ಭಾರತ-ಪಾಕಿಸ್ತಾನ ನಡುವೆ ಯುದ್ಧಕ್ಕೆ ಕ್ಷಣಗಣನೆ ಶುರವಾಗಿದೆಯಾ? ಭಾರತೀಯ ರೈಲ್ವೆಗೆ ಸಿಕ್ಕಿರುವ ಆದೇಶ ನೋಡಿದರೆ ಯಾವ ಯಾವ ಕ್ಷಣದಲ್ಲಾದರೂ ಆಪರೇಷನ್ ಪ್ರತಿಕಾರ ಶುರುವಾಗಬಹುದು ಎಂಬ ಸುಳಿವು ಸಿಗುತ್ತಿದೆ.
ಭಾರತೀಯ ಸೇನೆಯಿಂದ ರೈಲ್ವೆ ಇಲಾಖೆಗೆ ತುರ್ತು ಪರಿಸ್ಥಿತಿಯಲ್ಲಿ ಸನ್ನದ್ಧವಾಗಿರುವಂತೆ ಸೂಚನೆ ಸಿಕ್ಕಿದೆ. ಅಷ್ಟೇ ಅಲ್ಲಾ, ಅಗತ್ಯ ಸಾಮಾನು ಸರಂಜಾಮು, ಯೋಧರ ಸಂಚಾರಕ್ಕೆ ಅನುವಾಗುವಂತೆ ಬೋಗಿಗಳು ಸೇರಿದಂತೆ ಟ್ಯಾಂಕರ್, ಕ್ಷಿಪಣಿಗಳ ಸ್ಥಳಾಂತರಕ್ಕೆ ಅನುವಾಗುವ ಬೋಗಿಗಳನ್ನು ಸಜ್ಜುಗೊಳಿಸಿಕೊಂಡಿರುವಂತೆ ತಿಳಿಸಲಾಗಿದೆ. ಈ ನಿಟ್ಟಿನಲ್ಲೇ ಕಾರ್ಯೋನ್ಮುಖವಾಗಿರುವ ಭಾರತೀಯ ರೈಲ್ವೆ ತುರ್ತು ಸಂದರ್ಭದಲ್ಲಿ ಅತ್ಯಂತ ಮಿಂಚಿನ ವೇಗದಲ್ಲಿ ಸ್ಪಂದಿಸಲು ಅನುವಾಗಲು ಬೇಕಿರುವ ತಯಾರಿ ಮಾಡಿಕೊಳ್ಳುತ್ತಿದೆ.
ಹೆಚ್ಚಿನ ಸಂದಣಿಯಿಲ್ಲದ ಮಾರ್ಗಗಳ ರೈಲುಗಳನ್ನು ರದ್ದುಗೊಳಿಸಿ ಅವುಗಳನ್ನು ತುರ್ತು ಸಂದರ್ಭಕ್ಕೆ ಬಳಸಿಕೊಳ್ಳಲು ಕಾಯ್ದಿರಿಸುತ್ತಿದೆ. ಅಲ್ಲದೆ, ಗುಜರಾತ್, ರಾಜಸ್ಥಾನ್, ಪಂಜಾಬ್ ಮತ್ತು ಜಮ್ಮು ಕಾಶ್ಮೀರ ರೈಲು ಮಾರ್ಗವನ್ನು ಸದಾ ಮುಕ್ತವಾಗಿಟ್ಟುಕೊಳ್ಳುವಂತೆ ವೇಳಾಪಟ್ಟಿ ರೂಪಿಸಲಾಗುತ್ತಿದೆ.
ಅಷ್ಟೇ ಅಲ್ಲದೆ ಸೇನೆಯಿಂದ ಸಿಕ್ಕಿರುವ ಮಾರ್ಗಸೂಚಿಯಂತೆ, ಪಶ್ಚಿಮ ಬಂಗಾಳ ಈಶಾನ್ಯ ರಾಜ್ಯ ಸೇರಿದಂತೆ ಬಾಂಗ್ಲಾ ಸಂಪರ್ಕಿಸುವ ಮಾರ್ಗಗಳಲ್ಲೂ ಸೂಕ್ತ ಪರಿಶೀಲನೆ ನಡೆಸಿ ಮಾರ್ಗವನ್ನು ಸುಗಮ ಸಂಚಾರಕ್ಕೆ ಅನುವಾಗುವಂತೆ ನೋಡಿಕೊಳ್ಳಲಾಗುತ್ತಿದೆ.



















