ಬೆಂಗಳೂರು: ಕೊಲೆ ಮಾಡಲು ಬಂದಿದ್ದ ರೌಡಶೀಟರ್ ನನ್ನೇ ಕೊಲೆಗೈದಿದ್ದ ಗ್ಯಾಂಗ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೂನ್ 10 ರಂದು ಕಾಡುಗೋಡಿಯಲ್ಲಿ ನಡೆದಿದ್ದ ನೇಪಾಳಿ ಅಲಿಯಾಸ್ ಪುನೀತ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದೆ. ಕಾಡುಗೋಡಿ ಠಾಣಾ ವ್ಯಾಪ್ತಿಯ ವಿಜಯಲಕ್ಷ್ಮಿ ಕಾಲೋನಿಯಲ್ಲಿ ಕೊಲೆ ಪ್ರಕರಣ ನಡೆದಿತ್ತು. ಪುನೀತ್ ಅಲಿಯಾಸ್ ನೇಪಾಳಿ ಹತ್ಯೆ ಕೇಸ್ ನಲ್ಲಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮಹೇಶ್, ಶ್ರೀಕಾಂತ್, ರಾಜೇಶ್ ಮತ್ತು ಸುಮಂತ್ ಬಂಧಿತ ಆರೋಪಿಗಳು. ಕೊಲೆಯಾಗಿರುವ ಪುನೀತ್, ಆರೋಪಿ ಮಹೇಶ್ ಬಳಿ 40 ಸಾವಿರಕ್ಕೆ ಬೈಕ್ ಖರೀದಿ ಮಾಡಿದ್ದ. ಆದರೆ, ಹಣ ನೀಡದೆ ಸತಾಯಿಸುತ್ತಿದ್ದ ಎನ್ನಲಾಗಿದೆ. ಕೇಳಿದಾಗ ಹಣ ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲ, ದುಡ್ಡು ನೀನೇ ಕೊಡಬೇಕು. ಇಲ್ಲದಿದ್ದರೆ ನಿನ್ನ ಮಗಳನ್ನು ಕಿಡ್ನಾಪ್ ಮಾಡ್ತೀವಿ ಅಂತಾ ಪುನೀತ್ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಆನಂತರ ಮಹೇಶ್, ರೌಡಿ ಶ್ರೀಕಾಂತ್ ಜೊತೆ ಚರ್ಚೆ ನಡೆಸಿ ಪುನೀತ್ ಜೊತೆ ರಾಜಿಯಾಗಲು ಯತ್ನಿಸಿದ್ದ. ಆದರೂ ಪುನೀತ್ ಸುಮ್ಮನಾಗಿರಲಿಲ್ಲ. ಬದಲಾಗಿ ಶ್ರೀಕಾಂತ್ ಮತ್ತು ಮಹೇಶ್ ಗೆ ವಾರ್ನಿಂಗ್ ಕೊಟ್ಟು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಕಳೆದ ಎರಡು ದಿನಗಳ ಹಿಂದೆ ಪುನೀತ್ ತನ್ನ ಸಹಚರ ಅರ್ಬಾಜ್ ಜೊತೆ ಮಹೇಶ್ ಮೇಲೆ ಹಲ್ಲೆ ನಡೆಸಲು ಬಂದಿದ್ದ. ಮನೆಯ ಮುಂದೆಯೇ ಮಹೇಶ್ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದ. ಆ ವೇಳೆ ಮಹೇಶ್ ಮಚ್ಚು ಕಸಿದುಕೊಂಡು ಅರ್ಬಾಜ್ ಮೇಲೆಯೇ ಮಚ್ಚು ಬೀಸಿದ್ದ. ಆಗ ಸಣ್ಣಪುಟ್ಟ ಗಾಯಗಳಿಂದ ಅರ್ಬಾಜ್ ಓಡಿ ಹೋಗಿದ್ದ. ಆದರೆ, ಮಹೇಶ್ ಕೈಗೆ ರೌಡಿ ಪುನೀತ್ ಸಿಕ್ಕಿದ್ದು, ನಡು ರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಗೆ ಸಾಥ್ ನೀಡಿದ್ದ ಶ್ರಿಕಾಂತ್, ರಾಜೇಶ್, ಸುಮಂತ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.