ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅನ್ವಯ ಕಾರ್ಮಿಕರ ದಿನದ ಕೂಲಿಯನ್ನು ಕೇಂದ್ರ ಸರಕಾರ ಪರಿಷ್ಕರಣೆ ಮಾಡಿದೆ. ನರೇಗಾ ಕಾರ್ಮಿಕರಿಗೆ ಇದುವರೆಗೆ ಇದ್ದ ದಿನಗೂಲಿಯನ್ನು 349 ರೂಪಾಯಿಗೆ ಬದಲಾಗಿ ಇನ್ನು 370 ರೂ. ಸಿಗಲಿದೆ. ದಿನಕ್ಕೆ 21 ರೂ. ಏರಿಕೆಯಾಗಿದ್ದು, ಮಂಗಳವಾರದಿಂದಲೇ (ಏಪ್ರಿಲ್ 1) ಜಾರಿಗೆ ಬಂದಿದೆ. ಹಾಗಾಗಿ, ರಾಜ್ಯದ ದಿನಗೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಇದರೊಂದಿಗೆ ದಕ್ಷಿಣ ಭಾರತದಲ್ಲಿಯೇ ಕರ್ನಾಟಕದಲ್ಲಿ ನರೇಗಾ ದಿನಗೂಲಿ ನೀಡಿದಂತಾಗಿದೆ. ದಕ್ಷಿಣ ಭಾರತ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, , ತಮಿಳುನಾಡು ಕೇರಳ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲೇ ಹೆಚ್ಚು ಕೂಲಿ ಇದೆ. ಆಂಧ್ರಪ್ರದೇಶದಲ್ಲಿ ದಿನಕ್ಕೆ 307 ರೂ., ತೆಲಂಗಾಣದಲ್ಲಿ 307 ರೂ., ಕೇರಳದಲ್ಲಿ 369 ರೂ. ಮತ್ತು ತಮಿಳುನಾಡಿನಲ್ಲಿ336 ರೂ. ಕೂಲಿ ನಿಗದಿಪಡಿಸಲಾಗಿದೆ. ಹಾಗಾಗಿ, ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಹೆಚ್ಚು ಕೂಲಿ ಇದೆ.
ಗಂಡು ಮತ್ತು ಹೆಣ್ಣು ಮಕ್ಕಳಿಗೆ ಹೊಸ ಕೂಲಿ ಅನ್ವಯವಾಗಲಿದೆ. ಈ ಕೂಲಿ ಹೆಚ್ಚಳದಿಂದ ರಾಜ್ಯದಲ್ಲಿ ಪ್ರಸ್ತುತ ಇರುವ 45 ಲಕ್ಷಕ್ಕೂ ಅಧಿಕ ಜಾಬ್ ಕಾರ್ಡ್ ಇದ್ದವರಿಗೆ ಅನುಕೂಲವಾಗಲಿದೆ. ದುಡಿಯುವ ಪ್ರತಿ ಕೈಗೆ ವರ್ಷದಲ್ಲಿ 100 ದಿನ ಕೆಲಸ ಕೊಡಬೇಕು ಎಂಬುದು ನರೇಗಾ ಯೋಜನೆಯ ಉದ್ದೇಶ. ಅದರಂತೆ ಜಾಬ್ ಕಾರ್ಡ್ ಹೊಂದಿದವರು 100 ದಿನ ಕೆಲಸ ಮಾಡಿದರೆ ದಿನಕ್ಕೆ 370 ರೂ.ಗಳಂತೆ ವರ್ಷದಲ್ಲಿ 37,00 ರೂ. ಗಳಿಸಬಹುದು. ಇದರಿಂದ ಗ್ರಾಮೀಣ ಭಾಗದ ಬಡವರಿಗೆ ಅನುಕೂಲವಾಗಲಿದೆ.
ಮನರೇಗಾ ಕಾಯ್ದೆಯಡಿ ಕೇಂದ್ರ ಸರಕಾರ ರಾಜ್ಯವಾರು ಕೂಲಿ ನಿಗದಿಪಡಿಸುತ್ತದೆ. ಆಯಾ ರಾಜ್ಯಗಳ ಕೃಷಿ ಕೂಲಿ ಹಾಗೂ ಹಾಲಿ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿ ಕೂಲಿ ದರದ ಏರಿಕೆ ಮೊತ್ತದ ನಿರ್ಣಯ ಮಾಡಲಾಗುತ್ತದೆ. ಅದರಂತೆ ಹರಿಯಾಣದಲ್ಲಿ ಗರಿಷ್ಠ 400 ರೂ. ಕೂಲಿ ನಿಗದಿಯಾಗಿದ್ದರೆ, ಅರುಣಾಚಲಪ್ರದೇಶ ಮತ್ತು ನಾಗಲ್ಯಾಂಡ್ನಲ್ಲಿ ಕನಿಷ್ಠ ತಲಾ 241 ರೂ. ಕೂಲಿ ನಿಗದಿಯಾಗಿದೆ.
ಕರ್ನಾಟಕದಲ್ಲಿ ಒಟ್ಟು 80.93 ಲಕ್ಷ ಕುಟುಂಬಗಳು ನರೇಗಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, 45.32 ಲಕ್ಷ ಕುಟುಂಬಗಳು ಸಕ್ರಿಯವಾಗಿವೆ. 2024-25ರಲ್ಲಿ 28.7 ಲಕ್ಷ ಕುಟುಂಬಗಳ 50.93 ಲಕ್ಷ ಜನ ನರೇಗಾದಡಿ ಕೆಲಸ ಮಾಡಿದ್ದಾರೆ. ಇದರಲ್ಲಿ 37 ಲಕ್ಷ ಕುಟುಂಬಗಳು 100 ದಿನ ಕೆಲಸ ಮಾಡಿವೆ. 2.89 ಲಕ್ಷ ಕುಟುಂಬಗಳು ಸರಾಸರಿ 81ರಿಂದ 91ದಿನಗಳು ಕೆಲಸ ಮಾಡಿವೆ.