ಬೆಂಗಳೂರು: ಬೆಂಗಳೂರು ವಿವಿ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ ವೊಂದು ಸಿಕ್ಕಿದ್ದು, ವಿದ್ಯಾರ್ಥಿಗಳ ಬಹುದಿನದ ಬೇಡಿಕೆಯೊಂದು ಈಡೇರಿದೆ.
ಜ್ಞಾನಭಾರತಿ ಯೂನಿವರ್ಸಿಟಿಯಲ್ಲಿ ವಿದ್ಯರ್ಥಿಗಳಿಗೆ ಇನ್ನು ಮುಂದೆ ವಿಮೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಜೀವನ ಹಾಗೂ ಅಪಘಾತ ವಿಮೆ ನೀಡಲು ಬೆಂಗಳೂರು ವಿವಿ ಮುಂದಾಗಿದೆ. ವಿವಿಯಲ್ಲಿ ಸಾಕಷ್ಟು ಅಪಘಾತಗಳಾಗಿದ್ದವು. ಹೀಗಾಗಿ ಆರೋಗ್ಯ ಹಾಗೂ ಅಪಘಾತ ವಿಮೆ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದರು. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಈಗಾಗಲೇ ಹಲವು ಬಾರಿ ವಿವಿಗೆ ಮನವಿ ಮಾಡಿದ್ದರು. ವಿದ್ಯಾರ್ಥಿಗಳ ಮನವಿಗೆ ಮಣಿದು ವಿವಿ ವಿಮೆ ನೀಡಲು ನಿರ್ಧಾರ ಕೈಗೊಂಡಿದೆ.
ವಿವಿಯಲ್ಲಿ ಓದುತ್ತಿರುವ ಸುಮಾರು 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿಮೆ ಮಾಡಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ಪಾವತಿಸುವ ವಾರ್ಷಿಕ ಶುಲ್ಕದಲ್ಲೇ ವಿಮೆಯ ಶುಲ್ಕ ಕೂಡ ಸೇರ್ಪಡೆಯಾಗಲಿದೆ. ಆದರೆ, ವಿವಿಯಿಂದಲೇ ಹಣ ಭರಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ.