ಚಿಕ್ಕಮಗಳೂರು : ಮಲೆನಾಡಿನಲ್ಲಿ ಕಾಡಾನೆ ಭೀತಿ ಮುಂದುವರಿದಿದ್ದು, ಚಿಕ್ಕಮಗಳೂರು ತಾಲೂಕಿನ ಕಣತಿ ಗ್ರಾಮದ ಸಮೀಪ ಒಂಟಿ ಸಲಗ ರಸ್ತೆ ದಾಟಿದ ಘಟನೆ ಕಂಡುಬಂದಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಕಣತಿ ಬಳಿ ರಸ್ತೆ ದಾಟಿದ ಒಂಟಿ ಸಲಗದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಆನೆ ರಸ್ತೆ ದಾಟುವ ವೇಳೆ ಚಾಲಕನು ಎಚ್ಚರಿಕೆಯಿಂದ ವಾಹನವನ್ನು ನಿಲ್ಲಿಸಿ, ಪರಿಸ್ಥಿತಿಯನ್ನು ಗಮನಿಸಿದ ಬಳಿಕ ಚಲಿಸಿದ್ದಾರೆ. ಈ ನಡುವೆ, ಕಣತಿಯಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿ ಅರಣ್ಯ ಇಲಾಖೆಯು ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದರೆ, ಮತ್ತೊಂದೆಡೆ ಒಂಟಿ ಸಲಗ ಬಿಂದಾಸ್ ರೌಂಡ್ ಹೊಡೆಯುತ್ತಿರುವುದು ಗ್ರಾಮಸ್ಥರಲ್ಲಿ ಭಯ ಹೆಚ್ಚಿಸಿದೆ.
ಹುಣಸೇಹಳ್ಳಿ, ಕಣತಿ, ಐದಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಸಂಚಾರ ಹೆಚ್ಚಾಗಿದೆ. ಒಂದಾದ ನಂತರ ಮತ್ತೊಂದು ಆನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಮಲೆನಾಡಿಗರಲ್ಲಿ ಆತಂಕ ಮನೆ ಮಾಡಿದೆ. ಈ ಎಲ್ಲಾ ಪ್ರದೇಶಗಳು ಆಲ್ದೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ. ರಾತ್ರಿ ವೇಳೆ ಅನಗತ್ಯ ಸಂಚಾರ ತಪ್ಪಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಧಾರವಾಡ IITಯಲ್ಲಿ 6 ಹುದ್ದೆಗಳ ನೇಮಕಾತಿ | ಬಿಪಿಎಡ್ ಮುಗಿಸಿದವರಿಗೆ ಗುಡ್ ನ್ಯೂಸ್



















