ಹೈದರಾಬಾದ್: ಹೈದರಾಬಾದ್ನ ಐತಿಹಾಸಿಕ ಚಾರ್ಮಿನಾರ್ ಪಕ್ಕದಲ್ಲೇ ಇರುವ ಕಟ್ಟಡದಲ್ಲಿ ಇಂದು ಮುಂಜಾನೆ ಸಂಭವಿಸಿದ ಅಗ್ನಿ ದುರಂತದಲ್ಲಿ ಮಕ್ಕಳೂ ಸೇರಿದಂತೆ ಕನಿಷ್ಠ 17 ಮಂದಿ ಸಾವಿಗೀಡಾಗಿದ್ದಾರೆ. ಇನ್ನೂ ಹಲವರು ಕಟ್ಟಡದೊಳಗೆ ಸಿಲುಕಿದ್ದು, ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಈ ದುರ್ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಆದರೆ, ಶಾರ್ಟ್ ಸರ್ಕ್ಯೂಟ್ನಿಂದ ದುರಂತ ಸಂಭವಿಸಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಬೆಳಗ್ಗೆ ಸುಮಾರು 6.30ರ ವೇಳೆಗೆ ಅಗ್ನಿಶಾಮಕ ದಳಕ್ಕೆ ಅಗ್ನಿ ದುರಂತ ಕುರಿತು ಕರೆ ಬಂದಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ (ಹೈದರಾಬಾದ್ ಓಲ್ಡ್ ಸಿಟಿಯಲ್ಲಿರುವ ಗುಲ್ಜಾರ್ ಹೌಸ್) ಧಾವಿಸಿದ್ದರು. ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಮಾತನಾಡಿ, “ಘಟನೆ ಬಗ್ಗೆ ತಿಳಿದು ಬಹಳ ಬೇಸರವಾಗಿದೆ. ಕೇಂದ್ರ ಸರ್ಕಾರದೊಂದಿಗೆ ಮತ್ತು ಪ್ರಧಾನಿ ಮೋದಿಯವರೊಂದಿಗೆ ಮಾತುಕತೆ ನಡೆಸಿ, ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸುವ ಕುರಿತು ಚರ್ಚಿಸುತ್ತೇನೆ” ಎಂದಿದ್ದಾರೆ.

ಮೃತ 17 ಮಂದಿಯ ಪೈಕಿ ಕೆಲವರ ಗುರುತು ಪತ್ತೆಯಾಗಿದ್ದು, ಅವರನ್ನು ಅಭಿಷೇಕ್ ಮೋದಿ(30), ರಾಜೇಂದರ್ ಕುಮಾರ್(67), ಮುನ್ನಿಬಾಯಿ(72), ಸುಮಿತ್ರಾ(65), ಇರಾಜ್(2), ಅರುಷ್ ಜೈನ್(17), ಹರ್ಷಾಲಿ ಗುಪ್ತಾ(7) ಮತ್ತು ಶೀತಜ್ ಜೈನ್(37) ಗುರುತಿಸಲಾಗಿದೆ. ಈಗಾಗಲೇ 15-20 ಜನರನ್ನು ರಕ್ಷಣಾ ತಂಡವು ರಕ್ಷಿಸಿದೆ.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕೂಡಲೇ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗಾಯಗೊಂಡ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡುವಂತೆಯೂ ಸೂಚಿಸಿದ್ದೇನೆ ಎಂದಿದ್ದಾರೆ. ಅಲ್ಲದೇ, ಐಜಿ ನಾಗಿರೆಡ್ಡಿ ಅವರಿಗೆ ಸ್ಥಳದಲ್ಲೇ ಇದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ.