ಶಿವಮೊಗ್ಗ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ (Pahalgam Terror Attack) ಶಿವಮೊಗ್ಗದ (Shivamogga) ಮಂಜುನಾಥ್ ಸಾವನ್ನಪ್ಪಿದ್ದು, ಇಡೀ ರಾಜ್ಯ ಕಂಬನಿ ಮಿಡಿದಿದೆ.
ಮಂಜುನಾಥ್ ಪುತ್ರ ದ್ವಿತೀಯ ಪಿಯುಸಿಯಲ್ಲಿ ಶೇ. 97ರಷ್ಟು ಅಂಕ ಪಡೆದ ಹಿನ್ನೆಲೆಯಲ್ಲಿ ಸಂಭ್ರಮಾಚಾರಣೆಗೆಂದು ಮಂಜುನಾಥ್ ತಮ್ಮ ಪತ್ನಿ, ಮಗನ ಜೊತೆ ಕಾಶ್ಮೀರಕ್ಕೆ ಹೋಗಿದ್ದರು ಎನ್ನಲಾಗಿದೆ.
ಮೃತ ಮಂಜುನಾಥ್ ತಾಯಿ, ಪತ್ನಿ, ಪುತ್ರನೊಂದಿಗೆ ನಗರದ ವಿಜಯನಗರ ಬಡಾವಣೆಯಲ್ಲಿ ವಾಸವಾಗಿದ್ದರು. ಕಳೆದ ಐದು ದಿನಗಳ ಹಿಂದೆ ಮಂಜುನಾಥ್ ತನ್ನ ಕುಟುಂಬದೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಮಂಜುನಾಥ್ ಮೊದಲು ರಾಜಸ್ಥಾನ್ ಪ್ರವಾಸಕ್ಕೆ ಮುಂದಾಗಿದ್ದರು ಎನ್ನಲಾಗಿತ್ತು. ಆದರೆ, ನಂತರ ಅವರೇ ಯೋಜನೆ ಬದಲಾಯಿಸಿ ಕಾಶ್ಮೀರಕ್ಕೆ ತೆರಳಿದ್ದರು.
ದೆಹಲಿಯ ಇಂಡಿಯನ್ ಟೂರಿಸ್ಟ್ ಸಂಸ್ಥೆಯಿಂದ ಟೂರ್ ಆಯೋಜನೆಗೊಂಡಿತ್ತು. ಮಂಜುನಾಥ್ ಆನ್ಲೈನ್ನಲ್ಲಿ ಟೂರ್ ಆಯೋಜಿಸಿಕೊಂಡಿದ್ದರು. ದುರಾದೃಷ್ಟವಶಾತ್ ಮಂಜುನಾಥ್ ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರಿಂದ ಹತ್ಯೆಯಾಗಿದ್ದಾರೆ. ಮಂಜುನಾಥ್ ಅವರ ಧರ್ಮ ಕೇಳಿ ಹತ್ಯೆ ಮಾಡಿದ್ದಾರೆ. ಜೊತೆಗಿದ್ದ ಪತ್ನಿ ಪಲ್ಲವಿ ಹಾಗೂ ಪುತ್ರನನ್ನು ಮೂವರು ಭಯೋತ್ಪಾದಕರು ಬಿಟ್ಟಿದ್ದಾರೆ. ‘ಜಾವೋ ಮೋದಿ ಕೋ ಬೋಲೋ’ ಎಂದು ಹೇಳಿ ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ.