ಬೆಂಗಳೂರು: ಪೊಲೀಸ್ ಇಲಾಖೆಗೆ ನಕಲಿ ದಾಖಲೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಮಾನತಾಗಿದ್ದಾರೆ.
ಬ್ಯಾಡರಹಳ್ಳಿ ಠಾಣೆ ಸಬ್ಇನ್ಸ್ಪೆಕ್ಟರ್ (PSI) ಕಾಶಿಲಿಂಗೇಗೌಡ ಎಂಬುವವರನ್ನು ಅಮಾನತು ಮಾಡಿ, ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶಿಲಿಂಗೇಗೌಡ ಜಾಮೀನು ಪಡೆದಿದ್ದರು. ಈಗ ಅವರನ್ನು ಅಮಾನತು ಮಾಡಲಾಗಿದೆ.
ನಕಲಿ ಜನ್ಮ ದಿನಾಂಕ ಹೊಂದಿರುವ ದಾಖಲೆಯನ್ನು ನೀಡಿ ಕೆಲಸ ಪಡೆದುಕೊಂಡ ಆರೋಪದಡಿ ಸಬ್ ಇನ್ಸ್ಪೆಕ್ಟರ್ ಕಾಶಿಲಿಂಗೇಗೌಡ ವಿರುದ್ಧ ಬೆಂಗಳೂರು ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಅಧಿಕಾರಿ ಎಸ್. ಟಿ. ಚಂದ್ರಶೇಖರ್ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಾಗಿತ್ತು.
ಪಿಎಸ್ ಐ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ವಯಸ್ಸು 30 ವರ್ಷ ಮೀರಿರಬಾರದೆಂದು ಸರ್ಕಾರದ ನಿಯಮವಿದೆ. ಆದರೆ, ಅರ್ಹತೆ ಇಲ್ಲದಿದ್ದರೂ ಕಾಶಿಲಿಂಗೇಗೌಡ ತಮ್ಮ ಜನ್ಮ ದಿನಾಂಕವನ್ನು 1988 ಏಪ್ರಿಲ್ 15 ಎಂದು ನೀಡುವ ಮೂಲಕ 2017-18ರ ಸಾಲಿನ ಸಬ್ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ಆ ವೇಳೆ ನೇಮಕವಾಗಿದ್ದರು. ಸದ್ಯ ಈ ಪ್ರಕರಣದಲ್ಲಿ ಈಗ ಅಮಾನತು ಆಗಿದ್ದಾರೆ.