ಅಮರಾವತಿ : ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಜಲಪಾತವೊಂದರಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಮೂವರು ಯುವತಿಯರು ನೀರುಪಾಲು ಆಗಿರುವ ದಾರುಣ ಘಟನೆ ನಡೆದಿದೆ.
ಹುಕುಂಪೇಟ ಮಂಡಲದ ಜಾಂಬುವಲಸ ಗ್ರಾಮದ ನಾಲ್ವರು ಯುವತಿಯರು ಗುರುವಾರ ವಿಶಾಖಪಟ್ಟಣಂ ಸಮೀಪದ ಅನಂತಗಿರಿ ಬೆಟ್ಟಗಳಲ್ಲಿರುವ ಅರಣ್ಯ ಪ್ರದೇಶದ ‘ಮುಲಗುಮ್ಮಿ’ ಜಲಪಾತಕ್ಕೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ ಜಲಪಾತದ ಸಮೀಪವಿದ್ದ ಪಾಚಿ ಕಟ್ಟಿದ, ಜಾರುವ ಬಂಡೆಗಳ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಫೋಟೋ ತೆಗೆಯುವ ಭರದಲ್ಲಿ ಆಯತಪ್ಪಿ ಕಾಲು ಜಾರಿದ ಪರಿಣಾಮ ನಾಲ್ವರೂ ನೀರಿನಲ್ಲಿ ಬಿದ್ದಿದ್ದಾರೆ. ದುರದೃಷ್ಟವಶಾತ್, ಯಾರಿಗೂ ಈಜಲು ಬರುತ್ತಿರಲಿಲ್ಲ. ಹೀಗಾಗಿ ನೀರಿನ ತೀವ್ರ ಸೆಳೆತಕ್ಕೆ ಸಿಲುಕಿ ಅಪಾಯಕ್ಕೆ ಸಿಲುಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓರ್ವಳ ರಕ್ಷಣೆ, ಮೂವರು ಜಲಸಮಾಧಿ
ನೀರಿನಲ್ಲಿ ಕೊಚ್ಚಿಹೋಗುವಾಗ ಯುವತಿಯರು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಅವರ ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ತಕ್ಷಣವೇ ಕಾರ್ಯಾಚರಣೆ ನಡೆಸಿ ಓರ್ವ ಯುವತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಉಳಿದ ಮೂವರು ಯುವತಿಯರಾದ ತ್ರಿಶಾ (17), ರತ್ನಕುಮಾರಿ (16) ಮತ್ತು ಪವಿತ್ರಾ (16) ನೀರಿನಲ್ಲಿ ಕೊಚ್ಚಿಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡವು ಕಾರ್ಯಾಚರಣೆ ನಡೆಸಿ ಮೂವರ ಮೃತದೇಹಗಳನ್ನು ಹೊರತೆಗೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
ಪ್ರವಾಸಿಗರಿಗೆ ಪೊಲೀಸರ ಎಚ್ಚರಿಕೆ
ಮೇಲ್ನೋಟಕ್ಕೆ ಈ ಜಲಪಾತವು ಚಿಕ್ಕದಾಗಿ ಕಂಡರೂ, ಅಲ್ಲಿನ ಬಂಡೆಗಳು ಬಹಳ ಜಾರುವಂಥದ್ದು, ನೀರಿನ ಒಳಹರಿವು ಕೂಡ ಬಹಳ ಪ್ರಬಲವಾಗಿರುತ್ತದೆ, ಹೀಗಾಗಿ ಇದು ಪ್ರವಾಸಿಗರ ಪಾಲಿಗೆ ಅತ್ಯಂತ ಅಪಾಯಕಾರಿ ತಾಣವಾಗಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಪ್ರವಾಸಿಗರು, ಅದರಲ್ಲೂ ವಿಶೇಷವಾಗಿ ಯುವಜನತೆ, ಇಂತಹ ನಿರ್ಜನ ಪ್ರದೇಶಗಳಲ್ಲಿ ಜಲಮೂಲಗಳ ಹತ್ತಿರ ತೆರಳಬಾರದು ಮತ್ತು ಜೀವವನ್ನೇ ಪಣಕ್ಕಿಟ್ಟು ಅಪಾಯಕಾರಿ ಸನ್ನಿವೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸಕ್ಕೆ ಕೈಹಾಕಬಾರದು ಎಂದು ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಜಗಳ ಬಿಡಿಸಲು ಹೋದ ಗರ್ಭಿಣಿ ಮೇಲೆ ಹಲ್ಲೆ – ಹೊಟ್ಟೆಯಲ್ಲಿದ್ದ ಅವಳಿ ಶಿಶುಗಳು ಸಾವು



















