ಬೆಂಗಳೂರು: ಅಪಘಾತವಾದಂತೆ ನಟಿಸಿ, ಸವಾರರಿಂದ ಹಣ ವಸೂಲಿ ಮಾಡುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಈಗ ಇಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಅಪಘಾತ ಮಾಡಿರುವುದಾಗಿ ನಂಬಿಸಿ ವೃದ್ಧ ವ್ಯಕ್ತಿಯಿಂದ ಹಣ ವಸೂಲಿ ಮಾಡಿರುವ ಘಟನೆ ನಡೆದಿದೆ.
ಈ ಹಿನ್ನೆಲೆಯಲ್ಲಿ ಶಾಂತಿನಗರದ ಭಂಗಿಯಪ್ಪ ಗಾರ್ಡನ್ ನಿವಾಸಿ ಚಂದ್ರಶೇಖರ್ ಎಂಬುವವರು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಂದ್ರಶೇಖರ್ ಎಂಜಿ ರಸ್ತೆಯಲ್ಲಿ ಕಾರಿನಲ್ಲಿ ಬರುವಾಗ ಹಿಂಬದಿಯಿಂದ ಬಂದಿದ್ದ ಜಮೀರ್ ಎಂಬಾತ ನಿಮ್ಮ ಕಾರು ನನ್ನ ಸ್ಕೂಟರ್ ಗೆ ತಾಗಿದೆ ಎಂದು ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ನಿಮ್ಮ ಕಾರು ಟಚ್ ಆಗಿರುವುದರಿಂದಾಗಿ ನನ್ನ ತಮ್ಮನಿಗೆ ಗಾಯವಾಗಿದೆ. ಆಸ್ಪತ್ರೆಗೆ ಸೇರಿಸಲಾಗಿದೆ ಒಂದು ಲಕ್ಷ ರೂ. ಹಣ ನೀಡಿ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಆನಂತರ ಚಂದ್ರಶೇಖರ್ ಬಳಿ ಕಾರಿನ ಡ್ಯಾಶ್ ಬೋರ್ಡ್ ನಲ್ಲಿದ್ದ 2500 ರೂ . ನಗದು ಹಾಗು ATM ನಲ್ಲಿ ತೆಗೆದಿದ್ದ 3000 ರೂ. ಹಣ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆರೋಪಿ ಜಮೀರ್ ಇದೇ ರೀತಿ ಹಲವರನ್ನು ವಂಚಿಸಿದ್ದಾನೆ ಎನ್ನಲಾಗಿದೆ.
ಸದ್ಯ ಆತನ ವಿರುದ್ಧ ಬೆಂಗಳೂರಿನಲ್ಲಿ 16 ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಇಂತಹ ಒಂದು ಪ್ರಕರಣದಿಂದ ಜೈಲು ಸೇರಿ, ಮರಳಿ ಹೊರ ಬಂದು ಅದೇ ಚಾಳಿ ಮುಂದುವರೆಸಿದ್ದಾನೆ ಎನ್ನಲಾಗಿದೆ. ಅಲ್ಲದೇ, ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಜಾಮೀನು ಪಡೆದು ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡಿದ್ದಾನೆ.