ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಕಾಲ್ತುಳಿತದಲ್ಲಿ ಮಡಿದ 11 ಜನ ಆರ್ ಸಿಬಿ ಅಭಿಮಾನಿಗಳ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿ ಬಿದ್ದಿವೆ. ಈ ಮಧ್ಯೆ ವಿಧಾನಸಭಾ ಭದ್ರತಾ ಡಿಸಿಪಿ, ಆರ್ಸಿಬಿ ವಿಕ್ಟರಿ ಪರೇಡ್ ವೇಳೆ ಜನಸಂದಣಿ ಸೇರುವ ಬಗ್ಗೆ, ಸಾವು-ನೋವಿನ ಜೊತೆಗೆ ಭದ್ರತೆ ಕುರಿತು ಎಚ್ಚರಿಸಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದೆ. ನಿರ್ಲಕ್ಷ್ಯವಹಿಸಿದ ಐಎಎಸ್ ಅಧಿಕಾರಿಗಳ ತಲೆ ದಂಡ ಫಿಕ್ಸ್ ಎನ್ನಲಾಗುತ್ತಿದೆ.
ಜೂನ್ 3 ರಂದು ಐಪಿಎಲ್ ಕಪ್ ಗೆದ್ದಿದ್ದ ಆರ್ಸಿಬಿ ತಂಡದ ಸದಸ್ಯರಿಗೆ ಬುಧವಾರ ಆಂದ್ರೆ ಜೂನ್ 4 ರಂದು ವಿಧಾನಸೌಧದ ಮುಂಭಾಗ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಸರ್ಕಾರದ ಈ ನಿರ್ಧಾರದ ಸೂಕ್ಷ್ಮತೆ ಅರಿತ ವಿಧಾನಸೌಧ ಭದ್ರತೆ ವಿಭಾಗ ಅಧಿಕಾರಿ ಡಿಸಿಪಿ ಕರಿ ಬಸನಗೌಡ ಅವರು ಡಿಪಿಆರ್ಎ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಸನ್ಮಾನ ಸಮಾರಂಭದ ವೇಳೆ ಅಪಾರ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ.
ಇದರಿಂದ ಸಾವು-ನೋವುಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಿದ್ದರು. DPRAನ ಐಎಎಸ್ ಅಧಿಕಾರಿ ಸತ್ಯವತಿಗೆ ಪತ್ರ ಬರೆದು ಸಂಭವಿಸಬಹುದಾಗಿದ್ದ ಅನಾಹುತಗಳ ಬಗ್ಗೆ ತಿಳಿಸಿದ್ದರು. ಆದರೆ, ಐಎಎಸ್ ಅಧಿಕಾರಿ ಸತ್ಯವತಿ, ಮುಖ್ಯ ಕಾರ್ಯದರ್ಶಿಗೆ ಮಾಹಿತಿ ತಿಳಿಸದೆ ತಮ್ಮ ಬಳಿಯೇ ಪತ್ರ ಇಟ್ಟುಕೊಂಡಿದ್ದಾರೆ. ಇದು ಸರ್ಕಾರದ ಆಕ್ರೋಶಕ್ಕೂ ಕಾರಣವಾಗಿದೆ ಎನ್ನಲಾಗುತ್ತಿದ್ದು, ಅಧಿಕಾರಿಯ ತಲೆದಂಡ ಫಿಕ್ಸ್ ಎನ್ನಲಾಗುತ್ತಿದೆ.