\ಡೆಹ್ರಾಡೂನ್: “ದೇವಭೂಮಿ ಉತ್ತರಾಖಂಡದಲ್ಲಿ ಅಕ್ರಮ ವಲಸಿಗರಿಗೆ ಉಳಿದುಕೊಳ್ಳಲು ಅವಕಾಶ ನೀಡುವುದಿಲ್ಲ. ರಾಜ್ಯದ ಮೂಲ ಅಸ್ಮಿತೆಯನ್ನು ಕಾಪಾಡುವುದು ನಮ್ಮ ಪ್ರಮುಖ ಆದ್ಯತೆ,” ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, “ಅನೇಕರು ವ್ಯಾಪಾರ ಅಥವಾ ಕೆಲಸಕ್ಕಾಗಿ ಇಲ್ಲಿಗೆ ಬಂದು, ಅಂತಿಮವಾಗಿ ಶಾಶ್ವತವಾಗಿ ನೆಲೆಸುತ್ತಿದ್ದಾರೆ. ತಮ್ಮ ನಿಜವಾದ ಗುರುತನ್ನು ಮರೆಮಾಚಿ ಪಡಿತರ ಚೀಟಿ, ಆಧಾರ್ ಕಾರ್ಡ್ಗಳಂತಹ ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದರಿಂದ ರಾಜ್ಯದ ಜನಸಂಖ್ಯಾ ಸ್ವರೂಪವೇ ಬದಲಾಗುತ್ತಿದ್ದು, ಇದು ದೇವಭೂಮಿಗೆ ಹಾನಿಕರ,” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಮಂಡಳಿ ಪಠ್ಯಕ್ರಮ ಕಡ್ಡಾಯ
ಇದೇ ವೇಳೆ ಮದರಸಾಗಳ ಬಗ್ಗೆಯೂ ಮಾತನಾಡಿದ ಸಿಎಂ, “ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ಸಿಗಬೇಕು. ರಾಜ್ಯ ಶಿಕ್ಷಣ ಮಂಡಳಿ ನಿಗದಿಪಡಿಸಿದ ಪಠ್ಯಕ್ರಮವನ್ನು ಬೋಧಿಸದ ಅಥವಾ ಪಾಲಿಸದ ಮದರಸಾಗಳನ್ನು ಮುಚ್ಚಲಾಗುವುದು. 2026ರ ಜುಲೈ 1 ರಿಂದ ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಗುರುತು ಮರೆಮಾಚುವವರಿಗೆ ಗೇಟ್ ಪಾಸ್
ರಾಜ್ಯದಲ್ಲಿ ಅಕ್ರಮ ವಲಸಿಗರ ವಿರುದ್ಧ ಅಭಿಯಾನ ಈಗಾಗಲೇ ಚಾಲ್ತಿಯಲ್ಲಿದೆ ಎಂದ ಅವರು, “ಯಾರೇ ಆಗಲಿ ತಮ್ಮ ಗುರುತನ್ನು ಮರೆಮಾಚಿ ಇಲ್ಲಿ ವಾಸಿಸುತ್ತಿದ್ದರೆ, ಅವರನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಉಳಿಯಲು ಬಿಡುವುದಿಲ್ಲ. ಉತ್ತರಾಖಂಡದ ಪಾವಿತ್ರ್ಯತೆ ಮತ್ತು ಮೂಲ ಸ್ವರೂಪವನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ,” ಎಂದು ಧಾಮಿ ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ; 500 ಕೋಟಿ ರೂ. ನೀಡುವವರು ಸಿಎಂ ಆಗ್ತಾರೆ : ನವಜೋತ್ ಸಿಂಗ್ ಸಿಧು ಪತ್ನಿ ಸ್ಫೋಟಕ ಹೇಳಿಕೆ



















