ಬಾಗಲಕೋಟೆ; ಆರ್ ಸಿಬಿ ಕಪ್ ಕನಸು ನನಸಾಗಲಿ ಅಂತಾ ಬಾಗಲಕೋಟೆಯ ಅಭಿಮಾನಿಗಳು ನಗರದ ಸುಪ್ರಸಿದ್ಧ ಹನುಮಾನ್ ದೇವರ ಮೊರೆ ಹೋಗಿದ್ದಾರೆ. ವಿದ್ಯಾಗಿರಿಯ ಹನುಮಾನ್ ಮಂದಿರದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದ ಅಭಿಮಾನಿಗಳು ಈ ಬಾರಿ ಕಪ್ ನಮ್ದೇ ಆಗಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಹಾಗೂ ಆರ್ ಸಿಬಿ ಅಭಿಮಾನಿಗಳು ಜಂಟಿಯಾಗಿ ಹನುಮಂತನಿಗೆ ಅಭಿಷೇಕ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕರ್ಪೂರದಾರತಿ ಬೆಳಗಿ ಮಂಗಳಾರತಿ ನೆರವೇರಿಸಿದರು.

ಬೆಂಗಳೂರು ಬಾಯ್ಸ್ ಇವತ್ತು ಪಂಜಾಬ್ ವಿರುದ್ಧ ಜಯಘೋಷ ಮೊಳಗಿಸಲಿ ಅಂತಾ ಚಾಮರಾಜನಗರದಲ್ಲೂ ಅಭಿಮಾನಿಗಳು ಪೂಜೆ ನೆರವೇರಿಸಿದ್ದಾರೆ. ಸುಪ್ರಸಿದ್ಧ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಆರ್ ಸಿಬಿ ಫ್ಯಾನ್ಸ್ ಈಡುಗಾಯಿ ಒಡೆದು ಕಪ್ ಗೆಲ್ಲೋ ಇಷ್ಟಾರ್ಥ ಪೂರೈಸುವಂತೆ ಮನವಿ ಸಲ್ಲಿಸಿದ್ರು. ಇದೇ ವೇಳೆ ಅಭಿಮಾನಿಗಳ ಬಳಗ ಆರ್ ಸಿಬಿ ಜರ್ಸಿಗೆ ದೃಷ್ಟಿ ತೆಗೆದು ಗೆಲುವಿನ ಹಾದಿ ಸುಗಮವಾಗ್ಲಿ ಅಂತಾ ಪ್ರಾರ್ಥಿಸಿದ್ರು.
ಆರ್ ಸಿಬಿ ಈ ಬಾರಿ ಐಪಿಎಲ್ ಸಾಮ್ರಾಟನಾಗ್ಲಿ ಅಂತಾ ಬಾಗಲಕೋಟೆಯಲ್ಲಿ ಹರಕೆ ಕಟ್ಟಿಕೊಳ್ಳಲಾಗಿದೆ. ಇದರ ಅಂಗವಾಗೇ ಇಳಕಲ್ ತಾಲೂಕಿನ ಕರಡಿ ಗ್ರಾಮದ ಸುಪ್ರಸಿದ್ಧ ಬಸವಣ್ಣ ಮಂದಿರದಲ್ಲಿ ತೆಂಗಿನಕಾಯಿ ಒಡೆದು ಪೂಜೆ ನೆರವೇರಿಸಲಾಗಿದೆ. ಆರ್ ಸಿಬಿ ಅಭಿಮಾನಿಗಳು ಕಪ್ ನಮ್ಮದಾಗಲಿ ಅಂತಾ 201 ಈಡುಗಾಯಿ ಒಡೆದಿದ್ದಾರೆ.