ತೀರಾ ಇತ್ತೀಚೆಗಷ್ಟೇ ಮಳೆಯಿಂದ ಕೆರೆಯಂತಾಗಿದ್ದ ಬೆಂಗಳೂರು ಐಟಿ ವಲಯದ ಕೆಂಗಣ್ಣಿಗೆ ಗುರಿಯಾಗಿತ್ತು. ಇದನ್ನೇ ಸುವರ್ಣಾವಕಾಶ ಅಂದುಕೊಂಡು ನೆರೆಯ ಆಂಧ್ರ ಬಹಿರಂಗವಾಗೇ ಬೆಂಗಳೂರು ಬಿಡಿ ಆಂಧ್ರಕ್ಕೆ ಬನ್ನಿ ಅಂತಾ ಆಹ್ವಾನ ನೀಡಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಂದು ಮೆಗಾ ಆಫರ್ ನೀಡಿರುವ ಆಂಧ್ರ, ಕರ್ನಾಟಕದಿಂದ ಐಟಿ ವಲಯವನ್ನೇ ಗುಳೇ ಏಬ್ಬಿಸುವ ತರಾತುರಿಯಲ್ಲಿದೆ.
99 ಪೈಸಿಗೆ ಬಂಗಾರದ ಭೂಮಿ ಹಸ್ತಾಂತರ
ಹೌದು, ಇದು ಅಚ್ಚರಿಯಾದರೂ ಸತ್ಯ. ತೆಲುಗುನಾಡಿನಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದಂತೆ ಚಂದ್ರಬಾಬು ನಾಯ್ಡು ಉದ್ಯೋಗ ಸೃಷ್ಟಿಯ ವಾಗ್ದಾನ ಮಾಡಿದ್ರು. ಅದ್ರಲ್ಲೂ ಆಂಧ್ರವನ್ನು ಟೆಕ್ ಹಬ್ ಮಾಡ್ತೀನಿ ಅಂತಾ ಘೋಷಿಸಿದ್ರು. ಖುದ್ದು ತಮ್ಮ ಮಗನಿಗೇ ಐಟಿ ಇಲಾಖೆ ಹೊಣೆ ಹೊರಿಸಿ ಫೀಲ್ಡಿಗಿಳಿಸಿದ್ರು. ಇದರ ಫಲವೆನ್ನುವಂತೀಗ ಆಂಧ್ರ ಐಟಿ ವಲಯಕ್ಕೆ ಅಗ್ಗದ ಬೆಲೆಗೆ ಭೂಮಿ ನೀಡಿ ಉದ್ಯೋಗ ಸೃಷ್ಟಿಯ ಸಂಕಲ್ಪ ಮಾಡಿದೆ.
ಟಿಸಿಎಸ್ ಗೆ 99 ಪೈಸೆಗೆ ಭರ್ಜರಿ ಭೂಮಿ
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ನಿನ್ನೆ ಸಂಪುಟ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ಟಾಟಾ ಒಡೆತನದ ಟಿಸಿಎಸ್ ಕಂಪನಿಗೆ ಕೇವಲ 99 ಪೈಸೆಗೆ 21.6 ಎಕರೆ ಭೂಮಿ ನೀಡಲು ಸಮ್ಮತಿಸಲಾಗಿದೆ. ವಿಶಾಖಪಟ್ಟಣಂ ಬಳಿ ಟಿಸಿಎಸ್ ಗೆ ಭೂಮಿ ನೀಡಲಾಗಿತ್ತು ಕಂಪನಿ ಶೀಘ್ರವೇ ತನ್ನ ಕಚೇರಿ ತೆರೆಯಲಿದೆ.
ಮೋದಿ ಮಾದರಿಯಲ್ಲಿ ನಾಯ್ಡು ಹೆಜ್ಜೆ
ಈ ಹಿಂದೆ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಐಟಿ ವಲಯಕ್ಕೆ ಭರಪೂರ ಆಫರ್ ನೀಡಿದ್ರು. ರಾಜ್ಯದಲ್ಲಿ ತಯಾರಕ ವಲಯವನ್ನು ಉತ್ತೇಜಿಸೋ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಗೆ ಸನ್ನದ್ ನಲ್ಲಿ 99 ಪೈಸೆಗೆ ಭೂಮಿ ನೀಡಿದ್ರು. ಇದೇ ಹೆಜ್ಜೆ ಹಿಂಬಾಲಿಸಿರುವ ನಾಯ್ಡು, ವಿಶಾಖಪಟ್ಟಣಂನಲ್ಲಿ ಜಮೀನು ಹಸ್ತಾಂತರಿಸಿದ್ದಾರೆ. ಟಿಸಿಎಸ್ ಮುಂದಿನ 2ರಿಂದ 3 ವರ್ಷಗಳಲ್ಲಿ 1370 ಕೋಟಿ ಬಂಡವಾಳ ಹೂಡಲಿದೆ. ಅಷ್ಟೇ ಅಲ್ಲಾ 12 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಆಂಧ್ರದ ಈ ನಡೆ ನಿಜಕ್ಕೂ ಕರ್ನಾಟಕದ ಪಾಲಿಗೆ ನುಂಗಲಾರದ ತುತ್ತಾಗ್ತಿದೆ. ಹೀಗೇ ಮುಂದುವರಿದ್ರೆ ಭವಿಷ್ಯದಲ್ಲಿ ಸಿಲಿಕಾನ್ ಸಿಟಿಯ ಹೆಗ್ಗುರುತೇ ಮಾಯವಾಗಬಹುದು. ಹೀಗಾಗಿ ಆಡಳಿತಾ ರೂಢ ಕಾಂಗ್ರೆಸ್ ಸರ್ಕಾರದ ಉದ್ಯೋಗ ಸೃಷ್ಟಿಗೆ ಮತ್ತು ಸಂಸ್ಥೆಗಳ ಗುಳೇ ತಪ್ಪಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಬೇಕಿದೆ.