ಬೆಂಗಳೂರು: ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕವಾಗಬೇಕು ಎಂದು ಹೇಳಿಕೆ ನೀಡಿದ್ದ ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ಯೂಟರ್ನ್ ಹೊಡೆದಿದ್ದಾರೆ.
ಸಾಮಾಜಿಕ ಮಾಧ್ಯಮ ಫೇಸ್ ಬುಕ್ ಮೂಲಕ ಸ್ಪಷ್ಟನೆ ನೀಡಿರುವ ಅವರು, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. ನಾನು ಹೇಳಿದ್ದರಲ್ಲಿ ಕೆಲವು ಸತ್ಯಾಂಶಗಳಿವೆ. ಕೆಲವು ಇಲ್ಲದ ವಿಚಾರಗಳನ್ನು ವೈಭವೀಕರಿಸಲಾಗಿದೆ. ಡಿಕೆ ಶಿವಕುಮಾರ್ ಬದಲಾವಣೆ ಮಾಡಿ ಎಂದು ನಾನು ಹೇಳಿಲ್ಲ. ಪಕ್ಷದಲ್ಲಿ ಮುಂದಿನ ಸಂಘಟನೆಯ ದೃಷ್ಟಿಯಿಂದ ಕೆಲವೊಂದು ಬದಲಾವಣೆಗಳನ್ನು ಮಾಡಬೇಕೆಂದು ಸಲಹೆ ನೀಡಿದ್ದೇನಷ್ಟೆ.
ಗೆಂದು ಡಿಕೆ ಶಿವಕುಮಾರ್(DK Sivakumar) ಅವರನ್ನು ಬದಲಾವಣೆ ಮಾಡಿ ಎಂದು ಹೇಳಿಲ್ಲ, ಇಂದೂ ಹೇಳುತ್ತಿಲ್ಲ, ಮುಂದೆಯೂ ಹೇಳುವುದಿಲ್ಲ. ಆದರೆ, ಇವತ್ತಿನ ವೇಗದ ಸ್ಥಿತಿಯಲ್ಲಿ ನಾ ಹೇಳಿರುವುದನ್ನು ಜನ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಹೈಕಮಾಂಡ್ ನಿರ್ಧಾರ ಮಾಡಬೇಕು ಎಂದಿರುವುದನ್ನು ಹೈಲೈಟ್ ಮಾಡಬೇಕಿತ್ತು ಎಂದು ಬರೆದುಕೊಂಡಿದ್ದಾರೆ.
ಹೈಕಮಾಂಡ್ ಮನೊವೊಲಿಸಲು ನಾನು ಮುಂದಿನ ವಾರ ದೆಹಲಿಗೆ ಹೋಗುತ್ತೇನೆ ಎಂದಿರುವುದಾಗಿ ವರದಿಯಾಗಿದೆ. ನಾನು ಹೇಳಿದ್ದು ಹಾಗಲ್ಲ. ಕರ್ನಾಟಕ ಭವನದ ಹೊಸ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ, ವೀಕ್ಷಣೆಗೆ ಹೋಗುತ್ತೇನೆ ಎಂದಿದ್ದೆ. ಅದು ತಪ್ಪಾಗಿ ವರದಿಯಾಗಿದೆ. ಇದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಪಕ್ಷದಲ್ಲಿಯೂ ಸಹಜವಾಗಿಯೇ ಕೆಲವು ಗೊಂದಲಗಳಿಗೆ ಕಾರಣವಾಗಿದೆ.
ನಮ್ಮ ಪಕ್ಷದಲ್ಲಿ ಹಿಂದಿನಷ್ಟು ಸಂಘಟನೆ ಈಗಿಲ್ಲ ಎಂದು ನಾನು ಹೇಳಿದ್ದು ನಿಜ. ಯಾಕೆಂದರೆ 2023ರಲ್ಲಿ ನಮ್ಮಲ್ಲಿ ಒಳ್ಳೆಯ ಸಂಘಟನೆ ಇತ್ತು. ಈಗ ಹಾಗೆ ಇಲ್ಲ. ಇದಕ್ಕೆ ಎಲ್ಲರೂ ಕಾರಣ. ನಾನೂ ಸಹ ಕಾರಣ ಎಂದು ಹೇಳಿದ್ದೇನೆಯೇ ವಿನಹ ಯಾರೊಬ್ಬರನ್ನೂ ಗುರಿಯಾಗಿಸಿ ಹೇಳಿಕೆ ನೀಡಿಲ್ಲ. ಆದರೆ, ನಾನು ಹೇಳಿದ್ದು ಒಂದು ವರದಿಯಾಗಿದ್ದು ಮತ್ತೊಂದಾಗಿದೆ ಎಂದು ಸತೀಶ್ ಜಾರಕಿಹೊಳಿ ಬರೆದುಕೊಂಡಿದ್ದಾರೆ.