ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯ(Pahalgam Attack) ಬಳಿಕ ಪಾಕಿಸ್ತಾನದ ಮೇಲೆ ಹಲವು ಕಠಿಣ ಪ್ರತೀಕಾರದ ಕ್ರಮಗಳನ್ನು ಜಾರಿಗೊಳಿಸುವುದರ ಜೊತೆಗೆ ಅಲ್ಲಿನ ಹಲವು ನಟ-ನಟಿಯರ ಸಾಮಾಜಿಕ ಜಾಲತಾಣಗಳ ಖಾತೆಗೂ ನಿರ್ಬಂಧ ಹೇರಲಾಗಿದೆ. ಹಲವು ಯೂಟ್ಯೂಬ್ ಚಾನೆಲ್ ಗಳನ್ನೂ ನಿಷೇಧಿಸಲಾಗಿದೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ, ಭಾನುವಾರ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರ ಟ್ವೀಟರ್ ಖಾತೆಗಳನ್ನೂ ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಸೃಷ್ಟಿಯಾಗಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಇಮ್ರಾನ್ ಖಾನ್ ಹಾಗೂ ಬಿಲಾವಲ್ ಭುಟ್ಟೋ ಅವರ ಎಕ್ಸ್ (ಟ್ವೀಟರ್) ಖಾತೆಗಳನ್ನು ತೆರೆಯಲು ಹೋದರೆ, ಕಾನೂನಾತ್ಮಕ ಕೋರಿಕೆಯ ಮೇರೆಗೆ ಈ ಖಾತೆಗಳನ್ನು ಭಾರತದಲ್ಲಿ ತಡೆ ಹಿಡಿಯಲಾಗಿದೆ ಎಂಬ ಸಂದೇಶ ಕಾಣಸಿಗುತ್ತದೆ. ಪಾಕಿಸ್ತಾನಿ ರಾಜಕಾರಣಿಗಳ ಎಕ್ಸ್ ಖಾತೆಯ ಪ್ರೊಫೈಲ್ ಚಿತ್ರ ಹಾಗೂ ಕವರ್ ಇಮೇಜ್ ಕೂಡ ಬ್ಲ್ಯಾಂಕ್(ಖಾಲಿ) ಎಂದು ತೋರಿಸುತ್ತಿದೆ.
ಇತ್ತೀಚೆಗಷ್ಟೇ ಪಾಕ್ ಮಾಜಿ ಸಚಿವ ಬಿಲಾವಲ್ ಭುಟ್ಟೋ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಸಿಂಧೂ ನದಿಯಲ್ಲಿ ಒಂದೋ ನಮ್ಮ ನೀರು ಹರಿಯಬೇಕು ಇಲ್ಲವೇ ಅವರ(ಭಾರತೀಯರ) ರಕ್ತ ಹರಿಯುತ್ತದೆ” ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ನಿನ್ನೆಯಷ್ಟೇ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಅತಾವುಲ್ಲಾ ತರಾರ್ ಅವರ ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿತ್ತು. ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಭಾರತವು 24ರಿಂದ 36 ಗಂಟೆಗಳ ಒಳಗಾಗಿ ಪಾಕಿಸ್ತಾನದ ಮೇಲೆ ಸೇನಾ ದಾಳಿ ನಡೆಸಲಿದೆ ಎಂಬ ಗುಪ್ತಚರ ಮಾಹಿತಿಯು ದೊರೆತಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಅತಾವುಲ್ಲಾ ಅವರ ಟ್ವೀಟರ್ ಖಾತೆ ಬ್ಲಾಕ್ ಮಾಡಲಾಗಿತ್ತು.
ಪಾಕಿಸ್ತಾನಿ ರಾಜಕಾರಣಿಗಳು ಮಾತ್ರವಲ್ಲದೇ, ಹನಿಯಾ ಆಮೀರ್, ಮಹೀರಾ ಖಾನ್ ಸೇರಿದಂತೆ ಪಾಕಿಸ್ತಾನದ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣ ಖಾತೆಗಳಿಗೂ ಭಾರತದಲ್ಲಿ ನಿರ್ಬಂಧ ಹೇರಲಾಗಿದೆ.