ಬೆಂಗಳೂರು: ಭಾರತದ ಕೃಷಿಯನ್ನು ಪ್ರಕೃತಿಯೊಡನೆ ಆಡುವ ಜೂಜಾಟ ಎಂದೇ ಕರೆಯಲಾಗುತ್ತದೆ. ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ದೇಶದ ಹಲವೆಡೆ ಪ್ರತಿ ವರ್ಷವೂ ಸಾವಿರಾರು ಕೋಟಿ ರೂ. ಮೌಲ್ಯದ ಬೆಳೆಹಾನಿಯಾಗುತ್ತದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದರೆ, ರೈತರು ನಷ್ಟದಿಂದ ಪಾರಾಗಲಿ ಎಂದು ಕೇಂದ್ರ ಸರ್ಕಾರವು ಬೆಳೆ ವಿಮೆ ಸೌಕರ್ಯ ಒದಗಿಸುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ರೈತರು ಬೆಳೆಗಳಿಗೆ ವಿಮೆ ಮಾಡಿಸಿ, ನಷ್ಟವಾದರೆ ಪರಿಹಾರ ಪಡೆಯಬಹುದಾಗಿದೆ.
ರೈತರು ಯಾವುದಾದರೂ ಬ್ಯಾಂಕ್ ನಿಂದ ಬೆಳೆ ಸಾಲ ಪಡೆದುಕೊಂಡಿದ್ದರೆ, ಆಗ ಪಿಎಂ ಫಸಲ್ ಬಿಮಾ ಯೋಜನೆ ಅಡಿ ಕ್ರಾಪ್ ಇನ್ಷೂರೆನ್ಸ್ ಅನ್ವಯ ಆಗುತ್ತದೆ. ನಿಮಗೆ ನೀಡಲಾಗುವ ಸಾಲದಲ್ಲಿ ಬೆಳೆ ವಿಮೆಯ ಪ್ರೀಮಿಯಮ್ ಅನ್ನು ಕಡಿತ ಮಾಡಿಕೊಂಡಿರಲಾಗಿರುತ್ತದೆ. ಹೀಗಾಗಿ, ಬೆಳೆ ಸಾಲ ಪಡೆದ ರೈತರು ಪ್ರತ್ಯೇಕವಾಗಿ ಬೆಳೆ ವಿಮೆ ಮಾಡಿಸುವ ಅಗತ್ಯ ಇರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ರೈತರು ಬ್ಯಾಂಕ್ ಗಳಲ್ಲಿ, ಸಮೀಪದ ಸಿಎಸ್ ಸಿ ಸೆಂಟರ್ ಅಥವಾ ಕೃಷಿ ಕೇಂದ್ರದಲ್ಲಿ ಬೆಳೆ ವಿಮೆಯ ಅರ್ಜಿಯನ್ನು ಭರ್ತಿ ಮಾಡಿ ಫಸಲ್ ಬಿಮಾ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಜಮೀನಿನ ಪಹಣಿ, ಆಧಾರ್ ಆರ್ಡ್ ಅಥವಾ ಇನ್ಯಾವುದಾದರೂ ಐಡಿ ದಾಖಲೆ ಮತ್ತು ಬ್ಯಾಂಕ್ ಖಾತೆ ವಿವರವನ್ನು ನೀಡಬೇಕಾಗುತ್ತದೆ. ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಯೋಜನೆಯ pmfby.gov.in/ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಆನ್ ಲೈನ್ ನಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ಪೋರ್ಟಲ್ ರಚಿಸಿದೆ. www.samrakshane.karnataka.gov.in/CropHome.aspx ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರವು ಬೆಳೆ ವಿಮೆಗಾಗಿ ವಿವಿಧ ಇನ್ಷೂರೆನ್ಸ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಸರ್ಕಾರಿ ಇನ್ಷೂರೆನ್ಸ್ ಕಂಪನಿಗಳು, ಖಾಸಗಿ ಇನ್ಷೂರೆನ್ಸ್ ಕಂಪನಿಗಳೂ ಸೇರಿವೆ. ಅಗ್ರಿಕಲ್ಚರ್ ಇನ್ಷೂರೆನ್ಸ್ ಕಂಪನಿಯಿಂದ ಹಿಡಿದು ಟಾಟಾ ಎಐಜಿವರೆಗೆ ವಿವಿಧ ಕಂಪನಿಗಳಿವೆ. ಒಂದೊಂದು ಜಿಲ್ಲೆಗೂ ಒಂದು ನಿಗದಿತ ಇನ್ಷೂರೆನ್ಸ್ ಕಂಪನಿ ಇರುತ್ತದೆ. ಜಮೀನು ಎಷ್ಟಿದೆ? ಏನು ಬೆಳೆಯಲಾಗಿತ್ತು? ಅಂದಾಜು ಎಷ್ಟು ನಷ್ಟವಾಗಿದೆ ಎಂಬುದನ್ನು ಆಧರಿಸಿ ಬೆಳೆ ನಷ್ಟ ಪರಿಹಾರ ನೀಡಲಾಗುತ್ತದೆ.