ನವದೆಹಲಿ: ಆಪರೇಷನ್ ಸಿಂದೂರದ ಯಶಸ್ಸಿನ ಬಳಿಕ ತಮ್ಮ ಮೊದಲ ಮನ್ ಕೀ ಬಾತ್ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸಶಸ್ತ್ರ ಪಡೆಗಳ ಶೌರ್ಯ ಹಾಗೂ ಸಾಹಸವನ್ನು ಕೊಂಡಾಡಿದ್ದಾರೆ.
ಭಾನುವಾರ 122ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವಲ್ಲಿ ಭಾರತದ ಅಚಲ ಬದ್ಧತೆಯನ್ನು ಒತ್ತಿ ಹೇಳಿರುವ ಅವರು ಆಪರೇಷನ್ ಸಿಂದೂರ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದ ವಿರುದ್ಧ ಭಾರತದ ಸಶಸ್ತ್ರ ಪಡೆಗಳು ನಡೆಸಿದ ನಿಖರ ದಾಳಿಯನ್ನು ಶ್ಲಾಘಿಸಿದ್ದಾರೆ.
ಇಂದು ಇಡೀ ದೇಶವೇ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿ ನಿಂತಿದೆ. ಎಲ್ಲರ ಮನಸ್ಸಲ್ಲೂ ಕೋಪ, ಆವೇಶವಿದ್ದರೂ ಅದರ ಜೊತೆಗೇ ಉಗ್ರರ ವಿರುದ್ಧದ ಹೋರಾಟದ ಬದ್ಧತೆಯೂ ಕಾಣಿಸುತ್ತಿದೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು ಎಂಬುವುದೇ ಪ್ರತಿಯೊಬ್ಬ ಭಾರತೀಯನ ಸಂಕಲ್ಪವೂ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಮ್ಮ ಸಶಸ್ತ್ರ ಪಡೆಗಳು ಗಡಿಯಾಚೆಗೆ ಇರುವ ಉಗ್ರರ ಅಡಗುತಾಣಗಳ ಮೇಲೆ ನಿಖರವಾಗಿ ದಾಳಿ ನಡೆಸಿ, ಧ್ವಂಸಗೊಳಿಸಿದ್ದಾರೆ. ಇದರಲ್ಲಿ ಅವರ ಸ್ಪಷ್ಟತೆ ಮತ್ತು ನಿಖರತೆಯು ಅಸಾಧಾರಣವಾದದ್ದು. ಆಪರೇಷನ್ ಸಿಂದೂರ ಎನ್ನುವುದು ಕೇವಲ ಒಂದು ಸೇನಾ ಕಾರ್ಯಾಚರಣೆ ಆಗಿರಲಿಲ್ಲ. ಅದು ನಮ್ಮ ಸಂಕಲ್ಪ, ಧೈರ್ಯ ಮತ್ತು ಬದಲಾಗುತ್ತಿರುವ ಭಾರತದ ಚಿತ್ರಣವಾಗಿತ್ತು. ಈ ಚಿತ್ರಣವು ಇಡೀ ದೇಶದಲ್ಲಿ ದೇಶಭಕ್ತಿಯ ಭಾವನೆ ಹುಟ್ಟುಹಾಕಿತು ಎಂದೂ ಮೋದಿ ಹೇಳಿದ್ದಾರೆ.
ಈ ಕಾರ್ಯಾಚರಣೆಯ ಬಳಿಕ ದೇಶದೆಲ್ಲೆಡೆ ತಿರಂಗಾ ಯಾತ್ರೆಗಳು ನಡೆದವು. ಪುಟ್ಟ ಮಕ್ಕಳು ಈ ಬಗ್ಗೆ ಚಿತ್ರಗಳನ್ನು ಬಿಡಿಸುತ್ತಿರುವ, ನವಜಾತ ಶಿಶುಗಳಿಗೆ ಸಿಂದೂರ ಎಂದು ನಾಮಕರಣ ಮಾಡುತ್ತಿರುವ ಸುದ್ದಿ, ವಿಡಿಯೋಗಳು ವೈರಲ್ ಆದವು ಎಂಬುದನ್ನೂ ಮೋದಿ ಸ್ಮರಿಸಿಕೊಂಡರು.
ಇದೇ ವೇಳೆ, ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳು, ತಂತ್ರಜ್ಞಾನಗಳು ಹಾಗೂ ವಿಧಾನಗಳಿಂದಾಗಿಯೇ ಆಪರೇಷನ್ ಸಿಂದೂರ ಯಶಸ್ವಿಯಾಯಿತು. ಇವೆಲ್ಲವೂ ನಾವು ಹೆಮ್ಮೆ ಪಡುವಂತೆ ಮಾಡಿದವು ಎಂದ ಪ್ರಧಾನಿ ಮೋದಿ, ಸ್ಥಳೀಯವಾಗಿ ತಯಾರಿಸಲಾದ ಉತ್ಪನ್ನಗಳಿಗೆ ಉತ್ತೇಜನ ನೀಡುವ ತಮ್ಮ ವೋಕಲ್ ಫಾರ್ ಲೋಕಲ್ ಕೂಗನ್ನು ಪುನರುಚ್ಚರಿಸಿದರು.