ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧಿಯಾಗಿ, ಜೈಲಿನಲ್ಲಿದ್ದಾರೆ. ಅಭಿಮಾನಿಗಳು ಹಾಗೂ ಆಪ್ತರಿಗೆ ಅವರು ಹೇಗೆ ಇದ್ದರೆ ಎಂಬ ಚಿಂತೆ ಇದ್ದೆ ಇರುತ್ತೆ. ಸದ್ಯ ದರ್ಶನ್ ಜೈಲಿನಲ್ಲಿ ಹೇಗೆ ಕಾಲ ಕಳೆಯುತ್ತಿದ್ದಾರೆ? ಅವರಿದ್ದ ಸೆಲ್ ಹೇಗಿದೆ? ಅವರ ದಿನಚರಿ ಹೇಗಿದೆ? ಎಂಬೆಲ್ಲ ಕುರಿತು ಜೈಲಿನಲ್ಲಿದ್ದ ವ್ಯಕ್ತಿಯೊಬ್ಬರು ಹೊರ ಬಂದು ಹೇಳಿದ್ದಾರೆ.
ಸನ್ನಡತೆಯ ಆಧಾರದ ಮೇಲೆ ಜೈಲಿನಿಂದ ಹೊರಬಂದಿರುವ ತುರುವನೂರು ಸಿದ್ಧಾರೂಢ (Siddharoodha) ದರ್ಶನ್ ರನ್ನು ಜೈಲಿನಲ್ಲಿ ಭೇಟಿಯಾಗಿ ಬಂದಿದ್ದಾರೆ. ಈ ವಿಷಯವಾಗಿ ಮಾತನಾಡಿರುವ ಅವರು, ದರ್ಶನ್ ಜೈಲಿನಲ್ಲಿ ನರಕ ಅನುಭವಿಸುತ್ತಿದ್ದಾರೆ. ದರ್ಶನ್ರನ್ನು ಅಲ್ಲಿ ನೋಡಿ ಬೇಜಾರಾಯಿತು ಎಂದು ಹೇಳಿದ್ದಾರೆ.
ಜುಲೈ 8ರಂದು ಅಧಿಕಾರಿಗಳ ಅನುಮತಿ ಪಡೆದು ದರ್ಶನ್ ಅವರನ್ನು ನಾನು ಭೇಟಿಯಾದೆ. ನಿಮ್ಮ ಅಭಿಮಾನಿ ಅಂತ ಭೇಟಿಯಾದಾಗ ತಬ್ಬಿಕೊಂಡರು. ಆ ಜಾಗದಲ್ಲಿ ದರ್ಶನ್ರನ್ನು ನೋಡಿ ಬೇಜಾರಾಯಿತು. ಅವರಿಗೆ ನಾನು ಪಿರಮಿಡ್ ಧ್ಯಾನ ಹೇಳಿಕೊಟ್ಟೆ. 10 ನಿಮಿಷ ಮಾಡಿದ ನಂತರ ಇದು ಒಂದು ಥರ ಚೆನ್ನಾಗಿದೆ ಕಂಟಿನ್ಯೂ ಮಾಡಬಹುದು ಎಂದರು ಎಂದು ಹೇಳಿದ್ದಾರೆ.
ಅವರು ಜೈಲಿನಲ್ಲಿ ಆಧ್ಯಾತ್ಮಿಕ ಪುಸ್ತಕಗಳನ್ನು ಹೆಚ್ಚಾಗಿ ಓದಿದ್ದಾರೆ. ದರ್ಶನ್ ಸರ್ ಮಾಡಿದ್ದು ತಪ್ಪೋ ಸರಿಯೋ ಅದನ್ನು ನಿರ್ಧಾರ ಮಾಡೋಕೆ ನ್ಯಾಯಾಲಯ ಇದೆ. ಕೊನೆಯವರೆಗೂ ನಮ್ಮ ಜೊತೆಗೆ ಇರೋದು ಹೆಂಡತಿ, ಮಕ್ಕಳು ಮಾತ್ರ. ದರ್ಶನ್ ಸರ್ಗೆ ಆದಷ್ಟು ಬೇಗ ಒಳ್ಳೆಯದಾಗಲಿ. ಅವರು ಆದಷ್ಟು ಬೇಗ ಹೊರಗೆ ಬರುತ್ತಾರೆ ಅನ್ನೋ ಭರವಸೆ ಇದೆ ಎಂದು ಹೇಳಿದ್ದಾರೆ.
ನಾನು ಜೈಲಿಗೆ ಬಂದಿರುವ ಕಾರಣ ಕೇಳಿದರು. ಹೊಸ ಜೀವನ ಸಿಕ್ಕಿದೆ. ಒಳ್ಳೆಯದಾಗಲಿ ಎಂದು ಹಾರೈಸಿದರು. ನೀನು ನನ್ನ ಸೆಲೆಬ್ರಿಟಿ, ನಾನು ನೀನ್ನ ಸೆಲೆಬ್ರಿಟಿ ಎಂದರು. ಅವರಿಗೆ ವಿಐಪಿ ಟ್ರೀಟ್ಮೆಂಟ್ ಕೊಟ್ಟಿಲ್ಲ. ಎಲ್ಲರಂತೆ ಅವರನ್ನು ಕಾಣಲಾಗುತ್ತಿದೆ. ಅವರು ನೆಲದ ಮೇಲೆ ಮಲಗಿಕೊಳ್ಳುತ್ತಾರೆ. ಸೊಳ್ಳೆ ಪರದೆ ಇದೆ. ಕುಡಿಯೋಕೆ ವಾಟರ್ ಕ್ಯಾನ್ ನಲ್ಲಿ ನೀರಿದೆ ಅಷ್ಟೇ. ವಿಶೇಷ ಸೌಲಭ್ಯ ಏನೂ ಇಲ್ಲ ಎಂದು ಹೇಳಿದ್ದಾರೆ.