ಮಧ್ಯಪ್ರಾಚ್ಯ ಈಗ ಅಕ್ಷರಶಃ ಧಗಧಗಿಸುತ್ತಿದೆ. ಇರಾನ್ ಮೇಲೆ ಇಸ್ರೇಲ್, ಅಮೆರಿಕ ದಾಳಿ ನಡೆಸುತ್ತಿದ್ದಂತೆ ಇಡೀ ಮಧ್ಯಪ್ರಾಚ್ಯವೇ ಯುದ್ಧಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಇಡೀ ಕೊಲ್ಲಿ ಲಾಕ್ ಡೌನ್ ಆಗಿದೆ. ಈ ಯುದ್ಧದ ಭಯಾನಕತೆ, ಭೀಕರತೆ, ಭೀಷಣ ಭೀಭೀತ್ಸ ಕೇವಲ ಆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತಕ್ಕೂ ದೊಡ್ಡ ಆರ್ಥಿಕ, ರಾಜಕೀಯ, ಸಾಮಾಜಿಕ ಹೊಡೆತ ನೀಡುತ್ತಿದೆ.
ಹೌದು.. ಭಾರತದಿಂದ ಬೇರೆ ದೇಶಕ್ಕೆ ಉದ್ಯೋಗ ಅರಿಸಿ ಹೋಗಿರುವರು ಅಲ್ಲಿ ದುಡಿದ ದುಡ್ಡನ್ನು ತಾಯ್ನಾಡಿನಲ್ಲಿರುವ ತಮ್ಮ ಪೋಷಕರು, ಸಂಬಂಧಿಕರಿಗೆ ಕಳುಹಿಸುತ್ತಿರುತ್ತಾರೆ. ಈ ರೀತಿ ಕಳುಹಿಸಿವ ಹಣವನ್ನು ರೆಮಿಟೆನ್ಸ್ ಅಂದ್ರೆ ರವಾನೆ ಹಣ ಎನ್ನುತ್ತಾರೆ. ಇದು ದೇಶದಲ್ಲಿನ ಹಲವಾರು ಕುಟುಂಬಗಳ ಆದಾಯದ ಪ್ರಮುಖ ಮೂಲವಾಗಿದೆ. ಅಷ್ಟೇ ಅಲ್ಲ ಈ ದುಡ್ಡು ವಿದೇಶಿ ವಿನಿಮಯದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.
ಈ ಹಣ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆಗೆ ಕೊಡುಗೆ ನೀಡುತ್ತದೆ. ಈ ಹಣ ಕುಟುಂಬದ ಆರ್ಥಿಕತೆ ಮಟ್ಟ ಹೆಚ್ಚಿಸುತ್ತದೆ. ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯಕ್ಕೆ ಸಹಾಯ ಮಾಡುತ್ತದೆ. ದೇಶದ ವಿದೇಶಿ ವಿನಿಮಯ ಮೀಸಲು ಹೆಚ್ಚಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಆದಾಯದ ಮೂಲ ಹೆಚ್ಚಾಗುತ್ತದೆ. ಆದ್ರೆ ಈಗ ಕೊಲ್ಲಿ ಯುದ್ಧದಿಂದಾಗಿ ರೆಮಿಟೆನ್ಸ್ ಗೆ ಕತ್ತರಿ ಬಿದ್ದಿದ್ದು, ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುವಂತಾಗುತ್ತಿದೆ.
ಈ ಹಣ ಕುಟುಂಬಗಳಿಗೆ ಬಂದ್ರೂ ಅದು ದೇಶದ ವಿದೇಶಿ ವಿನಿಮಯ ಭಂಡಾರಕ್ಕೆ ಸ್ಥಿರತೆಯನ್ನ ನೀಡೋ, ವ್ಯಾಪಾರದ ಕೊರತೆಯನ್ನ ಭರ್ತಿ ಮಾಡೋ ಮತ್ತು ಅನೇಕ ಕುಟುಂಬಗಳ ಜೀವನವನ್ನ ಉತ್ತಮಗೊಳಿಸುವ ದೊಡ್ಡ ಶಕ್ತಿಯಾಗಿದೆ. ಭಾರತಕ್ಕೆ ಬರೋ ರೆಮಿಟೆನ್ಸ್ ನಲ್ಲಿ ಗಲ್ಫ್ ರಾಷ್ಟ್ರಗಳಿಂದಲೇ ಹೆಚ್ಚು ಪಾಲು ಬರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 2025ರ ಬುಲೆಟಿನ್ ಪ್ರಕಾರ, 2023-24ರ ಹಣಕಾಸು ವರ್ಷದಲ್ಲಿ ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬಂದ ಒಟ್ಟು ರೆಮಿಟೆನ್ಸ್ ಮೊತ್ತ 118.7 ಬಿಲಿಯನ್ ಡಾಲರ್ ಅಂದ್ರೆ 11 ಲಕ್ಷ ಕೋಟಿ ರೂಪಾಯಿ ಹರಿದು ಬಂದಿದೆ. 2025-26ರ ಸಾಲಿನಲ್ಲಿ 14 ಲಕ್ಷ ಕೋಟಿಯಷ್ಟಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತದ ಒಟ್ಟು ಜಿಡಿಪಿಯ ಶೇ.3.5 ರಷ್ಟಿದೆ.
ಈ ರೆಮಿಟೆನ್ಸ್ ಬೆಳವಣಿಗೆ ಭಾರತದ ವಾಣಿಜ್ಯ ವ್ಯಾಪಾರ ಕೊರತೆಯ ಸುಮಾರು ಅರ್ಧ ಭಾಗವನ್ನ ಭರ್ತಿ ಮಾಡತ್ತೆ ಮತ್ತು ವಿದೇಶಿ ಹಣಕಾಸಿನ ಆಘಾತಗಳಿಂದ ರಕ್ಷಣೆ ನೀಡತ್ತೆ. ಹೀಗೆ ಹರಿದು ಬರೋ ರೆಮಿಟೆನ್ಸ್ ಗಳಲ್ಲಿ ಯುಎಇ, ಸೌದಿ ಅರೇಬಿಯಾ, ಕುವೈತ್, ಕತಾರ್, ಓಮನ್, ಬಹ್ರೇನ್ ಗಳು ಸಂಘರ್ಷದ ನಡುವೆ ಸಿಲುಕಿವೆ. ಹೀಗಾಗಿ ಅಲ್ಲಿರುವ ಭಾರತೀಯರ ದುಡಿಮೆ ಅಸ್ತವ್ಯಸ್ಥಗೊಂಡಿದೆ. ಇದು ಭಾರತೀಯರಿಂದ ಭಾರತಕ್ಕೆ ಬರಬೇಕಾಗಿದ್ದ ರೆಮಿಟೆನ್ಸ್ ಮೇಲೆ ಗಮನಾರ್ಹ ಪರಿಣಾಮ ಬೀರಿದೆ.
ಗಲ್ಫ್ ರಾಷ್ಟ್ರಗಳಿಂದ ಬರೋ ರೆಮಿಟೆನ್ಸ್ ನಲ್ಲಿ ಮಹಾರಾಷ್ಟ್ರ ಶೇ. 20 ಪಾಲು ಪಡೆದರೆ, ಇನ್ನುಳಿದ ಸ್ಥಾನಗಳಲ್ಲಿ ಕೇರಳ, ತಮಿಳುನಾಡು, ತೆಲಂಗಾಣ, ಕರ್ನಾಟಕ ರಾಜ್ಯಗಳಿವೆ. ಈ ಉದ್ವಿಗ್ನತೆ ಭಾರತೀಯರ ದುಡಿಮೆ ಮತ್ತು ಭಾರತಕ್ಕೆ ಬರುತ್ತಿದ್ದ ರೆಮಿಟೆನ್ಸ್ ಹಣದ ಪಾಲನ್ನ ಕಡಿಮೆ ಮಾಡಿರುವುದು ಆತಂಕವೇ ಸರಿ.
ಇದನ್ನೂ ಓದಿ : ಇಂಡಿಗೋ CEO ಪೀಟರ್ ಎಲ್ಬರ್ಸ್ ದಿಢೀರ್ ರಾಜೀನಾಮೆ!



















