ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಕೈಗೊಳ್ಳುತ್ತಿರುವ ದಾಳಿಗಳಿಂದ ಪಾಕಿಸ್ತಾನ ತತ್ತರಿಸಿಹೋಗಿದೆ. ಇನ್ನು, ಶುಕ್ರವಾರ (ಮೇ 10) ರಾತ್ರಿ ಪಾಕಿಸ್ತಾನವು ಗಡಿಯಲ್ಲಿ ದಾಳಿಗೆ ಯತ್ನಿಸಿದ್ದು, ಭಾರತವು ಸರಿಯಾಗಿಯೇ ತಿರುಗೇಟು ನೀಡಿದೆ. ಗಡಿಯಲ್ಲಿ ಪಾಕಿಸ್ತಾನದ ಕ್ಷಿಪಣಿಗಳು, ಯುದ್ಧವಿಮಾನಗಳು ಹಾಗೂ ಡ್ರೋನ್ ಗಳನ್ನು ಭಾರತೀಯ ಸೇನೆಯು ಹೊಡೆದುರುಳಿಸುವ ಮೂಲಕ ತಕ್ಕ ಪಾಠ ಕಲಿಸಿದೆ.
ಅಮೃತಸರದ ಮುಗ್ಲಾನಿಕೋಟ್ ಗ್ರಾಮದಲ್ಲಿ ಪಾಕಿಸ್ತಾನದ ಡ್ರೋನ್ ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದ್ದು, ಡೋನ್ ನ ಅವಶೇಷಗಳು ಪತ್ತೆಯಾಗಿವೆ. ಮತ್ತೊಂದೆಡೆ ಜಮ್ಮು ಬಳಿಯಲ್ಲಿರುವ ಪಾಕಿಸ್ತಾನಿ ಉಗ್ರರ ನೆಲೆಗಳನ್ನೇ ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಧ್ವಂಸಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ಆಪರೇಷನ್ ಸಿಂಧೂರ ಐದನೇ ದಿನಕ್ಕೆ ಕಾಲಿಟ್ಟಂತಾಗಿದೆ.
ಪಾಕಿಸ್ತಾನದ 4 ವಾಯುನೆಲೆ ಧ್ವಂಸ?
ಪಾಕಿಸ್ತಾನವು ಶುಕ್ರವಾರ ರಾತ್ರಿ ದಾಳಿಗೆ ಯತ್ನಿಸಿದ ಕಾರಣ ಭಾರತೀಯ ವಾಯುಪಡೆಯು ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದ ನಾಲ್ಕು ವಾಯುನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ಕ್ಷಿಪಣಿ ದಾಳಿ ಮಾಡಿದ್ದು, ನಾಲ್ಕೂ ವಾಯುನೆಲೆಗಳು ಧ್ವಂಸಗೊಂಡಿವೆ ಎಂದು ತಿಳಿದುಬಂದಿದೆ. ದಾಳಿಯಲ್ಲಿ ಪಾಕಿಸ್ತಾನದ ಕೆಲ ಯುದ್ಧವಿಮಾನಗಳನ್ನೂ ಪುಡಿಗಟ್ಟಲಾಗಿದೆ ಎಂದು ಹೇಳಲಾಗುತ್ತಿದೆ.
ಜಮ್ಮು, ಶ್ರೀನಗರ ಸೇರಿ ಪಾಕಿಸ್ತಾನವು ತಡರಾತ್ರಿ ಸುಮಾರು 26 ಕಡೆ ದಾಳಿ ನಡೆಸಿದ್ದು, ಬಹುತೇಕ ದಾಳಿಗಳನ್ನು ಭಾರತ ವಿಫಲಗೊಳಿಸಿದೆ. ಹಾಗೆಯೇ, ರಾತ್ರೋರಾತ್ರಿ ಪಾಕಿಸ್ತಾನಕ್ಕೆ ತಪರಾಕಿ ನೀಡಿದೆ. ಪಂಜಾಬಿನ ಅಮೃತಸರ ಸೇರಿ ಹಲವೆಡೆ ಸ್ಫೋಟದ ಸದ್ದು ಕೇಳಿಸಿದ ಕಾರಣ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಪಾಕ್ ದಾಳಿಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.