ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ಶುಭಾರಂಭ ಮಾಡಿದೆ. ಗುರುವಾರ ದುಬೈನಲ್ಲಿ ನಡೆದ ಎ ಗುಂಪಿನ ತನ್ನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 6 ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಭಾರತ ಪರ ಶುಭ್ಮನ್ ಗಿಲ್ ಬ್ಯಾಟಿಂಗ್ನಲ್ಲಿ ಅಜೇಯ ಶತಕ (101 ರನ್) ಹಾಗೂ ಬೌಲಿಂಗ್ನಲ್ಲಿ ಮೊಹಮ್ಮದ್ ಶಮಿ 5 ವಿಕೆಟ್ ಪಡೆದು ಮಿಂಚಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ತೌಹಿದ್ ಹೃದೋಯ್ (100) ಶತಕದ ಹೊರತಾಗಿಯೂ 49.4 ಓವರ್ಗಳಲ್ಲಿ 228 ರನ್ಗಳಿಗೆ ಆಲ್ಔಟ್ ಆಯಿತು. ಐದು ವಿಕೆಟ್ ಗಳಿಸಿದ ಮೊಹಮ್ಮದ್ ಶಮಿ ಬಾಂಗ್ಲಾ ಹೆಚ್ಚು ರನ್ ಗಳಿಸದಂತೆ ನೋಡಿಕೊಂಡಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ಉತ್ತಮ ಆರಂಭದ ಹೊರತಾಗಿಯೂ ಮಧ್ಯದಲ್ಲಿ ಆತಂಕಕ್ಕೆ ಒಳಗಾಯಿತು. ಆದರೆ ಅಮೋಘ ಶತಕದ ಗಳಿಸಿದ ಶುಭಮನ್ ಗಿಲ್ (101*) ನೆರವಿನಿಂದ ಭಾರತ 46.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಭಾರತ ಪರ ನಾಯಕ ರೋಹಿತ್ ಶರ್ಮಾ 41, ವಿರಾಟ್ ಕೊಹ್ಲಿ 22, ಶ್ರೇಯಸ್ ಅಯ್ಯರ್ 15 ಹಾಗೂ ಅಕ್ಷರ್ ಪಟೇಲ್ 8 ರನ್ ಗಳಿಸಿದರು. ಕೆ.ಎಲ್.ರಾಹುಲ್ ಅಜೇಯ 41 ರನ್ ಬಾರಿಸಿ ಐದನೇ ವಿಕೆಟ್ಗೆ ಅತ್ಯಗತ್ಯ ಜತೆಯಾಟ ಆಡುವ ಮೂಲಕ ಗೆಲುವಿನ ದಡ ಮುಟ್ಟಿಸಿದರು. ಗಿಲ್ ಅವರಿಗೆ ಇದು 8ನೇ ಶತಕವಾಗಿದೆ. ಆ ಮೂಲಕ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಸಾಬೀತುಪಡಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಭಾರತೀಯ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಹರ್ಷೀತ್ ರಾಣಾ ಆರಂಭದಲ್ಲೇ ಬಲವಾದ ಹೊಡೆತ ನೀಡಿದರು.
ಆರಂಭಿಕ ಸೌಮ್ಯ ಸರ್ಕಾರ್ ಹಾಗೂ ನಾಯಕ ನಜ್ಮುಲ್ ಹುಸೇನ್ ಶಾಂತೊ ಅವರನ್ನು ಶೂನ್ಯಕ್ಕೆ ಹೊರದಬ್ಬಿದರು. ದಾಳಿಗಿಳಿದ ಅಕ್ಷರ್ ಪಟೇಲ್ ಡಬಲ್ ಆಘಾತ ನೀಡಿದರು. ತನ್ಜೀದ್ ಹಸನ್ (25) ಹಾಗೂ ಮುಶ್ಫೀಕರ್ ರಹೀಮ್ (0) ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಿಲ್ಲ. ಪರಿಣಾಮ 8.3 ಓವರ್ಗಳಲ್ಲಿ 35 ರನ್ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡಿತು. ಜಾಕರ್ ಅಲಿ, ತೌಹಿದ್ ಹೃದೋಯ್ ಅವರೊಂದಿಗೆ ಸೇರಿಕೊಂಡು ತಂಡವನ್ನು ನಿಧಾನವಾಗಿ ಮುನ್ನಡೆಸಿದರು. ಹೃದೋಯ್ ಹಾಗೂ ಜಾಕರ್ ಆರನೇ ವಿಕೆಟ್ಗೆ 154 ರನ್ಗಳ ಜೊತೆಯಾಟ ಕಟ್ಟಿದರು. ಜಾಕರ್ 114 ಎಸೆತಗಳಲ್ಲಿ 68 ರನ್ (4 ಬೌಂಡರಿ) ಗಳಿಸಿದರು.

ಸ್ನಾಯು ಸೆಳೆತದ ನಡುವೆಯೂ ದಿಟ್ಟ ಹೋರಾಟ ತೋರಿದ ಹೃದೋಯ್ ಶತಕದ ಸಾಧನೆ ಮಾಡಿದರು. ಹೃದೋಯ್ 118 ಎಸೆತಗಳಲ್ಲಿ 100 ರನ್ (6 ಬೌಂಡರಿ, 2 ಸಿಕ್ಸರ್) ಗಳಿಸಿದರು. ಭಾರತದ ಪರ ಶಮಿ 53 ರ್ ನೀಡಿ ಐದು ವಿಕೆಟ್ ಗಳಿಸಿದರು. ಹರ್ಷಿತ್ ರಾಣಾ ಮೂರು ಮತ್ತು ಅಕ್ಷರ್ ಪಟೇಲ್ ಎರಡು ವಿಕೆಟ್ ಗಳಿಸಿ ಮಿಂಚಿದರು.