ನವದೆಹಲಿ : ಭೂಸೇನೆಯ ನಿವೃತ್ತ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಆತ್ಮಕಥೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ (Four Stars of Destiny) ಕುರಿತಾದ ವಿವಾದವು ಇದೀಗ ರಾಜಕೀಯ ಮತ್ತು ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ. ಈ ಪುಸ್ತಕದ ಅಪ್ರಕಟಿತ ಪ್ರತಿಗಳು ಪಿಡಿಎಫ್ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅನಧಿಕೃತವಾಗಿ ಹರಿದಾಡುತ್ತಿವೆ ಎಂಬ ಆರೋಪಗಳ ಬೆನ್ನಲ್ಲೇ, ಪುಸ್ತಕದ ಅಧಿಕೃತ ಪ್ರಕಾಶನ ಸಂಸ್ಥೆಯಾದ ‘ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ‘ ಇಂದು ಮಹತ್ವದ ಸ್ಪಷ್ಟನೆಯನ್ನು ನೀಡಿದೆ.
ಪುಸ್ತಕದ ಹಕ್ಕುಸ್ವಾಮ್ಯದ ಕುರಿತು ಪ್ರಕಟಣೆ ಹೊರಡಿಸಿರುವ ಪೆಂಗ್ವಿನ್ ಸಂಸ್ಥೆಯು, ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ಏಕೈಕ ಪ್ರಕಾಶನ ಹಕ್ಕನ್ನು ತಾನು ಹೊಂದಿರುವುದಾಗಿ ತಿಳಿಸಿದೆ. ಪ್ರಸ್ತುತ ಡಿಜಿಟಲ್ ಅಥವಾ ಪಿಡಿಎಫ್ ರೂಪದಲ್ಲಿ ಹರಿದಾಡುತ್ತಿರುವ ಯಾವುದೇ ಪ್ರತಿಗಳು ಅಧಿಕೃತವಲ್ಲ ಮತ್ತು ಸಂಸ್ಥೆಯು ಇದುವರೆಗೆ ಈ ಪುಸ್ತಕವನ್ನು ಯಾವುದೇ ರೂಪದಲ್ಲಿ (ಮುದ್ರಿತ ಅಥವಾ ಡಿಜಿಟಲ್) ಬಿಡುಗಡೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಅನಧಿಕೃತವಾಗಿ ಪುಸ್ತಕದ ಭಾಗಗಳನ್ನು ಹಂಚಿಕೊಳ್ಳುವುದು ಹಕ್ಕುಸ್ವಾಮ್ಯ ಉಲ್ಲಂಘನೆಯಾಗಲಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಸ್ಥೆಯು ಎಚ್ಚರಿಕೆ ನೀಡಿದೆ.
ಸಂಸತ್ತಿನಲ್ಲಿ ಮೊಳಗಿದ ಪ್ರತಿಭಟನೆಯ ಧ್ವನಿ
ಈ ವಿವಾದವು ಕೇವಲ ಸಾಹಿತ್ಯ ಲೋಕಕ್ಕೆ ಸೀಮಿತವಾಗದೆ ಸಂಸತ್ತಿನವರೆಗೂ ತಲುಪಿದೆ. ಕಳೆದ ವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನ ಆವರಣದಲ್ಲಿ ಪುಸ್ತಕದ ಪ್ರತಿಯೊಂದನ್ನು ಪ್ರದರ್ಶಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. 2020ರ ಭಾರತ-ಚೀನಾ ಗಡಿ ಸಂಘರ್ಷದ ಕುರಿತು ಮಾಜಿ ಸೇನಾ ಮುಖ್ಯಸ್ಥರು ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದ ರಾಹುಲ್ ಗಾಂಧಿ, ಲೋಕಸಭೆಯಲ್ಲಿ ಇದರ ಭಾಗಗಳನ್ನು ಪ್ರಸ್ತಾಪಿಸಲು ಯತ್ನಿಸಿದ್ದರು. ಆದರೆ, ಪುಸ್ತಕವು ಅಧಿಕೃತವಾಗಿ ಬಿಡುಗಡೆಯಾಗಿಲ್ಲ ಎಂಬ ಕಾರಣ ನೀಡಿ ಸಭಾಧ್ಯಕ್ಷರು ಇದಕ್ಕೆ ಅನುಮತಿ ನಿರಾಕರಿಸಿದ್ದರು.
ರಾಜಕೀಯ ಕೆಸರೆರಚಾಟ
ಪುಸ್ತಕದ ವಿಚಾರವಾಗಿ ಸಂಸತ್ತಿನಲ್ಲಿ ನಡೆದ ಗದ್ದಲವು ತಾರಕಕ್ಕೇರಿದ್ದು, ಅಶಿಸ್ತಿನ ವರ್ತನೆಯ ಆರೋಪದ ಮೇಲೆ ಕಾಂಗ್ರೆಸ್ನ ಏಳು ಮತ್ತು ಸಿಪಿಎಂನ ಒಬ್ಬರು ಸೇರಿದಂತೆ ಒಟ್ಟು 8 ಸಂಸದರನ್ನು ಬಜೆಟ್ ಅಧಿವೇಶನದ ಅಂತ್ಯದವರೆಗೆ ಅಮಾನತುಗೊಳಿಸಲಾಗಿದೆ. ಈ ಕ್ರಮವನ್ನು “ಪ್ರಜಾಪ್ರಭುತ್ವದ ಮೇಲಿನ ಕಪ್ಪುಚುಕ್ಕೆ” ಎಂದು ಕರೆದಿರುವ ರಾಹುಲ್ ಗಾಂಧಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯದ ಬಗ್ಗೆ ಮಾತನಾಡಲು ವಿರೋಧ ಪಕ್ಷದ ನಾಯಕನಿಗೆ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ ಪೊಲೀಸರಿಂದ ಎಫ್ಐಆರ್
ಅನಧಿಕೃತವಾಗಿ ಹಸ್ತಪ್ರತಿ ಸೋರಿಕೆಯಾಗಿರುವ ಕುರಿತು ದೆಹಲಿ ಪೊಲೀಸರು ಈಗಾಗಲೇ ಎಫ್ಐಆರ್ ದಾಖಲಿಸಿಕೊಂಡಿದ್ದು, ವಿಶೇಷ ಘಟಕವು ತನಿಖೆ ಆರಂಭಿಸಿದೆ. ಇನ್ನೂ ಬಿಡುಗಡೆಯಾಗದ ಮತ್ತು ಸರ್ಕಾರದ ಅನುಮೋದನೆಗೆ ಬಾಕಿ ಇರುವ ಪುಸ್ತಕದ ವಿಷಯಗಳು ಸಾರ್ವಜನಿಕವಾಗಿ ಹೇಗೆ ಸೋರಿಕೆಯಾದವು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಒಂದು ಕಡೆ ಪ್ರಕಾಶನ ಹಕ್ಕು, ಇನ್ನೊಂದು ಕಡೆ ಸಂಸದೀಯ ಹಕ್ಕುಬಾಧ್ಯತೆ ಹಾಗೂ ರಾಷ್ಟ್ರೀಯ ಭದ್ರತೆಯ ವಿಷಯಗಳ ನಡುವೆ ನರವಣೆ ಅವರ ಈ ಪುಸ್ತಕವು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಹಿಂದೂ ಧರ್ಮಕ್ಕೆ ಮತಾಂತರವಾಗ್ತಾರಾ ನಿಕ್ ಜೋನಾಸ್? ಪುತ್ರಿಗೂ ಹಿಂದೂ ಸಂಸ್ಕಾರ ಕಲಿಸುತ್ತಿರುವ ಪ್ರಿಯಾಂಕಾ ಚೋಪ್ರಾ ದಂಪತಿ!



















