ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಸಹೋದರ, ಹಿರಿಯ ಚಲನಚಿತ್ರ ನಿರ್ಮಾಪಕ ಹಾಗೂ ಸಂಗೀತ ಸಂಯೋಜಕ ಗಂಗೈ ಅಮರನ್ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯೊಂದಿಗೆ ಅಗೌರವದಿಂದ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ನಂತರ, ಗಂಗೈ ಅಮರನ್ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ನಡೆದಿದ್ದೇನು?
ಚೆನ್ನೈನಲ್ಲಿ ಗೀತರಚನೆಕಾರ ವಾಲಿ ಅವರ ಪುಣ್ಯತಿಥಿ ಅಂಗವಾಗಿ ಇತ್ತೀಚೆಗೆ ಕಾರ್ಯಕ್ರಮವೊಂದು ನಡೆದಿತ್ತು. ನವೆಂಬರ್ 2 ರಂದು ವೈರಲ್ ಆದ ವಿಡಿಯೋದಲ್ಲಿ, ಗಂಗೈ ಅಮರನ್ ಅವರು ವರದಿಗಾರರೊಂದಿಗೆ ಮಾತನಾಡುತ್ತಿರುತ್ತಾರೆ. ಈ ವೇಳೆ ಅವರ ಹಿಂದೆ ಅಭಿಮಾನಿಯೊಬ್ಬರು ನಿಂತಿರುತ್ತಾರೆ. ಮಾತಿನ ಮಧ್ಯೆ ಅಭಿಮಾನಿಯತ್ತ ತಿರುಗಿದ ಅಮರನ್, “ಬನ್ನಿ, ನೀವೇ ಮಾತನಾಡಿ” ಎನ್ನುತ್ತಾರೆ. ಇದನ್ನು ಆಹ್ವಾನವೆಂದು ಭಾವಿಸಿದ ಅಭಿಮಾನಿ, ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಲು ಮುಂದೆ ಬರುತ್ತಾರೆ. ತಕ್ಷಣವೇ ಅತ್ತ ಸರಿದ ಗಂಗೈ ಅಮರನ್, “ಯಾರಾದರೂ ಮಾತನಾಡುವಾಗ ಹಿಂದೆ ಹೀಗೆ ನಿಲ್ಲುವುದಾ?” ಎಂದು ಆ ಅಭಿಮಾನಿಯನ್ನು ತೀಕ್ಷ್ಣವಾಗಿ ಗದರಿಸುತ್ತಾರೆ. ಇದರಿಂದ ಮುಜುಗರಕ್ಕೊಳಗಾದ ಅಭಿಮಾನಿ ಮೌನವಾಗಿ ದೂರ ಸರಿಯುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ನೆಟ್ಟಿಗರು ಗಂಗೈ ಅಮರನ್ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಆ ಅಭಿಮಾನಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅವರ ಪ್ರಬುದ್ಧತೆಯನ್ನು ತೋರಿಸುತ್ತದೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. “ಹಿಂದೆ ನಿಂತಿದ್ದ ಆ ವ್ಯಕ್ತಿಯಿಂದ ಇವರಿಗೇನು ತೊಂದರೆಯಾಯಿತು?” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಘಟನೆಯ ನಂತರ ಗಂಗೈ ಅಮರನ್ ಕ್ಷಮೆಯಾಚಿಸಬೇಕೆಂಬ ಕೂಗು ಹೆಚ್ಚಾಗುತ್ತಿದೆ.
‘ಕರಕಟ್ಟಕ್ಕಾರನ್’, ‘ಕೋಳಿ ಕೂವುತು’ ಮುಂತಾದ ಚಿತ್ರಗಳಿಗೆ ಸಂಗೀತ, ಸಾಹಿತ್ಯ ಹಾಗೂ ನಿರ್ದೇಶನ ನೀಡಿರುವ ಗಂಗೈ ಅಮರನ್, ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಆದರೆ, ಈ ಘಟನೆ ಅವರ ವರ್ಚಸ್ಸಿಗೆ ಧಕ್ಕೆ ತಂದಿದೆ. ಆದರೆ ಗಂಗೈ ಅಮರನ್ ಅವರು ಈ ವಿವಾದದ ಬಗ್ಗೆ ಈವರೆಗೆ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ಬಿಹಾರ ಚುನಾವಣೆ: ಎನ್ಡಿಎಗೆ ಸೆಡ್ಡು ಹೊಡೆದ ತೇಜಸ್ವಿ, ಮಹಿಳೆಯರಿಗೆ 30,000 ರೂ. ನೆರವು ಘೋಷಣೆ



















