗೆ ಅಚ್ಚರಿ ಮೂಡಿಸಿದೆ. ಆದರೆ, ಈ ಬೆಳವಣಿಗೆಯಿಂದ ಟೀಂ ಇಂಡಿಯಾ ಕಿಂಚಿತ್ತೂ ವಿಚಲಿತವಾಗಿಲ್ಲ ಎಂದು ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಸ್ಪಷ್ಟಪಡಿಸಿದ್ದಾರೆ.
ಫೆಬ್ರವರಿ 17 ರಂದು ಬಾಲಗೊಲ್ಲಾದಲ್ಲಿ ನಡೆಯಬೇಕಿದ್ದ ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ, ಜಿಂಬಾಬ್ವೆ ‘ಬಿ’ ಗುಂಪಿನಿಂದ ಎರಡನೇ ತಂಡವಾಗಿ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಹೊರಬೀಳುವಂತಾಯಿತು. ಈಗ ಸೂಪರ್-8 ಹಂತದ ‘ಗ್ರೂಪ್ 1’ರಲ್ಲಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಜೊತೆಗೆ ಜಿಂಬಾಬ್ವೆ ಕೂಡ ಸ್ಥಾನ ಪಡೆದಿದೆ.
ನಮ್ಮ ಗುರಿ ಗೆಲುವು ಮಾತ್ರ
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿತಾಂಶು ಕೋಟಕ್, “ಆಸ್ಟ್ರೇಲಿಯಾ ಸೂಪರ್-8 ಹಂತಕ್ಕೆ ಬರುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರು ಜಿಂಬಾಬ್ವೆ ವಿರುದ್ಧ ಸೋತಾಗಲೇ ಅವರ ಹಾದಿ ಕಠಿಣವಾಯಿತು ಎಂಬುದು ನಮಗೆ ಗೊತ್ತಿತ್ತು. ಎದುರಾಳಿ ಯಾರೇ ಆದರೂ ನಮ್ಮ ಗುರಿ ಗೆಲುವು ಮಾತ್ರ. ಅದು ಆಸ್ಟ್ರೇಲಿಯಾ ಆಗಿರಲಿ ಅಥವಾ ಜಿಂಬಾಬ್ವೆ ಆಗಿರಲಿ, ನಾವು ನಮ್ಮ ಶ್ರೇಷ್ಠ ಪ್ರದರ್ಶನ ನೀಡಲು ಸಜ್ಜಾಗಿದ್ದೇವೆ. ಹೀಗಾಗಿ ಆಸ್ಟ್ರೇಲಿಯಾ ಹೊರಬಿದ್ದಿದ್ದರ ಬಗ್ಗೆ ನಾವೇನೂ ತಲೆಕೆಡಿಸಿಕೊಂಡಿಲ್ಲ,” ಎಂದು ಖಡಕ್ ಆಗಿ ನುಡಿದಿದ್ದಾರೆ.
ಪ್ರಸಕ್ತ ಟೂರ್ನಿಯಲ್ಲಿ ಅಮೆರಿಕ, ನಮೀಬಿಯಾ ಮತ್ತು ಪಾಕಿಸ್ತಾನದ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಟೀಂ ಇಂಡಿಯಾ, ಅಜೇಯವಾಗಿ ಮುನ್ನಗುತ್ತಿದ್ದು, ಬುಧವಾರ (ಫೆ. 18) ನೆದರ್ಲೆಂಡ್ಸ್ ವಿರುದ್ಧ ಸೆಣಸಾಡಲಿದೆ.
ಬಿಸಿಸಿಐ ಉಪಾಧ್ಯಕ್ಷರ ಮೆಚ್ಚುಗೆ
ಇದೇ ವೇಳೆ, ಜಿಂಬಾಬ್ವೆ ತಂಡದ ಐತಿಹಾಸಿಕ ಸಾಧನೆಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಜಿಂಬಾಬ್ವೆ ಕ್ರಿಕೆಟ್ನ ಈ ಪುನಶ್ಚೇತನ ಕ್ರಿಕೆಟ್ ಜಗತ್ತಿಗೆ ಒಳ್ಳೆಯ ಬೆಳವಣಿಗೆ,” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಐಪಿಎಲ್ 2026 | ಗಾಯದಿಂದ ಚೇತರಿಸಿಕೊಂಡ ನಾಯಕ ರಿಷಭ್ ಪಂತ್ ಕಣಕ್ಕೆ ರೆಡಿ



















